

ಬೆಂಗಳೂರು: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಎದುರಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯನ್ನು ಕಾಂಗ್ರೆಸ್ ಸರ್ಕಾರ ರಕ್ಷಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಲೈಂಗಿಕ ಹಗರಣದ ವಿಡಿಯೋ ಅಸಲಿ ಎಂದು ವರದಿ ಬಂದಿದ್ದರೂ, ಕಾಮುಕ ಅಧಿಕಾರಿಯನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಪೊಲೀಸ್ ಮಹಾನಿರ್ದೇಶಕ (DGP) ಶ್ರೇಣಿಯ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಾಗ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ರಾಜ್ಯ ಸರ್ಕಾರ, ಇಂದು ಅವರ ಅಮಾನತು ಆದೇಶವನ್ನೇ ಹಿಂಪಡೆದು ರೆಡ್ ಕಾರ್ಪೆಟ್ ಸ್ವಾಗತ ನೀಡಿದೆ ಎಂದು ಕಿಡಿಕಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೇ ನಿಮ್ಮ ಸರ್ಕಾರದ ಈ ನಡೆಯ ಹಿಂದಿನ ಮರ್ಮವೇನು? ಸಾಕ್ಷಿ ಇದ್ದರೂ ಸಲಾಮು ಹೊಡೆಯುತಿರುವುದೇಕೆ? ವಿಡಿಯೋ ಅಸಲಿ ಎಂದು ತಮ್ಮ ಸರ್ಕಾರವೇ ನೇಮಿಸಿದ ಸಮಿತಿ ವರದಿ ನೀಡಿದ ಮೇಲೂ ಆರೋಪಿತ ಅಧಿಕಾರಿಗೆ ಕ್ಲೀನ್ ಚಿಟ್ ಕೊಡುವ ಧಾವಂತವೇಕೆ? ಕಾನೂನಿಗಿಂತ ವ್ಯಕ್ತಿ ದೊಡ್ಡವರೇ? ನಿವೃತ್ತಿಯ ಹೊಸ್ತಿಲಲ್ಲಿರುವ ಅಧಿಕಾರಿಗೆ ಇಷ್ಟು ಆತುರವಾಗಿ 'ರಿಲೀಫ್' ನೀಡುವ ಮೂಲಕ ನೀವು ಸಂತ್ರಸ್ತ ಮಹಿಳೆಯರಿಗೆ ಯಾವ ಸಂದೇಶ ನೀಡುತ್ತಿದ್ದೀರಿ?
ಇದೇನಾ ಕಾಂಗ್ರೆಸ್ ಪಕ್ಷದ ನೈತಿಕತೆ? ಮಹಿಳಾ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡುವ ನಿಮ್ಮ ಕಾಂಗ್ರೆಸ್ ನಾಯಕರಿಗೆ, ಈ ನಿರ್ಧಾರದಿಂದ ಮಹಿಳೆಯರಿಗೆ ಮಾಡುತ್ತಿರುವ ಅವಮಾನ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಅಧಿಕಾರಿಯನ್ನ ರಕ್ಷಿಸಲು ಕಾನೂನನ್ನೇ ಗಾಳಿಗೆ ತೂರುತ್ತಿರುವ ಈ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕಾಮುಕರಿಗೆ ರಕ್ಷಣೆ ನೀಡುವ ಈ ವಿಕೃತ ಮನಸ್ಥಿತಿಯನ್ನು ಕರ್ನಾಟಕದ ಜನತೆ ಕ್ಷಮಿಸುವುದಿಲ್ಲ. ಅಧಿಕಾರಕ್ಕೆ ಕುತ್ತು ಬರುವ ಭಯವೋ ಅಥವಾ ಒಳಗುಟ್ಟಿನ ರಕ್ಷಣೆಯೋ? ಉತ್ತರ ನೀಡಿ ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋತ ಬಳಿಕವೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದಿರುವುದನ್ನೂ ಅಶೋಕ್ ಅವರು ಟೀಕಿಸಿದ್ದಾರೆ.
ರಾಜೀನಾಮೆ ನೀಡಲು ನಿರಾಕರಿಸುವ ಮೂಲಕ ಮಮತಾ ಅವರು ಸಂವಿಧಾನಕ್ಕೆ ಅಗೌರವ ತೋರಿಸಿದ್ದಾರೆ. "ಅವರಿಗೆ ಯಾವುದೇ ಸಮಸ್ಯೆ ಇದ್ದರೆ, ಜನರನ್ನು ಕೊಲ್ಲುವ ಬದಲು ನ್ಯಾಯಾಲಯವನ್ನು ಸಂಪರ್ಕಿಸಬೇಕು" ಎಂದು ಹೇಳಿದರು.
ಸ್ವಾಭಿಮಾನವಿದ್ದರೆ, ಅವರು ವಿನಮ್ರವಾಗಿ ಕೆಳಗಿಳಿಯಬೇಕಿತ್ತು. ಆದರೀಗ ಅವರು ರಾಜೀನಾಮೆ ನೀಡದಿದ್ದರೂ ವಿಧಾನಸಭೆಯ ಅವಧಿ ಮುಗಿದ ಬಳಿಕ ಅಧಿಕಾರ ಸ್ವಾಭಾವಿಕವಾಗಿ ಅಂತ್ಯವಾಗುತ್ತದೆ. ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಸಾಮಾನ್ಯ ವಿವೇಕವಿಲ್ಲ ಎಂಬುದನ್ನು ಜನ ಅರಿತುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
Advertisement