

ತುಮಕೂರು: ಕಾಂಗ್ರೆಸ್ ಪಕ್ಷ ತೊರೆಯಲ್ಲ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ಪಕ್ಷದೊಂದಿಗೆ ಅಚಲವಾಗಿರುತ್ತೇನೆ. ಸಿದ್ಧಾಂತದ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಹಿರಿಯ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ ಬೇರೆ ಯಾವುದೇ ಪಕ್ಷಕ್ಕೂ ಹೋಗಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತುಮಕೂರಿನ ಮಧುಗಿರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವುದು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್ನಲ್ಲೇ ಇರಬೇಕು ಎಂಬ ಮನಸ್ಥಿತಿಯಲ್ಲಿ ಇದ್ದೇನೆ ಎಂದಿದ್ದಾರೆ.
ತಳಸಮುದಾಯಗಳಿಗೆ ನ್ಯಾಯ ಒದಗಿಸುವ ಸಾಮರ್ಥ್ಯವಿರುವುದು ಕಾಂಗ್ರೆಸ್ಗೆ ಮಾತ್ರ. ಸಾಮಾನ್ಯ ಕ್ಷೇತ್ರದಲ್ಲಿ ಎಸ್ ಟಿ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡಿ, ರಾಜಕೀಯ ಬಲ ತುಂಬಿದ್ದು ಕಾಂಗ್ರೆಸ್ ಪಕ್ಷ. ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್ರಂತಹ ನಾಯಕರಿಗೆ ಸಿಎಂ ಸ್ಥಾನ ನೀಡಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲುತ್ತದೆ. ಪಕ್ಷ ನನಗೆ ಎಲ್ಲವನ್ನೂಪಕ್ಷ ನನಗೆ ಎಲ್ಲವನ್ನೂ ನೀಡಿದೆ, ಹೀಗಾಗಿ ನಾನು ಪಕ್ಷದೊಂದಿಗೆ ಅಚಲವಾಗಿರುತ್ತೇನೆ. ಸಿದ್ಧಾಂತದ ವಿಷಯದಲ್ಲಿ ಎಂದಿಗೂ ಕಾಂಗ್ರೆಸ್ ಗೆ ನಿಷ್ಠನಾಗಿರುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ನಿಲ್ಲುವೆ
ಮುಂದೆ 10 ಲಕ್ಷ ಜನ ಸಂಖ್ಯೆಗೆ ಒಂದು ಲೋಕಸಭೆ ಮಾಡುವ ಉದ್ದೇಶವಿದ್ದು, ಡಿ-ಲಿಮಿಟೇಶನ್ ಆದ್ರೆ ಮಧುಗಿರಿ ಉಪವಿಭಾಗದ ತಾಲೂಕುಗಳು ಲೋಕಸಭಾ ವ್ಯಾಪ್ತಿಗೆ ಸೇರಲಿದೆ. ಇದು ಸಾಧ್ಯವಾದ್ರೆ ಲೋಕಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ನಾಯಕತ್ವದ ಮೇಲೆ ವಿಶ್ವಾಸವಿದೆ
ಮಾಜಿ ಸಿಎಂ ಸಿದ್ದರಾಮಯ್ಯ ವೀಕ್ ಆಗುತ್ತಿದ್ದಾರೆ ಎಂಬುದು ನಿಜವಲ್ಲ. ಸಿದ್ದರಾಮಯ್ಯ ವೀಕ್ ಆದರೆ ಕಾಂಗ್ರೆಸ್ ಪಕ್ಷವೇ ವೀಕ್ ಆದಂತೆ. ಅಹಿಂದ ಮತಗಳನ್ನ ಸೆಳೆಯವ ಶಕ್ತಿ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ ಸಾಧ್ಯ. ಬಿಜೆಪಿಯಲ್ಲಿ ಯಡಿಯೂರಪ್ಪ ನವರಿಗೆ ಮತ್ತು ಜೆಡಿಎಸ್ನಲ್ಲಿ ದೇವೇಗೌಡರಿಗೆ ಮಾತ್ರ ಮತ ತಂದುಕೊಡುವ ಶಕ್ತಿ ಇದೆ, ಸಿದ್ದರಾಮಯ್ಯ ಅವರು ನನ್ನನ್ನ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಆದರೆ ಆ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿಲ್ಲ ಎಂದು ನೊಂದು ಹೇಳಿದರು.