

ಬೆಂಗಳೂರು: ಕೇಂದ್ರ ಸರ್ಕಾರ ಜನಸಾಮಾನ್ಯರ ನೋವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ. ಆದಾಯ ಪಾತಳಕ್ಕೆ ಕುಸಿದಿದೆ. ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಗಾಂಧಿನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಉತ್ತರಿಸಿದರು. ಅಡುಗೆ ಅನಿಲ ಸಿಲಿಂಡರ್ ಬೆಲೆ ಹಾಗೂ ಇತರೆ ಅಗತ್ಯ ಸೇವೆಗಳ ಬೆಲೆ ಏರಿಕೆ ಕುರಿತ "ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ಹೊರೆ ಜನಸಾಮಾನ್ಯರ ಮೇಲೆಯೇ ಹೋಗುತ್ತದೆ.
ಇದರಿಂದಾಗಿ ಅನೇಕ ಹೊಟೇಲ್ ಗಳು ಬಂದ್ ಆಗಿವೆ. ಇದರ ಬಗ್ಗೆ ಕೇಂದ್ರ ಸರ್ಕಾರ ಗಮನವಿಡಬೇಕಿತ್ತು. ಸರ್ಕಾರ ಜನರ ಮೇಲಿನ ಹೊರೆ ಇಳಿಸಬೇಕು. ಬೆಲೆ ಏರಿಕೆಯಿಲ್ಲದೇ ಜನಸಾಮಾನ್ಯ ನಿಶ್ಚಿಂತೆಯಿಂದ ಬದುಕುವ ದಾರಿಯನ್ನು ಕೇಂದ್ರ ಸರ್ಕಾರ ಮಾಡಬೇಕಿದೆ" ಎಂದರು.
ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು"ಎಂದರು.
ಸಚಿವ ಸಂಪುಟ ಸಭೆಯಲ್ಲಿ ಅಲ್ಪಸಂಖ್ಯಾತರ ಪ್ರದೇಶ ಅಭಿವೃದ್ಧಿಗೆ 600 ಕೋಟಿ ಅನುದಾನ ಬಿಡುಗಡೆ ಬಗ್ಗೆ ಕೇಳಿದಾಗ, "ಅದನ್ನು ಮಾತ್ರ ಯಾಕೆ ದೊಡ್ಡದಾಗಿ ಬಿಂಬಿಸುತ್ತೀರಿ? ನಿನ್ನೆ ಸಚಿವ ಸಂಪುಟ ಸಭೆಯಲ್ಲಿ 18 ಸಾವಿರ ಕೋಟಿ ವೆಚ್ಚದಲ್ಲಿ ಬಿಡದಿ ಬಳಿ ಸ್ಯಾಟಲೈಟ್ ಟೌನ್ ಶಿಪ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ವಿಚಾರ ಬಿಟ್ಟು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಬಗ್ಗೆ ಮಾತ್ರ ಮಾತನಾಡುವುದೇಕೆ?" ಎಂದು ಹೇಳಿದರು.
ಕೇಂದ್ರ ಸರ್ಕಾರ ನೆರೆ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳದೆ, ವೈರತ್ವ ಬೆಳೆಸಿಕೊಂಡಿದೆ. ನಮ್ಮ ಮಿತ್ರ ರಾಷ್ಟ್ರಗಳು ವೈರಿ ರಾಷ್ಟ್ರಗಳಾಗಿವೆ. ವಿದೇಶಾಂಗ ನೀತಿ, ವ್ಯಾಪಾರ ಒಪ್ಪಂದ ವೈಫಲ್ಯದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಮುಗಿದ ಬಳಿಕ ಬೆಲೆ ಏರಿಕೆ ಮಾಡಿ ಕೇಂದ್ರ ಸರ್ಕಾರ ಮತದಾರರಿಗೆ ವಂಚಿಸಿ, ಬೆನ್ನಿಗೆ ಚೂರಿ ಹಾಕಿದೆ" ಎಂದು ತಿಳಿಸಿದರು.
ಪಕ್ಷದ ತೀರ್ಮಾನ ಏನೇ ಇದ್ದರೂ ಅದನ್ನು ಸ್ವೀಕರಿಸಬೇಕು ಎಂಬ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ತೀರ್ಮಾನವನ್ನು ಪ್ರಸಾದವೆಂದು ಸ್ವೀಕರಿಸುತ್ತೇವೆ" ಸ್ಪಷ್ಟಪಡಿಸಿದರು.
Advertisement