

ಬೆಂಗಳೂರು: ಕಸ್ತೂರಿ ರಂಗನ್ ವರದಿಯ ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ನಿಲುವು ಒಂದೇ ಆಗಿದ್ದು, ಈ ವರದಿಯನ್ನು ಜಾರಿಗೆ ತರಬಾರದು ಎಂಬುದು ಬಹುತೇಕರ ಒತ್ತಾಯವಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಆರಂಭವಾಗುವ ವಿಶೇಷ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿದರು. ಕಸ್ತೂರಿ ರಂಗನ್ ವರದಿ ಚರ್ಚೆ ಆಗಲಿ ಸಂತೋಷ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಎಲ್ಲಾ ಪಕ್ಷಗಳ ಧ್ವನಿ ಒಂದೇ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ ಎಲ್ಲಾ ರೈತರು, ಜನರು ವರದಿ ಜಾರಿ ಬೇಡ ಎಂದು ಹೇಳುತ್ತಿದ್ದಾರೆ. ಅನೇಕ ವರ್ಷಗಳಿಂದ ಹೋರಾಟ ಮಾಡ್ತಾ ಇದ್ದಾರೆ.
ಸಿಎಂ ಅವರು ಕಸ್ತೂರಿ ರಂಗನ್ ವರದಿ ಮತ್ತು ಬರಗಾಲದ ಬಗ್ಗೆ ಅಧಿವೇಶನ ಎಂದು ಹೇಳುತ್ತಾ ಪ್ರಚಾರ ಮಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡಬಾರದು ಎಂಬುದು ಎಲ್ಲರ ಅಭಿಪ್ರಾಯ. ನಮ್ಮ ಪಕ್ಷದ ನಿಲುವು ಇದೆ ಆಗಿದೆ. ಒಂದು ಧ್ವನಿಯಾಗಿ ಈ ವಿಚಾರದಲ್ಲಿ ನಾವು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬರ ವಿಚಾರ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಬರಗಾಲದ ಬಗ್ಗೆ ಏನ್ ಚರ್ಚೆ ಮಾಡ್ತಾರೆ. ಇವರ ಬಳಿ ಏನ್ ಇದೆ? ಬರಗಾಲ ಸಂಬಂಧ ಯಾವುದೇ ಭಾಗದ ರೈತರಿಗೆ ಪರಿಹಾರ ಕೊಟ್ಟಿಲ್ಲ. 2-3 ಬಾರಿ ಬಿತ್ತನೆ ಮಾಡಿದ್ರು ಬೆಳೆ ಒಣಗಿ ಹೋಗಿದೆ. ಇದಕ್ಕೆ ಹಣ ಖರ್ಚು ಮಾಡಿದ್ದು ಸಂಪೂರ್ಣ ನಾಶವಾಗಿದೆ. ಸಿಎಸ್ ಅವರು ಬ್ಯಾಂಕರ್ಸ್ಗೆ ಒಂದು ವರ್ಷ ಸಾಲ ವಸೂಲಿ ಮುಂದೂಡಿ ಅಂತ ಹೇಳಿದ್ದಾರೆ.
ನಾನು ಮಂಡ್ಯದಲ್ಲಿ ದಿಶಾ ಮೀಟಿಂಗ್ ನಲ್ಲಿ ಡಿಸಿಗಳಿಗೆ ನಾನು ಸೂಚನೆ ಕೊಟ್ಟಿದ್ದೆ. ಸರ್ಕಾರದಿಂದ ಏನ್ ಮಾಡ್ತೀರಾ? ಹಳ್ಳಿಗಳಲ್ಲಿ ಕುಡಿಯೋ ನೀರಿನ ಸಮಸ್ಯೆ ಇದೆ. ಕುಡಿಯೋ ನೀರಿನ ಸಮಸ್ಯೆ ಸರ್ಕಾರ ಬಗೆಹರಿಸಿಲ್ಲ. ದುಂಡು ವೆಚ್ಚ ಮಾಡಿಕೊಂಡು ಸರ್ಕಾರ ರೈತರಿಗೆ ಪರಿಹಾರ ಕೊಡ್ತಿಲ್ಲ. ಸಿಎಂ ಅವರೇ ಬೆಳೆ ಬೆಳೆಯಬೇಡಿ ಅಂತ ಹೇಳಿದ್ರು. ಈಗ ಆ ರೈತರಿಗೆ ಏನ್ ಮಾಡ್ತೀರಾ? ಸಾಲಸೋಲ ಮಾಡಿ ಬಿತ್ತನೆ ಮಾಡಿದ್ರು ಫಲ ಸಿಕ್ಕಿಲ್ಲ ಅವರಿಗೆ ಏನ್ ಮಾಡ್ತೀರಾ? ಸದನದಲ್ಲಿ ಏನ್ ಚರ್ಚೆ ಮಾಡ್ತೀರಾ? ಎಂದು ಪ್ರಶ್ನಿಸಿದರು.
ಇನ್ನೂ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಟೂರಿಂಗ್ ಟಾಕೀಸ್ ಎಂದು ಟೀಕಿಸಿದರು. ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕೆಂಗಲ್ ಹನುಮಂತಯ್ಯನವರು ನಿರ್ಮಿಸಿದ್ದು. ಈಗ ಜಿಲ್ಲೆಗಳಿಗೆ ದಂಡು ದಂಡಾಗಿ ಹೋಗಿ, ದುಂದುವೆಚ್ಚ ಮಾಡಿ ಕ್ಯಾಬಿನೆಟ್ ಮೀಟಿಂಗ್ ಮಾಡುವುದರಿಂದ ಜನಸಾಮಾನ್ಯರಿಗೆ ಸಿಗುವ ಫಲವೇನು? ಎಂದು ಪ್ರಶ್ನಿಸಿದರು.
ಇಂತಹ ಪ್ರವಾಸಗಳಿಂದ ಬೊಕ್ಕಸಕ್ಕೆ ಹೊರೆಯೇ ಹೊರತು ಬೇರೆ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಪೊಳ್ಳು ಘೋಷಣೆಗಳನ್ನು ಬಿಟ್ಟು ಜನರಿಗೆ ನೇರವಾಗಿ ಅನುಕೂಲವಾಗುವ ಕೆಲಸಗಳನ್ನು ಮಾಡಬೇಕು. ರೈತರ ಸಾಲಮನ್ನಾ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಮಲೆನಾಡು ಭಾಗದ ಜನರ ಭೂಮಿಯ ರಕ್ಷಣೆಗೆ ಆದ್ಯತೆ ನೀಡಬೇಕು. ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.