

ಬೆಂಗಳೂರು: ಅಶೋಕ್ ಅಣ್ಣಾ, RSS ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ, ಆದರೆ, ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ, ಶಿವಶಂಕರಪ್ಪ ಸಾಹುಕಾರ್, ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್ಎಸ್ಎಸ್ ಕುರಿತ ತಮ್ಮ ಪ್ರಶ್ನೆಗಳಿಗೆ ಅಶೋಕ್ ಅವರು ಪ್ರತಿಕ್ರಿಯಿಸಿದ್ದನ್ನು ಆಧರಿಸಿ ಇದೀಗ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಆರ್ಎಸ್ಎಸ್ ವಿಚಾರದಲ್ಲಿ ಚಿಂತೆ ಮಾಡುವ ಬದಲು, ಕೆಪಿಎಸ್ಸಿ ನೇಮಕಾತಿ ಹಾಗೂ ಶಿವಶಂಕರಪ್ಪ ಸಾಹುಕಾರ್ ಸೇರಿದಂತೆ ತಾವು ಪ್ರಸ್ತಾಪಿಸಿರುವ ಹಲವು ವಿಚಾರಗಳಿಗೆ ಉತ್ತರಿಸುವಂತೆ ಅವರು ಸವಾಲು ಹಾಕಿದ್ದಾರೆ.
“ಅಶೋಕ್ ಅಣ್ಣಾ, ಆರ್ಎಸ್ಎಸ್ ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ” ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಅಶೋಕ್ ಅವರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿರುವ ಅವರು, “ಮರಿ ಅಶೋಕ್ ಏಕೆ ಗಣವೇಶ ಧರಿಸಿಲ್ಲ? ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ? ಮರಿ ಅಶೋಕ್ ಇನ್ನೂ ಧರ್ಮರಕ್ಷಕನಾಗಿ ಏಕೆ ಆಗಿಲ್ಲ?” ಎಂದು ಪ್ರಶ್ನಿಸಿದ್ದಾರೆ. “ಹಿರಿ ಅಶೋಕ್ ಅವರು ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ?” ಎಂದೂ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಸವರಾಜ ಕನ್ನಾಳೆ ಅವರ ವಿಚಾರವನ್ನೂ ಪ್ರಸ್ತಾಪಿಸಿರುವ ಅವರು, “ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತೀರಿ? ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ?” ಎಂದು ಪ್ರಶ್ನಿಸಿದ್ದಾರೆ.
ಕೆಪಿಎಸ್ಸಿ ಸದಸ್ಯರು ಮತ್ತು ಅಧ್ಯಕ್ಷರ ನೇಮಕಕ್ಕೆ ಬಿಜೆಪಿ ನಾಯಕರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಆರೋಪದ ಬಗ್ಗೆಯೂ ಅಶೋಕ್ ಯಾವಾಗ ಮಾತನಾಡುತ್ತಾರೆ? ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ಯಾವಾಗ ಮಾತನಾಡುತ್ತೀರಿ ಎಂದೂ ಕೇಳಿದ್ದಾರೆ.