ಹಾಸ್ಯ ಚಟಾಕಿ ಹಾರಿಸಿದ ಸಿದ್ದಲಿಂಗಯ್ಯ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯನವರು
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯನವರು
Updated on

ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯನವರು ಕನ್ನಡ ಬಳಸದೆ ಅರ್ಧಂಬರ್ಧ ಇಂಗ್ಲಿಷ್‍ನಿಂದ ಮುಜುಗರಕ್ಕೊಳಗಾದವರ ಕತೆಗಳನ್ನು ವಿಸ್ತರಿಸಿ ಹೇಳಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು ಮಾಧ್ಯಮದವರಿಗೆ ಮುದ ನೀಡಿತು.

ಜನರಿಗೆ ಇಂಗ್ಲಿಷ್‍ನಲ್ಲಿ ಮಾತನಾಡಿದರೆ ಗೌರವ ಸಿಕ್ಕುತ್ತದೆ ಎಂಬ ಭಾವನೆ ಇದೆ. ಇದು ಕೀಳರಿಮೆಯಿಂದಲೇ ಸೃಷ್ಟಿಯಾಗುವಂಥದ್ದು. ಸರ್ಕಾರಿ ನೌಕರರು, ನಾನು ನನ್ನ ತಂದೆ, ತಾಯಿಗೆ ಒಬ್ಬನೇ ಮಗ. ಆದ್ದರಿಂದ ನನ್ನನ್ನು ನನ್ನೂರಿಗೆ ಹತ್ತಿರ ಇರುವ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡಿ ಎಂದು ಕೇಳಿಕೊಳ್ಳುವುದು ಮಾಮೂಲಿ. ಅಂತೆಯೇ ಒಬ್ಬ ನೌಕರ,
ವರ್ಗಾವಣೆ ಕೋರಿ ಕನ್ನಡದಲ್ಲಿ ಪತ್ರ ಬರೆಯದೆ, ಇಂಗ್ಲಿಷ್‍ನಲ್ಲಿ, ಐ ಆ್ಯಮ್ ಓನ್ಲಿ ಹಸ್‍ಬಂಡ್ ಫಾರ್ ಮೈ ವೈಫ್ ಎಂದು ಬರೆದ. ಅಪಹಾಸ್ಯಕ್ಕೆ ಈಡಾದ ಎಂದು ಸಿದ್ದಲಿಂಗಯ್ಯ ಹಾಸ್ಯಪ್ರಸಂಗ ಹೇಳುತ್ತಲೇ ಎಲ್ಲರೂ ನಗೆಗಡಲಿಗೆ ಧುಮುಕಿದರು.

ಸರ್ಕಾರಿ ನೌಕರರ ಬಗ್ಗೆ ಅಸಮಾಧಾನ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ಸರ್ಕಾರಿ ನೌಕರರು ಹೇಳಿದಂತೆ ಒಂದು ದಿನದ ವೇತನವನ್ನು ನೀಡಿಲ್ಲ. ಕೇಳಿ ಕೇಳಿ ಪಡೆಯುವುದಕ್ಕೆ ಸಂಕೋಚವಾಗುತ್ತದೆ. ಆದರೂ ಆರ್ಥಿಕ ಮುಗ್ಗಟ್ಟಿನ ಕಾರಣ ಕೇಳಬೇಕಾಗಿದೆ. ಹೋಗಲಿ ಬಿಡಿ, ಅವರ ಕಥೆ ಬೇಡ. ಮುಖ್ಯಮಂತ್ರಿಗಳು ಹೆಚ್ಚಿನ ಹಣ ನೀಡಬೇಕೆಂದು ಮನವಿ
ಮಾಡಿದರು.

ನಾಮಫಲಕ, ಸೀರೆ ಪ್ರತಿಭಟನೆ
ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಮೈಸೂರು ಪೇಟ ತೊಟ್ಟು, ಸರೋಜಿನಿ ಮಹಿಷಿ ವರದಿ ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ಆಗ್ರಹಿಸುವ ನಾಮಫಲಕ ಹಿಡಿದು, ವೇದಿಕೆ ಮುಂಭಾಗವೇ ನಿಂತು ಮುಖ್ಯಮಂತ್ರಿಯವರ ಗಮನ ಸೆಳೆದರು. ಕೆಲ ಮಹಿಳೆಯರು ಕನ್ನಡ ಧ್ವಜದ ಸೀರೆಯುಟ್ಟಿದ್ದು ವಿಶೇಷವಾಗಿತ್ತು.

ಮಾಜಿ ಶಾಸಕರ ಮಾತಿನ ಚಕಮಕಿ
ಆರಂಭದಲ್ಲಿ ಕೆಲ ಮಾಜಿ ಶಾಸಕರು ವೇದಿಕೆಯಲ್ಲಿ ಆಸನ ಒದಗಿಸಬೇಕೆಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಕೆಲ ಸಮಯ ಪೊಲೀಸರು ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಎಚ್.ಸಿ. ಮಹದೇವಪ್ಪ ಅವರು ಮಾತನಾಡುತ್ತಲೇ ಇದ್ದರು. ಕೊನೆಗೆ ಜನರೇ ಬೇಡದ ವಿಷಯಕ್ಕೆ ಗದ್ದಲ ಏಕೆ ಎಂದು ತಿರುಗಿಬಿದ್ದದ್ದರಿಂದ ಮಾತಿನ ಚಕಮಕಿ ನಿಂತಿತು.

ಮುಸ್ಲಿಂ ಯುವಕರಿಂದ ಪಾನಕ ವಿತರಣೆ
ಬಸ್ ನಿಲ್ದಾಣ ಸಮೀಪ ಮುಸ್ಲಿಂ ಯುವಕರು ಕನ್ನಡ ಸಾಹಿತ್ಯ ಹಬ್ಬಕ್ಕೆ ಬರುವ ಕನ್ನಡಿಗರಿಗೆ ಉಚಿತವಾಗಿ ಪಾನಕ ವಿತರಿಸಿದ್ದು ಗಮನ ಸೆಳೆಯಿತು. ಸಾಹಿತ್ಯ ಪರಿಷತ್‍ಗೆ ನೂರರ ಸಂಭ್ರಮದ ಜೊತೆಗೆ ಪ್ರೀತಿಯ ಕವಿ ಎಂದೇ ಹೆಸರಾಗಿರುವ ಸಿದ್ದಲಿಂಗಯ್ಯನವರ ಕಾರಣಕ್ಕೋ ಏನೋ, ಎಲ್ಲರ ಬಾಯಲ್ಲಿ ಕನ್ನಡದ್ದೇ ಮಾತು. ಒಂದಷ್ಟು ಗೋಷ್ಠಿಗಳು ಗಮನ ಸೆಳೆದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಟೆಗಟ್ಟಲೆ ಕುಳಿತು ಸಮ್ಮೇಳನದಲ್ಲಿ ಗಣ್ಯರ ಮಾತುಗಳನ್ನು ಆಲಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com