

ಬೆಂಗಳೂರು: ಕೇರಳದಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ರಾಜ್ಯದತ್ತ ಗಮನ ಹರಿಸಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಾಯಕತ್ವ ವಿಚಾರವಾಗಿ ಹೈಕಮಾಂಡ್ ಮೌನದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ಪುನಾರಚನೆ ಬಗ್ಗೆ ತೀರ್ಮಾನಿಸಲು ಈ ತಿಂಗಳ ಅಂತ್ಯದವರಗೆ ಸಮಯ ಇದೆ. ಮೊದಲು ಕೇರಳ ಸಿಎಂ ಇತ್ಯರ್ಥ ಆಗಬೇಕು. ಇನ್ನೂ ಸ್ವಲ್ಪ ದಿನ ಕಾಯಬೇಕು ಎಂದಿದ್ದಾರೆ.
ಸಂಪುಟ ವಿಸ್ತರಣೆ ಹಳೆ ಡಿಮ್ಯಾಂಡ್ ಹೀಗಾಗಿ ಹೈಕಮಾಂಡ್ ಏನು ಮಾಡುತ್ತೆ ಅಂತ ನೋಡಬೇಕು. ಆದರೆ ಕೇರಳ ಮೊದಲು ಮುಗಿಯಬೇಕು. ಅಲ್ಲಿಯೂ ಗೊಂದಲವಿದೆ, ಆಕಾಂಕ್ಷಿಗಳು ಇದ್ದಾರೆ. ಹೈಕಮಾಂಡ್ ಎಲ್ಲ ಬಗೆಹರಿಸುತ್ತದೆ. ಕೇರಳದ್ದು ಮುಗಿದ ಮೇಲೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಬಹುದು ಎಂದರು.
ಹೈಕಮಾಂಡ್ ಮುಂದೆ ನಮ್ಮ ಬೇಡಿಕೆ ಒಂದೇ, ರಾಜ್ಯದ ಗೊಂದಲ ಬಗೆಹರಿಸಬೇಕು. ಸುಮಾರು ನಾಯಕರು ಇದೆ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಪರಿಹಾರ ಮಾಡಬೇಕು. ಗೊಂದಲ, ಘರ್ಷಣೆ ನಿಲ್ಲಬೇಕು ಎಂಬುದಷ್ಟೇ ನಮ್ಮ ಬೇಡಿಕೆ. ಇಲ್ಲಿ ನಾನು ಒಪ್ಪುವುದು ಬರುವುದಿಲ್ಲ. ಈಗಾಗಲೇ ಸಿಎಂ ಕೂಡ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಹೈಕಮಾಂಡ್ ವೀಕ್ ಆಗಿಲ್ಲ. ಬಿಜೆಪಿ ಕೂಡ ಇಂತಹ ಸಂದರ್ಭಗಳಲ್ಲಿ ಟೈಮ್ ತೆಗೆದುಕೊಂಡಿದೆ. ನಮ್ಮಲ್ಲಿ ಕೂಡ ಸಿಎಂ ಆಯ್ಕೆ ತಡವಾಯಿತು. ಕೆ.ಸಿ. ವೇಣುಗೋಪಾಲ್ ಕೇರಳ ಸಿಎಂ ಆಗುವ ಬಗ್ಗೆ ಗೊತ್ತಿಲ್ಲ. ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತದೆ ಎಂದರು.
ಜಿಬಿಎ ಚುನಾವಣೆ ಮಾಡುತ್ತೇನೆ ಅಂತ ಡಿಸಿಎಂ ಅವರೇ ಹೇಳಿದ್ದಾರೆ. ನೌಕರರು ಖಾಲಿ ಇಲ್ಲ, ಗಣತಿ ಮಾಡುತ್ತಿದ್ದಾರೆ. ಅದಕ್ಕೆ ಮಳೆಗಾಲ ಮುಗಿದ ಮೇಲೆ ಅವಕಾಶ ನೀಡಿ ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕುತ್ತಿದ್ದಾರೆ ಎಂದರು.
Advertisement