

ಬಾಗಲಕೋಟೆ: ಜಾರಿ ನಿರ್ದೇಶನಾಲಯ(ಇಡಿ)ದ ದಾಳಿಗೆ ಒಳಗಾಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಶಾಪ ತಟ್ಟಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾನುವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಇಂದು ಬಾಗಲಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ ಅಂತ ಅನಿಸ್ತಿದೆ ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಶಾಸಕರ ಸಹಿ ಮಾಡಿಸಿಕೊಟ್ಟವರೇ ಈ ಸತೀಶ್ ಜಾರಕಿಹೊಳಿ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೇ ಏನು ಅಭ್ಯಂತರ ಇಲ್ಲವೆಂದು 36 ಶಾಸಕರ ಸಹಿ ಮಾಡಿ ಕೊಟ್ಟವರೇ ಸತೀಶ ಜಾರಕಿಹೊಳಿ. ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್, ಜಾರಕಿಹೊಳಿ ಇವರೆಲ್ಲಾ ಹೇಳಿದ್ರು. ಆದ್ರೆ ಸಿದ್ದರಾಮಯ್ಯನವ್ರನ್ನು ಯಾವ ಕಾರಣಕ್ಕೆ ತೆಗೆದ್ರಿ ಅಂತ ಜನತೆಗೆ ಹೇಳಬೇಕಲ್ವಾ? ಹೈಕಮಾಂಡ್ಗೆ ಹೆಚ್ಚು ರೊಕ್ಕ ಕೊಡಲಿಲ್ಲ ಅಂತ ತೆಗೆದ್ರಾ? ಅಂತ ಯತ್ನಾಳ್ ಪ್ರಶ್ನಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಎರಡ್ಮೂರು ತಪ್ಪು ಮಾಡಿದ್ರು. ಸಿದ್ದರಾಮಯ್ಯ ನವ್ರಿಗೆ ಕೈ ಕೊಟ್ಟಿದ್ದು ತಪ್ಪು. ಸಿದ್ದರಾಮಯ್ಯನವ್ರದು ದುರ್ದೈವ ಅಂದ್ರೆ ಎಷ್ಟು ನಂಬಿದ್ರಲ್ಲಾ ಅಷ್ಟು ಕೈ ಕೊಟ್ರು. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಮೂವರೂ ಕೈ ಕೊಟ್ರು ಎಂದು ಯತ್ನಾಳ್ ಹೇಳಿದ್ದಾರೆ.