ಸಮ್ಮೇಳನಕ್ಕೆ ಸಾರಿಗೆ ವ್ಯವಸ್ಥೆ

ಭಾನುವಾರದಿಂದ ಆರಂಭಗೊಳ್ಳಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ..
ರಾಜ್ಯ ರಸ್ತೆ ಸಾರಿಗೆ ನಿಗಮ (ಸಂಗ್ರಹ ಚಿತ್ರ)
ರಾಜ್ಯ ರಸ್ತೆ ಸಾರಿಗೆ ನಿಗಮ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ಭಾನುವಾರದಿಂದ ಆರಂಭಗೊಳ್ಳಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ.

ರಾಜ್ಯದ ವಿವಿಧೆಡೆಯಿಂದ ಸಮ್ಮೇಳನ ನಡೆಯುವ ಶ್ರವಣಬೆಳಗೊಳಕ್ಕೆ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಾರಿಗೆ ಸಂಸ್ಥೆ ತಿಳಿಸಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಜನವರಿ 31 ರಿಂದ ಚನ್ನರಾಯಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಪ್ರತೀ 2 ನಿಮಿಷಕ್ಕೆ ಒಂದರಂತೆ ಬಸ್ಸುಗಳನ್ನು ಬಿಡಲಾಗುತ್ತಿದೆ. ಹಿರಿಸಾವೆ ಮತ್ತು ಮೈಸೂರು ಕಡೆಯಿಂದ ಆಗಮಿಸುವವರಿಗೆ ಕೂಡ ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ಬೆಳಿಗ್ಗೆ 7.30ಕ್ಕೆ ಹಾಗೂ 9.30ಕ್ಕೆ ಸಮ್ಮೇಳನಕ್ಕೆ ಆಗಮಿಸಲು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಸಮ್ಮೇಳನಕ್ಕಾಗಿ ಒಂದೊಂದು ಬಸ್ಸುಗಳನ್ನು ಸಾರಿಗೆ ಸಂಸ್ಥೆಯು ವ್ಯವಸ್ಥೆಗೊಳಿಸಿದೆ. ಶ್ರವಣಬೆಳಗೊಳ ದಿಂದ ಚನ್ನರಾಯ ಪಟ್ಟಣಕ್ಕೆ ಬೆಳಿಗ್ಗೆ 6ಗಂಟೆಯಿಂದ ರಾತ್ರಿ 11ಗಂಟೆಯ ವರೆಗೆ ಹೋಗಿ ಬರಲು ಬಸ್ಸುಗಳ ವ್ಯವಸ್ಥೆ ಆಗಿದೆ.

ಪ್ರತಿನಿಧಿಗಳಿಗಾಗಿರುವ ವಸತಿ ಗೃಹಗಳಿಗೆ ಪ್ರತಿನಿಧಿಗಳನ್ನು ತಲುಪಿಸಲು 118 ಬಸ್ಸುಗಳನ್ನು ನಿಯೋಜಿಸಲಾಗಿದೆ. ದೂರ ಸ್ಥಳಗಳಿಂದ ಆಗಮಿಸುವ ಸಾಹಿತ್ಯಾಸಕ್ತರಿಗೆ ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಅನುಕೂಲವಾಗುವಂತೆ ಒಂದು ದಿನದ ಪ್ರವಾಸಿ ಪ್ಯಾಕೇಜ್ ಮಾಡಲಾಗಿದೆ. ಇನ್ನು ಶ್ರವಣಬೆಳಗೊಳದಲ್ಲಿ ಆಟೋಗಳು ಮತ್ತು ಟ್ಯಾಕ್ಸಿಗಳಿಗೆ ನಿಗದಿತ ದರವನ್ನು ಮಾತ್ರ ಪಡೆಯುವಂತೆ ಚಾಲಕರಿಗೆ ಜಿಲ್ಲಾಡಳಿತ ಸೂಚಿಸಿದೆ, ಈ ಕುರಿತು ಸ್ವಯಂ ಸೇವಕರು ಮತ್ತು ಪೋಲೀಸರು ಸ್ಥಳದಲ್ಲಿಯೇ ಮಾಹಿತಿ ನೀಡಲಿದ್ದಾರೆ.

ಮಾರ್ಗಗಳು:
 1) ಶ್ರವಣಬೆಳಗೊಳ-ಹಳೇಬೀಡು-ಬೇಲೂರು-ಹಲ್ಮಿಡಿ
2) ಶ್ರವಣಬೆಳಗೊಳ-ಶ್ರೀರಂಗಪಟ್ಟಣ-ಮೈಸೂರು-ಕೆ ಆರ್ ಎಸ್


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com