'ಕಾಂಗ್ರೆಸ್ ವೈಫಲ್ಯಗಳಷ್ಟೇ 2028ರ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ತಂದುಕೊಡುವುದಿಲ್ಲ': ನಿತಿನ್ ನಬಿನ್-Video

ಆಡಳಿತಾರೂಢ ಕಾಂಗ್ರೆಸ್ ಜನರಿಗೆ ನೀಡಿದ ಭರವಸೆಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಆದರೆ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಜನರೊಂದಿಗೆ ಕೆಲಸ ಮಾಡಿ ವಿಶ್ವಾಸಾರ್ಹ ಪರ್ಯಾಯವಾಗಿ ಹೊರಹೊಮ್ಮಬೇಕು ಎಂದು ನಿತಿನ್ ನಬಿನ್ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದರು.
Leader of Opposition R Ashoka presents a memento to BJP national president Nitin Nabin during a meeting at the party office, in Bengaluru on Sunday.
ವಿಪಕ್ಷ ನಾಯಕ ಆರ್ ಅಶೋಕ್ಅ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಸ್ಮರಣಿಕೆ ನೀಡಿದರು. ಈ ವೇಳೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ಕಾಣಿಸಿಕೊಂಡರು.
Updated on

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನಿನ್ನೆ ಭಾನುವಾರ ಕರ್ನಾಟಕದ ನಾಯಕರು ಮತ್ತು ಕಾರ್ಯಕರ್ತರಿಗೆ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳೇ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯುತ್ತವೆ ಎಂದು ಭಾವಿಸಬಾರದು ಎಂದು ಎಚ್ಚರಿಕೆ ನೀಡಿದರು.

ಆಡಳಿತಾರೂಢ ಕಾಂಗ್ರೆಸ್ ಜನರಿಗೆ ನೀಡಿದ ಭರವಸೆಗಳ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದೆ. ಆದರೆ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಹಾಗೆಂದು ಬಿಜೆಪಿ ನಿರ್ಲಕ್ಷ್ಯ ತೋರಲು ಸಾಧ್ಯವಿಲ್ಲ. ಜನರೊಂದಿಗೆ ಕೆಲಸ ಮಾಡಿ ವಿಶ್ವಾಸಾರ್ಹ ಪರ್ಯಾಯವಾಗಿ ಹೊರಹೊಮ್ಮಬೇಕು ಎಂದು ನಿತಿನ್ ನಬಿನ್ ಅವರು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಂಘಟನಾ ಸಭೆಯಲ್ಲಿ ಮಾತನಾಡಿದರು.


ತಮಿಳುನಾಡಿನ ಉದಾಹರಣೆ

ತಮಿಳುನಾಡಿನ ಉದಾಹರಣೆಯನ್ನು ಉಲ್ಲೇಖಿಸಿದ ನಿತಿನ್ ನಬಿನ್, ಡಿಎಂಕೆ ಸರ್ಕಾರದ ವೈಫಲ್ಯಗಳಿಂದ ತಾನಾಗಿಯೇ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಎಐಎಡಿಎಂಕೆ ಭಾವಿಸಿದ್ದೇ ದೊಡ್ಡ ತಪ್ಪಾಗಿದೆ. ಅಲ್ಲಿ ಟಿವಿಕೆ ಎಂಬ ಹೊಸ ಶಕ್ತಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿತು. ಕರ್ನಾಟಕವು ದಕ್ಷಿಣ ಭಾರತದತ್ತ ಬಿಜೆಪಿಗೆ ಪ್ರವೇಶದ್ವಾರವಾಗಿದೆ. ಆದ್ದರಿಂದ ನಾವು ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಉಲ್ಲೇಖಿಸಿದ ಅವರು, ಬಿಜೆಪಿ ಅದರ ಆಡಳಿತ ಮಾದರಿಯಿಂದ ಪ್ರೇರಣೆ ಪಡೆಯಬೇಕು ಎಂದರು. ಜಾಗತಿಕ ಸಂಕಷ್ಟದ ನಡುವೆಯೂ ಮೋದಿ ಸರ್ಕಾರ ದೇಶದ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಯಾವುದೇ ಅಡಚಣೆ ಇಲ್ಲದೆ ಮುಂದುವರಿದಿದೆ. ಆದರೆ 63 ದೇಶಗಳಿಗೆ ವಾರದಲ್ಲಿ ಕೇವಲ ಎರಡು ಬಾರಿ ಮಾತ್ರ ಇಂಧನ ಪೂರೈಕೆ ನಡೆಯುತ್ತಿದೆ ಎಂದು ಹೇಳಿದರು.

Leader of Opposition R Ashoka presents a memento to BJP national president Nitin Nabin during a meeting at the party office, in Bengaluru on Sunday.
ಬೆಂಗಳೂರು: ಕಾಂಗ್ರೆಸ್ ಸರಕಾರದಿಂದ ವಿಶ್ವಾಸದ್ರೋಹ- ನಿತಿನ್ ನಬಿನ್ ಆರೋಪ!

