

ಬೆಂಗಳೂರು: ಶೋಷಿತ ವರ್ಗದ "ಸಾಮರಸ್ಯ" ಕೆಡಿಸುತ್ತಿರುವ ಬಲಾಢ್ಯರ ಸಂಘ, ದಲಿತರ ಎಲ್ಲಾ ಸಮುದಾಯಗಳೂ ಸಾವಿರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಶೋಷಣೆಗೆ ಒಳಗಾಗಿರುವಂತಹವೇ, ಮನುವಿನ ಚಾತುರ್ವರ್ಣ ವ್ಯವಸ್ಥೆಯಲ್ಲಿ ದಲಿತರೆಲ್ಲರಿಗೂ ಒಂದೇ ಸ್ಥಾನ ನೀಡಲಾಗಿತ್ತು - ಅದು ನಿಕೃಷ್ಟ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ , ಶೋಷಕ ಸಮುದಾಯದಿಂದ ಸಾವಿರಾರು ವರ್ಷಗಳಿಂದ ಅನ್ಯಾಯ, ತಿರಸ್ಕಾರಗಳನ್ನು ಅನುಭವಿಸಿರುವ ದಲಿತ ಸಮುದಾಯವು ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ವಿರಚಿತ ಭಾರತದಲ್ಲಿ ಭರವಸೆಯ ಬದುಕಿನ ಕನಸು ಕಾಣುತ್ತಿರುವಾಗ, ಈಗ ಮತ್ತೊಮ್ಮೆ ಅದೇ ಶೋಷಕರು ಹೊಸ ವೇಷದೊಂದಿಗೆ ದಲಿತರ ಒಗ್ಗಟ್ಟನ್ನು ಒಡೆಯುವ ಹುನ್ನಾರಕ್ಕೆ ಕೈ ಹಾಕಿ ಕೇಕೆಯಲ್ಲಿ ಬೀಗುತ್ತಿದ್ದಾರೆ.
ಚಾತುರ್ವರ್ಣವನ್ನೇ ತನ್ನ ಮುಖ್ಯ ಅಜೆಂಡಾ ಮಾಡಿಕೊಂಡು ಸ್ಥಾಪನೆಯಾದ RSSಗೆ ದಲಿತರ ಬಗ್ಗೆ ಈಗ ಏಕಾಏಕಿ ಇಷ್ಟೊಂದು ಆಸಕ್ತಿ ಹುಟ್ಟಿದ್ದೇಕೆ? RSSನ ಶೋಷಕ ಸಮುದಾಯದ ವ್ಯಕ್ತಿಗಳಿಗೆ ದಲಿತ ಸಮುದಾಯದೊಳಗೆ ಏನು ಕೆಲಸ? ದಲಿತ ಸಹೋದರ ಸಮುದಾಯಗಳೆಲ್ಲವೂ ಒಗ್ಗಟ್ಟಿನಿಂದ, ಬ್ರಾತೃತ್ವದಿಂದ, ಸಾಮರಸ್ಯದಿಂದ ಇದ್ದಾವೆ.
ಈ ಸಾಮರಸ್ಯವನ್ನು ನೋಡಿ ಸಹಿಸಲಾಗದ ನಾಗಪುರದ ಸಂಘ, ತನ್ನ ಏಜೆಂಟ್ ಮುಂದೆ ಬಿಟ್ಟು ದಲಿತರ ಸಾಮರಸ್ಯ ಒಡೆಯುವ ಕೆಲಸ ಮಾಡುತ್ತಿದೆ. RSSಗೆ ದಲಿತರ ಬಗ್ಗೆ ಕಾಳಜಿ ಇದ್ದಿದ್ದೇ ಆದರೆ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ ತನ್ನದೇ ರಾಜಕೀಯ ಬುನಾದಿಯ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಒಳ ಮೀಸಲಾತಿಯ ಬಗ್ಗೆ ಚಕಾರವೇ ಎತ್ತುತ್ತಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.
ಈ ರಾಜ್ಯಗಳಲ್ಲಿ SCP, TSP ಅನುದಾನ ಮೀಸಲಿಡಲು ದನಿ ಎತ್ತುವುದಿಲ್ಲ ಏಕೆ? ಇದೇ RSS ನೂರಾರು ವರ್ಷಗಳಿಂದ ಯಾವೊಬ್ಬ ದಲಿತನನ್ನೂ ಸಂಘದ ಮುಖ್ಯಸ್ಥನನ್ನಾಗಿ ಮಾಡಲಿಲ್ಲ ಏಕೆ? RSS ಗೆ ದಲಿತರ ಬಗ್ಗೆ ಕಾಳಜಿ, ಪ್ರೀತಿ, ಮಮತೆ ಇದ್ದಿದ್ದೇ ಆದರೆ ಈಗಲಾದರೂ ದಲಿತರೊಬ್ಬರನ್ನು ಸಂಘದ ಸರಸಂಘಚಾಲಕನನ್ನಾಗಿ ಮಾಡಲಿ ಎಂದು ಆಗ್ರಹಿಸಿದ್ದಾರೆ.
ಸಹೋದರರೇ, ಎಚ್ಚರ… RSS ದಲಿತರ ಬಗ್ಗೆ ಮಾತಾಡುವುದು, ನರಿಯೊಂದು ಕುರಿಗಳ ಮುಂದೆ ಕರುಣೆಯ ಕಣ್ಣೀರು ಸುರಿಸಿದಂತೆ ಎಂದು ಲೇವಡಿ ಮಾಡಿದ್ದಾರೆ.
Advertisement