

ಬೆಂಗಳೂರು: ಮೇಕೆದಾಟು ಯೋಜನೆಯನ್ನು ನಿಲ್ಲಿಸುವ ಹಕ್ಕು ತಮಿಳು ನಾಡು ಸರ್ಕಾರಕ್ಕೆ ಇಲ್ಲ, ತಮಿಳು ನಾಡಿಗೆ ಯಾವುದೇ ಹಕ್ಕಿಲ್ಲ, ತಮಿಳು ನಾಡು ಕಾವೇರಿ ಜಲ ಸಮಿತಿ(CWC) ಮುಂದೆ ದೂರು ನೀಡಿದರೆ, ಸಿಡಬ್ಲ್ಯುಸಿಯವರು ಕರ್ನಾಟಕ ಸರ್ಕಾರ ಪರವಾಗಿ ಅರ್ಜಿ ವಜಾ ಮಾಡಲಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ನಾವು ಡಿಪಿಆರ್ ಸಿದ್ಧ ಮಾಡಿದ್ದೇವೆ. ಮೇಕೆದಾಟು ಕಚೇರಿ ತೆರೆದಿದ್ದೇವೆ, ಜಮೀನು ಗುರುತಿಸಿದ್ದೇವೆ. ಹೊಸ ಡಿಪಿಆರ್ ನೀಡುತ್ತಿದ್ದೇವೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಮೇಲೆ ಭೂಮಿಪೂಜೆ ನೆರವೇರಿಸುತ್ತೇವೆ ಎಂದರು.
ಡಿಎಂಕೆ, ಪಿಎಂಕೆ ಸೇರಿದಂತೆ ತಮಿಳು ನಾಡಿನಲ್ಲಿ ಯೋಜನೆಗೆ ಭಾರೀ ವಿರೋಧ
ಮೇಕೆದಾಟು ಅಣೆಕಟ್ಟು ವಿವಾದವು ಮತ್ತೆ ಕರ್ನಾಟಕ ಮತ್ತು ತಮಿಳುನಾಡು ನಡುವಿನ ರಾಜಕೀಯ ಕಿಚ್ಚನ್ನು ಹೊತ್ತಿಸಿದೆ. ಈ ಬಾರಿ ಇದು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಹೊಸ ಸರ್ಕಾರಕ್ಕೆ ಮೊದಲ ದೊಡ್ಡ ರಾಜಕೀಯ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪರಿಷ್ಕೃತ ವಿವರವಾದ ಯೋಜನಾ ವರದಿ (DPR)ಯನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಹೇಳಿದ ಬಳಿಕ ಈ ವಿವಾದ ಮತ್ತೆ ತೀವ್ರಗೊಂಡಿತು. ಈ ಯೋಜನೆಯನ್ನು ವಿರೋಧಿಸಲು ತಮಿಳುನಾಡಿಗೆ ಯಾವುದೇ ಹಕ್ಕಿಲ್ಲ ಎಂಬ ಹೇಳಿಕೆಯನ್ನು ಕೂಡ ಶಿವಕುಮಾರ್ ನೀಡಿದ್ದಾಗಿ ವರದಿಯಾಗಿದೆ.
ಈ ಹೇಳಿಕೆಗಳು ತಮಿಳುನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಡಿಎಂಕೆ ನಾಯಕ ಕೆ ಎನ್ ನೆಹರೂ, ಡಿಕೆ ಶಿವಕುಮಾರ್ ಅವರ ಹೇಳಿಕೆಗಳು ಅವರ ಅಹಂಕಾರವನ್ನು ತೋರಿಸುತ್ತವೆ ಎಂದರು. ರಾಜ್ಯದಲ್ಲಿ ಅಧಿಕಾರ ಬದಲಾದ ನಂತರ ತಮಿಳುನಾಡಿನಲ್ಲಿ ದುರ್ಬಲ ಮೈತ್ರಿ ಸರ್ಕಾರ ಇದೆ ಎಂದು ಭಾವಿಸಿ ಕರ್ನಾಟಕ ನಾಯಕರು ಹೀಗೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ಕಾಂಗ್ರೆಸ್ ಪಕ್ಷವೂ ಆಡಳಿತ ಮೈತ್ರಿಯ ಭಾಗವಾಗಿರುವುದರಿಂದ ವಿರೋಧ ಎದುರಾಗುವುದಿಲ್ಲ ಎಂದು ಅವರು ಭಾವಿಸುತ್ತಿರುವಂತೆ ಕಾಣುತ್ತದೆ ಎಂದು ನೆಹರು ಹೇಳಿದರು.
