ನಾನು ರೈತನ ಮಗ, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು-ತಿರುಗೇಟು ಕೊಡೋದೂ ಗೊತ್ತು: ರಮೇಶ್ ಜಾರಕಿಹೊಳಿ ಹೆಸರೆತ್ತದೆ ಸವದಿ ಟಾಂಗ್

ರೈತನ ಮಗನಾಗಿರುವುದು ನನ್ನ ಹೆಮ್ಮೆ. ಟ್ರ್ಯಾಕ್ಟರ್ ಮತ್ತು ಎತ್ತುಗಳ ಜೊತೆ ಬೆಳೆದ ಜೀವನ ನನ್ನ ಗುರುತು. ಅಥಣಿಯನ್ನು ಯಾರಾದರೂ ತಮ್ಮ ಪ್ರಭಾವದ ಮತ್ತೊಂದು ತಾಲೂಕಾಗಿಸಲು ಕನಸು ಕಂಡರೆ ಅದು ಇಲ್ಲಿ ಸಾಧ್ಯವಿಲ್ಲ.
Laxman Savadi
ಲಕ್ಷ್ಮಣ್ ಸವದಿ
Updated on

ಬೆಳಗಾವಿ: ನಾನು ಹಳ್ಳಿಯಲ್ಲಿ ಬೆಳೆದು ಕನ್ನಡ ಮಾಧ್ಯಮದಲ್ಲಿ ಓದಿದವನು. ರೈತನ ಮಗ. ಹೊಲ ಉಳುಮೆ ಮಾಡೋದೂ ಗೊತ್ತು, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು. ಆದರೆ ಯಾರಾದರೂ ಅನ್ಯಾಯ ಮಾಡಲು ಬಂದರೆ ಅದಕ್ಕೆ ತಕ್ಕ ತಿರುಗೇಟು ಕೊಡೋದೂ ಗೊತ್ತು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿಯವರು ಹೇಳಿದ್ದು, ರಮೇಶ್ ಜಾರಕಿಹೊಳೆ ಹೆಸರೆತ್ತದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ವಿರುದ್ಧ ಅನಗತ್ಯವಾಗಿ ರಾಜಕೀಯ ದಾಳಿ ನಡೆಸುವವರಿಗೆ ತಕ್ಕ ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.

“ನಾನು ಹಳ್ಳಿಯಲ್ಲಿ ಬೆಳೆದು ಕನ್ನಡ ಮಾಧ್ಯಮದಲ್ಲಿ ಓದಿದವನು. ರೈತನ ಮಗ. ಹೊಲ ಉಳುಮೆ ಮಾಡೋದೂ ಗೊತ್ತು, ಟ್ರ್ಯಾಕ್ಟರ್ ಓಡಿಸೋದೂ ಗೊತ್ತು. ಆದರೆ ಯಾರಾದರೂ ಅನ್ಯಾಯ ಮಾಡಲು ಬಂದರೆ ಅದಕ್ಕೆ ತಕ್ಕ ತಿರುಗೇಟು ಕೊಡೋದೂ ಗೊತ್ತು,” ಎಂದು ಗುಡುಗಿದರು.

ಇತ್ತೀಚೆಗೆ ಅಥಣಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ರಮೇಶ್ ಜಾರಕಿಹೊಳಿ, ಮುಂದಿನ ಚುನಾವಣೆಯಲ್ಲಿ ಸವದಿಯನ್ನು ಸೋಲಿಸಿ ಮತ್ತೆ ಟ್ರ್ಯಾಕ್ಟರ್ ಓಡಿಸಲು ಕಳುಹಿಸುತ್ತೇವೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಈ ಹೇಳಿಕೆಗೆ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೇ ಮಾತನಾಡಿದ ಸವದಿ, “ರೈತನ ಮಗನಾಗಿರುವುದು ನನ್ನ ಹೆಮ್ಮೆ. ಟ್ರ್ಯಾಕ್ಟರ್ ಮತ್ತು ಎತ್ತುಗಳ ಜೊತೆ ಬೆಳೆದ ಜೀವನ ನನ್ನ ಗುರುತು. ಅಥಣಿಯನ್ನು ಯಾರಾದರೂ ತಮ್ಮ ಪ್ರಭಾವದ ಮತ್ತೊಂದು ತಾಲೂಕಾಗಿಸಲು ಕನಸು ಕಂಡರೆ ಅದು ಇಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.

Laxman Savadi
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಮೂಲ ಕಾರಣ ಡಿಕೆಶಿ; BJPಗೆ ಬಂದರೆ ಒಪ್ಪಲ್ಲ: ರಮೇಶ್ ಜಾರಕಿಹೊಳಿ

ಅಥಣಿ ಕೇವಲ ರೈತರ ನೆಲವಲ್ಲ; ಬುದ್ಧಿಜೀವಿಗಳು, ವಿಜ್ಞಾನಿಗಳು ಹಾಗೂ ಸಾಮಾಜಿಕ ಪ್ರಜ್ಞೆ ಹೊಂದಿರುವ ಜನರ ಪ್ರದೇಶ. “ಅತಿಯಾಗಿ ಪ್ರಚೋದನಾತ್ಮಕವಾಗಿ ಮಾತನಾಡುವವರಿಗೆ ಜನರೇ ಉತ್ತರ ಕೊಡುತ್ತಾರೆಂದು ತಿಳಿಸಿದರು.

“ನಾನೂ ಅವರ ಭಾಷೆಯಲ್ಲೇ ಮಾತನಾಡಬಹುದು. ಹಾಗೆ ಮಾಡಿದರೆ ಅವರಿಗೂ ನಮಗೂ ವ್ಯತ್ಯಾಸವೇ ಇರೋದಿಲ್ಲ ಎಂದರು.

ಇದೇ ವೇಳೆ ತಮ್ಮ ರಾಜಕೀಯ ಶಕ್ತಿ ಹಾಗೂ ಜನಬೆಂಬಲದ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ ಸವದಿ, ಯಾವುದೇ ರಾಜಕೀಯ ಹೋರಾಟಕ್ಕೂ ಹೆದರದೇ ಎದುರಿಸುತ್ತೇನೆ ಎಂದು ಹೇಳಿದರು.

ಬೆಳಗಾವಿ ರಾಜಕೀಯದಲ್ಲಿ ಸವದಿ ಹಾಗೂ ಜಾರಕಿಹೊಳಿ ಬಣಗಳ ನಡುವೆ ಹಲವು ವರ್ಷಗಳಿಂದ ತೀವ್ರ ಪೈಪೋಟಿ ನಡೆಯುತ್ತಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಸಹಕಾರ ಕ್ಷೇತ್ರದ ಚುನಾವಣೆಗಳಲ್ಲೂ ಎರಡೂ ಬಣಗಳು ಪರಸ್ಪರ ಎದುರಾಳಿಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com