‘ಈ ಹೊತ್ತಿಗೆ’ ಆರಂಭಗೊಂಡ ಮೊದಲೊಂದು ವರ್ಷ, ಪ್ರತಿ ಹದಿನೈದು ದಿವಸಕ್ಕೊಮ್ಮೆ ಆಯ್ದ ಒಂದು ಪುಸ್ತಕವನ್ನು ಓದಿ ಬಂದು, ಅಲ್ಲಿ ಸೇರಿ ಚರ್ಚೆ, ಸಂವಾದ ಮಾಡುತ್ತಿದ್ದೆವು. ತದನಂತರ ಕ್ರಮೇಣ ಒಂದು ಪುಸ್ತಕವನ್ನೋದಿ ಆಸ್ವಾದಿಸಿ, ಮೆಲ್ಲಲು ಇನ್ನೂ ತುಸು ಹೊತ್ತಿನ ಆವಶ್ಯಕತೆಯಿದೆ ಎನ್ನುವುದನ್ನು ಮನಗಂಡ ಎಲ್ಲರೂ, ಒಂದು ತಿಂಗಳಿಗೊಮ್ಮೆ ಸೇರುವುದೆಂದು ನಿಶ್ಚಯಿಸಿದೆವು. ಅಂತೆಯೇ ಈಗ ಪ್ರತಿ ತಿಂಗಳ ಮೂರನೆಯ ಭಾನುವಾರದೊಂದು ಸಿರಿ ಸಂಪಿಗೆಯಲ್ಲಿ ಸೇರುತ್ತಿದ್ದೇವೆ. ಈ ವರೆಗೆ ಒಟ್ಟೂ 39 ಪುಸ್ತಗಳ ಮೇಲೆ ಸಂವಾದ, ಚರ್ಚೆ ನಡೆಸಲಾಗಿದೆ. ಬೆಂಗಳೂರಿನಲ್ಲೇ ವಾಸಿಸುತ್ತಿದ್ದು, ಲಭ್ಯವಿರುವ ಆಯಾ ಪುಸ್ತಕದ ಲೇಖಕರನ್ನೂ ಅವರ ಪುಸ್ತಕದ ಮೇಲೆ ಚರ್ಚೆ ಇದ್ದ ದಿನ ಆಹ್ವಾನಿಸಲಾಗುತ್ತದೆ. ಚರ್ಚೆಯ ನಂತರ ಅವರಲ್ಲಿ ನಮಗೇನಾದರೂ ಸಂದೇಹಗಳಿದ್ದರೆ ನೇರವಾಗಿ ಕೇಳಿ ಪರಿಹರಿಸಿಕೊಳ್ಳುತ್ತೇವೆ. ಅಲ್ಲದೇ, ಪ್ರತಿ ಚರ್ಚೆನ್ನೂ ರೆಕಾರ್ಡ್ ಮಾಡಿಕೊಂಡು, ತದನಂತರ ಆದಾಗೆಲ್ಲಾ, ಅದರ ರಿಪೋರ್ಟ್ ಬರೆದು ಎಫ್.ಬಿಯಲ್ಲಿರುವ ಈ ಹೊತ್ತಿಗೆಯ ಪೇಜ್ನಲ್ಲಿ ಹಾಕಲಾಗುತ್ತಿದೆ. ಜೋಗಿಯವರು, ಜಯಂತ್ ಕಾಯ್ಕಿಣಿಯವರು, ಶ್ರೀನಿವಾಸ ವೈದ್ಯರು, ವಸ್ತಾರೆ, ಉಮಾ ರಾವ್, ಶ್ರೀರಾಮ್, ಹೀಗೆ ಹಲವಾರು ಲೇಖಕರು ನಮ್ಮೊಂದಿಗೆ ತಮ್ಮ ಅನುಭವ, ಅನಿಸಿಕೆಗಳನ್ನು ಸಾಹಿತ್ಯಾಸಕ್ತರೊಂದಿಗೆ ಹಂಚಿಕೊಂಡಿದ್ದಾರೆ. ಇಂತಹ ಅತ್ಯುತ್ತಮ ಅವಕಾಶವನ್ನು ಕಲ್ಪಿಸುವ ಈ ಹೊತ್ತಿಗೆಯಲ್ಲಿ ಯಾರೂ ಭಾಗವಹಿಸಬಹುದು. ಎಲ್ಲರಿಗೂ ಸುಸ್ವಾಗತವಿದೆ. ಆದರೆ ಒಂದೇ ಒಂದು ಷರತ್ತಿರುತ್ತದೆ.. ಅದೇನೆಂದರೆ ನಿಗದಿಯಾದ ಪುಸ್ತಕವನ್ನು ಓದಿಕೊಂಡೇ ಅಲ್ಲಿಗೆ ಬರಬೇಕಾಗುತ್ತದೆ. ಓದದೇ ಬಂದರೆ ಅವರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲು ಅಡ್ಡಿಯಾಗುತ್ತದೆ ಎಂಬ ಉದ್ದೇಶದಿಂದಷ್ಟೇ ಈ ಷರತ್ತನ್ನು ಹಾಕಲಾಗಿದೆ. ಪ್ರತಿಯೊಬ್ಬರೂ ಸಂವಾದದಲ್ಲಿ ಭಾಗಿಯಾಗಬೇಕೆಂಬ ಆಶಯ ಈ ಹೊತ್ತಿಗೆಯದು. ಯಾವ ಪುಸ್ತಕ ಮುಂದಿನ ಓದಿಗೆ ಇದೆ ಎನ್ನುವುದನ್ನು ಪ್ರತಿ ಸಂವಾದದ ನಂತರ ಅಲ್ಲಿ ಸೇರಿರುವ ಸದಸ್ಯರ ಅಭಿಪ್ರಾಯದ ಮೇರೆಗೆ ನಿರ್ಧರಿಸಲಾಗುತ್ತದೆ. ಹಾಗೆ ನಿರ್ಧರಿತವಾದ ಪುಸ್ತಕವನ್ನು ಫೇಸ್ಬುಕ್ನಲ್ಲಿಯ ‘ಈ ಹೊತ್ತಿಗೆ’ಯ ಪೇಜಿನ ಮುಖಗೋಡೆಯಲ್ಲಿ ಪ್ರಕಟಲಾಗುತ್ತದೆ. ಈ ಮೂಲಕ ಆಸಕ್ತರು ನಿಗದಿತ ಒಂದು ತಿಂಗಳ ಸಮಯಾವಧಿಯೊಳಗೆ ಪುಸ್ತಕವನ್ನೋದಿ ಚರ್ಚೆಗೆ ಬರುತ್ತಾರೆ.