

ಬಳ್ಳಾರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಬಳ್ಳಾರಿಯ ಎಲ್ಲಾ 10 ವಿಧಾನಸಭಾ ಕ್ಷೇತ್ರ ಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಬಳ್ಳಾರಿ ಚಲೋ ಪಾದಯಾತ್ರೆಯ 10ನೇ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯಸರ್ಕಾರದ ವೈಪಲ್ಯ ಮತ್ತು ವಾಲ್ಮೀಕಿ ನಿಗಮದ ಅಕ್ರಮ ಖಂಡಿಸಿ ಬಿಜೆಪಿ ನಡೆಸಿದ ಬಳ್ಳಾರಿ ಚಲೋ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.
ನಾನು ಸೇಡಿನ ರಾಜಕೀಯ ಮಾಡುತ್ತಿಲ್ಲ. ನಾಗೇಂದ್ರಗೆ ಹಗರಣ ಮಾಡುವಂತೆ ನಾನು ಹೇಳಿರಲಿಲ್ಲ ಎಂದರು. ಕಂಪ್ಲಿ ಶಾಸಕ ನನ್ನನ್ನು ಬೆದರಿಸುತ್ತಾರೆ. ಕಂಪ್ಲಿ ವೃತ್ತಕ್ಕೆ ಬರುತ್ತೇನೆ. ನನ್ನನ್ನು ಏನು ಮಾಡಲು ಸಾಧ್ಯ? ಇನ್ನು ಹಗರಣದ ಹಣದಿಂದ ಚುನಾವಣೆ ಮಾಡಿದ ಸಂಡೂರಿನ ಶಾಸಕ ಈ ಹೊತ್ತಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಾಗಿತ್ತು ಎಂದು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಮುಸ್ಲೀಂ ಓಲೈಕೆ ಅವಶ್ಯಕತೆ ಇಲ್ಲ. ಅವರು ನಮ್ಮ ಪರ ಇದ್ದಾರೆ ಎಂದರು. ಕೆಲವರು ಮುಸ್ಲೀಮರ ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲೀಮರಿಗೆ ಬಿಜೆಪಿ ತೊಂದರೆ ಕೊಟ್ಟಿಲ್ಲ. ತಪ್ಪು ತಿಳುವಳಿಕೆಯಿಂದ ಬಳ್ಳಾರಿಯಲ್ಲಿ ಶ್ರೀರಾಮುಲು ಸೋತರು ಎಂದು ಜನಾರ್ಧನರೆಡ್ಡಿ ತಿಳಿಸಿದರು.
ಬೆಂಗಳೂರಿಗೆ ಸಮನಾಗಿ ಹಾಗೂ ಚೀನಾದ ಬೀಜಿಂಗ್ ಮಾದರಿಯಲ್ಲಿ ಬಳ್ಳಾರಿಯನ್ನು ಅಭಿವೃದ್ಧಿಪಡಿಸುವುದು ನನ್ನ ಮುಖ್ಯ ಗುರಿಯಾಗಿತ್ತು. ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪೂರ್ಣಗೊಳಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ನಿರ್ಮಾಣದ ಪ್ರಯತ್ನವೂ ವಿಫಲವಾಗಿದೆ ಎಂದು ಅವರು ಆರೋಪಿಸಿದರು.