ಮೇಕೆದಾಟು ಯೋಜನೆಯನ್ನು ತಮಿಳುನಾಡಿನ ವಿರುದ್ಧದ ದ್ರೋಹ ಎಂದು ಕರೆದ ಅವರು, ಈ ಜಲಾಶಯ ನಿರ್ಮಾಣವಾದರೆ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿರುವ ತೀರ ಪ್ರದೇಶದ ರೈತರು ಭಯಭೀತರಾಗುತ್ತಾರೆ ಎಂದು ಎಚ್ಚರಿಸಿದರು. ಜೊತೆಗೆ ವಿಜಯ್ ಅವರನ್ನು ಟೀಕಿಸಿದ ಅವರು, ಮುಖ್ಯಮಂತ್ರಿ ಈಗಾದರೂ ಬಾಯಿ ತೆರೆಯುತ್ತಾರೆಯೇ ಎಂಬುದನ್ನು ಜನರು ಕಾದು ನೋಡುತ್ತಿದ್ದಾರೆ ಎಂದರು.
ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳೂ ಕಾವೇರಿ ವಿಚಾರದಲ್ಲಿ ಒಂದೇ ಧ್ವನಿಯಲ್ಲಿ ನಿಂತಿವೆ ಎಂಬುದನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸುವಂತೆ ವಿಜಯ್ ಅವರಿಗೆ ಅವರು ಆಗ್ರಹಿಸಿದರು.
ಪಿಎಂಕೆ ನಾಯಕ ಅನ್ಬುಮನಿ ರಾಮುದಾಸ್, ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಕರ್ನಾಟಕ ತಪ್ಪಾಗಿ ಬಳಸುತ್ತಿದೆ ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಎಂದಿಗೂ ಹೇಳಿಲ್ಲ. ಅದು ಸ್ಪಷ್ಟವಾದ ಸುಳ್ಳು ಎಂದು ಅನ್ಬುಮಣಿ ಹೇಳಿದರು.
ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣವಾದರೆ ತಮಿಳುನಾಡಿನ 14 ಜಿಲ್ಲೆಗಳ ನೀರಾವರಿ ವ್ಯವಸ್ಥೆ ಹಾಗೂ ಸುಮಾರು ಐದು ಕೋಟಿ ಜನರ ಕುಡಿಯುವ ನೀರಿನ ಸರಬರಾಜಿಗೆ ಹಾನಿಯಾಗಬಹುದು ಎಂದು ಅವರು ಎಚ್ಚರಿಸಿದರು.
ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ ಆಡಳಿತಾರೂಢ ಸರ್ಕಾರದ ಮೌನವನ್ನು ಪ್ರಶ್ನಿಸಿದರು. ಕಾಂಗ್ರೆಸ್ ಮೇಲೆ ಅವಲಂಬಿತವಾಗಿರುವ ಸರ್ಕಾರವು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ದೃಢ ನಿಲುವು ತೆಗೆದುಕೊಳ್ಳಬಹುದೇ ಎಂದು ಅವರು ಪ್ರಶ್ನಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ಡೆಲ್ಟಾ ಜಿಲ್ಲೆಗಳು ಮರುಭೂಮಿಯಾಗುತ್ತವೆ ಎಂದರು. ಕಾಂಗ್ರೆಸ್ ಸಂಸದ ಮಣಿಕ್ಕಮ್ ಠಾಗೋರ್ ಕೂಡ ಡಿ ಕೆ ಶಿವಕುಮಾರ್ ಅವರ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿದರು.
ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಈಗಾಗಲೇ ತಮಿಳುನಾಡಿನ ಅನುಮತಿ ಇಲ್ಲದೆ ಕಾವೇರಿ ನದಿಗೆ ಅಡ್ಡವಾಗಿ ಯಾವುದೇ ಹೊಸ ಅಣೆಕಟ್ಟು ನಿರ್ಮಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿವೆ ಎಂದು ಟಗೋರ್ ಹೇಳಿದರು.
ಇದಾದ ಬಳಿಕವೂ ಡಿ ಕೆ ಶಿವಕುಮಾರ್ ಪ್ರಚೋದನಕಾರಿ ಹೇಳಿಕೆಗಳನ್ನು ಮುಂದುವರಿಸುತ್ತಿದ್ದಾರೆ. ಇದು ಕಾನೂನು ನಿರ್ದೇಶನಗಳನ್ನೂ, ಫೆಡರಲಿಸಂ ತತ್ವಗಳನ್ನೂ ನಿರ್ಲಕ್ಷಿಸುವಂತಾಗಿದೆ ಎಂದು ಅವರು ಆರೋಪಿಸಿದರು.
ಕಾವೇರಿ ಒಂದು ರಾಜಕೀಯ ಆಯುಧವಲ್ಲ. ಅದು ತಮಿಳುನಾಡಿನ ಕೋಟ್ಯಂತರ ಜನರ ಜೀವನಾಡಿಯಾಗಿದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರವು ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
Advertisement