ಮೊದಲ ಬಾರಿ ಕರ್ನಾಟಕಕ್ಕೆ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡಿದ ನಿತಿನ್ ನಬಿನ್ ನಿನ್ನೆ ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿ ಹಿರಿಯ ನಾಯಕರೊಂದಿಗೆ ಉಪಹಾರ ಸೇವಿಸುವ ಮೂಲಕ ಆರಂಭಿಸಿದರು. ನಂತರ ಅವರು ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಳಿಕ ಪಕ್ಷದ ಸಂಸದರು, ಶಾಸಕರು, ಜಿಲ್ಲಾ ಅಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಕೋರ್ ಸಮಿತಿ ಸದಸ್ಯರನ್ನು ಉದ್ದೇಶಿಸಿ ಸುಮಾರು ಒಂದು ಗಂಟೆಯ ಭಾಷಣ ಮಾಡಿದರು.

ರಾಜ್ಯ ಬಿಜೆಪಿ ನಾಯಕರಿಗೆ ಪಾಠ

ಒಂದು ತಂಡವಾಗಿ ಕಾರ್ಯನಿರ್ವಹಿಸಲು ನಾಯಕರಿಗೆ ಕರೆ ನೀಡಿದ ನಬಿನ್, ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಹಾಗೂ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ವಿವರಿಸುವ ಆರೋಪಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದರು. ಜೊತೆಗೆ ಜನಪರ ಮತ್ತು ವಿಷಯಾಧಾರಿತ ಪ್ರತಿಭಟನೆಗಳನ್ನು ನಡೆಸಿ, ಸಾರ್ವಜನಿಕರೊಂದಿಗೆ ನಿರಂತರ ಸಂವಾದ ನಡೆಸುವಂತೆ ಹೇಳಿದರು.

Leader of Opposition R Ashoka presents a memento to BJP national president Nitin Nabin during a meeting at the party office, in Bengaluru on Sunday.
ಬಿಜೆಪಿ ವರಿಷ್ಠ ಯಡಿಯೂರಪ್ಪ ನಿವಾಸದಲ್ಲಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಬ್ರೇಕ್ ಫಾಸ್ಟ್ ಮೀಟಿಂಗ್; ಯಾರೆಲ್ಲಾ ಭಾಗವಹಿಸಿದ್ದರು? Video

ಪಕ್ಷ ಜನರೊಂದಿಗೆ ನಿಂತರೆ, ಜನರು ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಶೂನ್ಯದಿಂದ ಆರಂಭವಾದ ಬಿಜೆಪಿ ಇಂದು 22ಕ್ಕೂ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ದೇಶಾದ್ಯಂತ 400ಕ್ಕೂ ಹೆಚ್ಚು ಸಂಸದರು ಮತ್ತು 2,000ಕ್ಕೂ ಹೆಚ್ಚು ಶಾಸಕರನ್ನು ಹೊಂದಿದೆ. ಇದು ಜನರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯಿಂದ ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯ ಘಟಕದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆಯ ಚರ್ಚೆಗಳ ನಡುವೆ, ಪಕ್ಷವು ಯಾವ ವ್ಯಕ್ತಿಗಿಂತಲೂ ದೊಡ್ಡದು ಮತ್ತು ದೇಶವು ಪಕ್ಷಕ್ಕಿಂತಲೂ ದೊಡ್ಡದು ಎಂಬುದು ಕೇವಲ ಘೋಷಣೆ ಮಾತ್ರವಲ್ಲ ಎಂದು ಅವರು ನಾಯಕರಿಗೆ ನೆನಪಿಸಿದರು.

ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಾದೇಶಿಕ ಗುರುತಿನೊಂದಿಗೆ ರಾಷ್ಟ್ರೀಯ ಏಕತೆಯ ಸಮತೋಲನ ಕಾಪಾಡಬೇಕು, ಸ್ಥಳೀಯ ಸಮಸ್ಯೆಗಳ ಸುತ್ತ ತಂಡಗಳನ್ನು ನಿರ್ಮಿಸಬೇಕು ಹಾಗೂ ಮುಂಬರುವ ವಿಧಾನಪರಿಷತ್ ಚುನಾವಣೆಗಳು, ಹಿರಿಯೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರಗಳ ಉಪಚುನಾವಣೆಗಳು ಹಾಗೂ ಜಿಬಿಎ ಚುನಾವಣೆಗಳ ಸಿದ್ಧತೆಯ ಭಾಗವಾಗಿ ಜಿಲ್ಲಾ ಮತ್ತು ರಾಜ್ಯ ಕೋರ್ ಸಮಿತಿಗಳೊಂದಿಗೆ ನಿಯಮಿತ ಸಮನ್ವಯ ಕಾಯ್ದುಕೊಳ್ಳಬೇಕು ಎಂದು ಕರೆ ನೀಡಿದರು.

ಜಾಗತಿಕ ಮಟ್ಟದಲ್ಲಿ ಸಂಚು ನಡೆಯುತ್ತಿದೆ ಎಂದು ಎಚ್ಚರಿಸಿದ ನಿತಿನ್ ನಬಿನ್, ಕೆಲವು ಅರಾಜಕ ಶಕ್ತಿಗಳು ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿವೆ ಎಂದು ಆರೋಪಿಸಿದರು.

ಅವರ ಬಲೆಗೆ ಬೀಳಬೇಡಿ. ನೀವು ಎಚ್ಚರಿಕೆಯಿಂದಿರದಿದ್ದರೆ, ದುರುದ್ದೇಶ ಹೊಂದಿರುವವರು ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com