ಕನ್ನಡ ಬಾವುಟಗಳು, ತಳಿರು ತೋರಣ-ರಂಗೇರಿದ ಶ್ರವಣಬೆಳಗೊಳ

ಮುಗಿಲೆತ್ತರಕ್ಕೆ ನಿಂತಿರುವ ಗೊಮ್ಮಟನ ಬುಡದಲ್ಲಿ ಆರಂಭವಾದ 81ನೇ ಕನ್ನಡ ಜಾತ್ರೆಯಿಂದಾಗಿ ಶ್ರವಣ ಬೆಳಗೊಳಕ್ಕೆ ಮತ್ತಷ್ಟು ಕಳೆ ಬಂದಿದೆ...
81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಶ್ರವಣಬೆಳಗೊಳದಲ್ಲಿ ಹಬ್ಬದ ವಾತಾವರಣ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಶ್ರವಣಬೆಳಗೊಳದಲ್ಲಿ ಹಬ್ಬದ ವಾತಾವರಣ (ಸಂಗ್ರಹ ಚಿತ್ರ)

ಶ್ರವಣಬೆಳಗೊಳ: ಮುಗಿಲೆತ್ತರಕ್ಕೆ ನಿಂತಿರುವ ಗೊಮ್ಮಟನ ಬುಡದಲ್ಲಿ ಆರಂಭವಾದ 81ನೇ ಕನ್ನಡ ಜಾತ್ರೆಯಿಂದಾಗಿ ಶ್ರವಣಬೆಳಗೊಳಕ್ಕೆ ಮತ್ತಷ್ಟು ಕಳೆ ಬಂದಿದೆ. ಹಾದಿಯುದ್ದಕ್ಕೂ ಕನ್ನಡ ಬಾವುಟಗಳು, ತಳಿರು ತೋರಣಗಳು, ಕಾಲಿಟ್ಟಲೆಲ್ಲಾ ಜನಜಂಗುಳಿ, ಮಾರುಕಟ್ಟೆ, ಸಂತೆಬೀದಿ ಹೀಗೆ ಜಾಗ ಇದ್ದಲ್ಲೆಲ್ಲಾ ಜನವೋ ಜನ.

ಶ್ರವಣಬೆಳಗೊಳದ ಪ್ರವೇಶ ದ್ವಾರದಿಂದ ಆರಂಭಗೊಂಡುಊರ ತುಂಬೆಲ್ಲಾ ಕನ್ನಡ ಬಂಧುಗಳು ಜಮಾಯಿಸಿದ್ದಾರೆ. ಗೊಮ್ಮಟನೂರು ಬೆಟ್ಟದಿಂದ ಆವೃತ್ತವಾಗಿರುವ ಕಾರಣ ಬಿಸಿಲಿನ ಝಳ ಕ್ಷಣ ಹೊತ್ತು ದಂಗು ಬಡಿಸುವಂತಿದೆ. ಊರಿನ ಪ್ರವೇಶ ದ್ವಾರದಿಂದ ಭರ್ತಿ 1 ಕಿ.ಮೀ. ಉದ್ದ ನಡೆದ ಬಳಿಕ ಸಿಗುವುದೇ ಮುಖ್ಯ ದ್ವಾರ. ರಾಜ್ಯದ ಉದ್ದಗಲದಿಂದಲೂ ಅಕ್ಷರಜಾತ್ರೆಗೆ ಜನ ದೌಡಾಯಿಸಿದ್ದಾರೆ. ಹಾಸನ ಜಿಲ್ಲೆಯ ಅಕ್ಕಪಕ್ಕದ ಜನರು ಅತ್ಯುತ್ಸಾಹದಿಂದ ಕನ್ನಡ ಜಾತ್ರೆಯಲ್ಲಿ ಪಾಲ್ಗೊಂಡಿರುವುದು ವಿಶೇಷ.

ಕವಿಯ ಆಕರ್ಷಣೆ
ಮೆರವಣಿಗೆ ಆರಂಭಕ್ಕೂ ಮುನ್ನ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿರುವ ಸಮ್ಮೇಳನಾಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರನ್ನು ಕನ್ನಡ ಅಭಿಮಾನಿಗಳು, ಸಾಹಿತ್ಯ ಪ್ರೇಮಿಗಳು ಹಸ್ತಾಕ್ಷರ ಪಡೆಯುವುದು, ಫೋಟೋ ಸೆಷೆನ್ ನಡೆಸಿಕೊಂಡಿದ್ದು ಮಾಮೂಲಿನ ದೃಶ್ಯವಾಗಿತ್ತು. ಸಿದ್ದಲಿಂಗಯ್ಯ ಕೂಡ ನಗುಮುಖದಿಂದಲೇ ಫೋಟೋಗೆ ಪೋಸ್ ನೀಡಿದರು.

ತಮಟೆ ಸದ್ದು
ಸಮ್ಮೇಳನಕ್ಕೆ ಕಳೆ ಕಟ್ಟುವ ವಾದ್ಯಪರಿಕರಗಳಾದ ತಮಟೆ, ಡಕ್ಕೆಯ ಸದ್ದು ಇಡೀ ಶ್ರವಣಬೆಳಗೊಳದ ತುಂಬ ಮಾರ್ದನಿಸುತ್ತಿತ್ತು. ದೂರದಿಂದ ಬಂದ ಕನ್ನಡ ಪ್ರೇಮಿಗಳು ಬಸ್ ನಿಲ್ದಾಣದಿಂದ ಸಮ್ಮೇಳನ ನಡೆಯುವ ಸ್ಥಳದವರೆಗೆ ಗೊಮ್ಮಟನಿಗೆ, ಕನ್ನಡಮ್ಮನಿಗೆ, ಸಿದ್ದಲಿಂಗಯ್ಯನವರಿಗೆ ಜೈಕಾರಹಾಕುತ್ತಾ ಸಾಗಿದ್ದು ವಿಶೇಷ. ಶ್ರವಣಬೆಳಗೊಳದ  ಪ್ರವೇಶದ್ವಾರದಿಂದ ಹಿಡಿದು ಸಮ್ಮೇಳನ ನಡೆಯುವ ಜಾಗದವರೆಗೆ ಎಲ್ಲಿ ನೋಡಿದರೂ ಕಟೌಟುಗಳು,ಬ್ಯಾನರ್ ಗಳು, ರಸ್ತೆಯ ಇಕ್ಕೆಲಗಳಲ್ಲಿ ಬೆಟ್ಟದ ಬುಡದಲ್ಲಿ ಹೀಗೆ ಜಾಗ ಸಿಕ್ಕಲೆಲ್ಲಾ ಕನ್ನಡದಬಾವುಟ ರಾರಾಜಿಸುತ್ತಿದ್ದು ಕನ್ನಡ ಹಬ್ಬಕ್ಕೆ ಮತ್ತಷ್ಟು ರಂಗು ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com