ಅದೊಂದು ದಿವಿನಾದ ದಿನ. .ನಾನು ಐದನೇ ಇಯತ್ತೆಯಲ್ಲಿ ಓದುತ್ತಿದ್ದೆನೇನೊ...ಸರಿಯಾಗಿ ನೆನಪಿಲ್ಲ. ಆದರೆ ಅವರ ಹೆಸರು ಮಾತ್ರ ಚೆನ್ನಾಗಿ ನೆನಪಿದೆ . ಕಿರಣ್ ಮಾಸ್ತರು ! ಅಪ್ಪಟ ಕನ್ನಡಾಭಿಮಾನಿಯಾಗಿದ್ದವರು. ಆ ದಿನದ ತರಗತಿಯ ಕೊನೆಗೆ ನಮಗೆಲ್ಲ ಒಂದು ಮನೆಗೆಲಸ ಕೊಟ್ಟರು. ಸೂರ್ಯ, ಚಂದ್ರ , ಭೂಮಿ, ಬಾನು, ನಕ್ಷತ್ರ ಇವಕ್ಕೆಲ್ಲ ಕನ್ನಡ ಭಾಷೆಯಲ್ಲೇ ಅವೆಷ್ಟೊ ಸಮನಾರ್ಥಕ ಪದಗಳಿವೆ. ಅವನ್ನೆಲ್ಲಾ ಹುಡುಕಿ ಬರೆದು ತರಬೇಕೆಂಬ ಕೆಲಸ! ಅದೊಂದು ಕೆಲಸವೇ ಮೊದಲ ಬಾರಿಗೆ ಕನ್ನಡದ ಶಬ್ಧಕೋಶವನ್ನು ಕೈಯಲ್ಲಿ ಹಿಡಿಯುವಂತೆ , ಪದಗಳನ್ನು ಹುಡುಕುವಂತೆ ಮಾಡಿತ್ತು ! ಪ್ರತಿ ಪುಟ ತಿರುಗಿಸಿ ಸಿಕ್ಕ ಪದಗಳನ್ನು ಹೆಕ್ಕಿ ಒಂದೆಡೆ ಬರೆದಾಗ ಅದೆಷ್ಟು ಖುಷಿ. ..! ಊಹಿಸಿ ...ಒಂದು ಹಳ್ಳಿಯ ಅಪ್ಪಟ ಕನ್ನಡ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅದೇ ಅವತ್ತಿಗೆ ದೊಡ್ಡ ಸಾಧನೆ. ಎಲ್ಲರಿಗೂ ಶಬ್ಧಕೋಶದ ಸೌಲಭ್ಯವಿರದ ಕಾಲದಲ್ಲಿ ನನಗೆ ಸುಲಭವಾಗಿ ಸಿಕ್ಕ ಕೋಶದೊಳಗೆ ನಾನೊಂದು ಮಿಣುಕು ಹುಳುವಾಗುವಂತೆ ಮಾಡಿದ್ದು ಅದೇ ಕಿರಣ್ ಮಾಸ್ತರು. ಅವರ ಕನ್ನಡ ಭಾಷೆಯನ್ನು ಕಲಿಸಬೇಕೆಂಬ ಅಭಿಯಾನ. ಮುಂದೆ ಕನ್ನಡ ಭಾಷೆಯನ್ನು ನನ್ನ ಉಸಿರಾಗಿಸಿಕೊಳ್ಳುವ ನನ್ನ ಯಾನ ಶುರುವಾಗಿದ್ದೇ ಆವಾಗ.