1ರಿಂದ 10 ನೇ ತರಗತಿವರೆಗೆ ಶಿಕ್ಷಣ ಕನ್ನಡ ಮಾಧ್ಯಮವಾಗಲಿ: ಡಾ.ಸಿದ್ದಲಿಂಗಯ್ಯ

81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿನಂತೆ ಹತ್ತಾರು ನಿರ್ಣಯಗಳನ್ನು ತೆಗೆದು...
81ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)
81ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿದ್ದಲಿಂಗಯ್ಯ (ಸಂಗ್ರಹ ಚಿತ್ರ)
Updated on

ಶ್ರವಣಬೆಳಗೊಳ: 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿಂದಿನಂತೆ ಹತ್ತಾರು ನಿರ್ಣಯಗಳನ್ನು ತೆಗೆದುಕೊಳ್ಳುವುದು ಬೇಡ. ಒಂದೇ ಒಂದು ನಿರ್ಣಯ ತೆಗೆದುಕೊಂಡು ಅದನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳ ಮೇಲೆ ಒತ್ತಡ ಹಾಕುವುದು ಸೂಕ್ತ ಎಂದು ಸಮ್ಮೇಳಾನಾಧ್ಯಕ್ಷ ಕವಿ ಡಾ. ಸಿದ್ದಲಿಂಗಯ್ಯ ಹೇಳಿದ್ದಾರೆ.

ಶನಿವಾರ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮುನ್ನ ಮಾತನಾಡಿದ ಅವರು, ಇಂದು ಕನ್ನಡದ ಸ್ಥಿತಿಗತಿ ಹಿಂದಿನಂತೆ ಇಲ್ಲ. ಜ್ವಲಂತ ಸಮಸ್ಯೆಗಳಿವೆ ಎಂಬುದು ಸರ್ವವಿದಿತ. ಹಾಗೆಂದು ಭಾಷಣ ಮಾಡುತ್ತಾ ಕುಳಿತರೆ ಪ್ರಯೋಜನವಾಗುವುದಿಲ್ಲ. ಏನಾದರೂ ಪರ್ಯಾಯ ವ್ಯವಸ್ಥೆ ಮಾಡಲೇಬೇಕು. ಅದಕ್ಕಾಗಿ ಈ ಸಮ್ಮೇಳನದಲ್ಲಿ 1 ರಿಂದ 10 ನೇ ತರಗತಿಯವರೆಗಿನ ಶಿಕ್ಷಣ ಕನ್ನಡ ಮಾಧ್ಯಮವಾಗಬೇಕು ಎಂಬ ಏಕಮಾತ್ರ ನಿರ್ಣಯವನ್ನು ಒಕ್ಕೂರಲಿನಿಂದ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಹಿಂದೆ ನಡೆದಂತ ಸಮ್ಮೇಳನಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಕಸದಬುಟ್ಟಿಗೆ ಸೇರಿವೆ ಎಂಬ ಬಗ್ಗೆ ಚರ್ಚೆ ಈಗ ಅನಗತ್ಯ. ಆದರೆ ಕನ್ನಡ ಉಳಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡಬೇಕಾದ ಕಾಲಘಟ್ಟ ಇದು. ಒಂದು ಭಾಷೆಯನ್ನು ಉಳಿಸುವುದು ಶಿಕ್ಷಣದಿಂದ ಸಾಧ್ಯವಿದೆ. ಹಾಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ನೀಡುವ ಬೋಧನೆ ಕನ್ನಡವಾಗಬೇಕು. ಅದಕ್ಕಾಗಿ ಸಮ್ಮೇಳನದಲ್ಲಿ ಶಿಕ್ಷಣ ಕನ್ನಡ ಮಾಧ್ಯಮವಾಗಬೇಕು ಎಂಬ ನಿರ್ಣಯವನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ಅವರು ವಿಶ್ಲೇಷಿಸಿದರು.

ಈ ಏಕಮಾತ್ರ ನಿರ್ಣಯ ಅನುಷ್ಠಾನಗೊಳ್ಳಲು ಜನಾಂದೋಲನವಾಗಬೇಕು. ಅದಕ್ಕಾಗಿ ಸಾಹಿತಿಗಳು, ಕಲಾವಿದರು ಸೇರಿದಂತೆ ಎಲ್ಲ ಸ್ತರದ ಜನರು ಆಂದೋಲನಕ್ಕೆ ಕೈ  ಜೋಡಿಸಬೇಕು. ಈಗ ರಾಜ್ಯ ಸರ್ಕಾರ 1 ರಿಂದ 5 ನೇ ತರಗತಿಯವರೆಗೆ ಕನ್ನಡದಲ್ಲಿ ಶಿಕ್ಷಣ ನೀಡುವ ಬಗ್ಗೆ ಕಾನೂನಿಗೆ ತಿದ್ದುಪಡಿ ತರಲು ಹೊರಟಿದೆ. ಇದೇ ಕಾಲಕ್ಕೆ ಅದರ ಸಾಧಕ- ಬಾಧಕಗಳ ಬಗ್ಗೆ ಸಮಗ್ರ ಅಧ್ಯಯನವಾಗಬೇಕು ಎಂದು ಹೇಳಿದರು.

ದೇವನೂರು ಮಹಾದೇವ ಒಳನೋಟ ಗೊತ್ತು
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ದೇವನೂರ ಮಹಾದೇವ ಅವರ ಒಳನೋಟ, ಒಳತುಡಿ ನನಗೆ ಗೊತ್ತು. ಈ ಹಿನ್ನೆಲೆಯಿಂದಲೇ ಸಮ್ಮೇಳನದಲ್ಲಿ 1 ರಿಂದ 10 ನೇ ತರಗತಿಯವರೆಗೆ ಶಿಕ್ಷಣ ಕನ್ನಡ ಮಾಧ್ಯಮವಾಗಬೇಕು ಎಂಬ ಏಕ ನಿರ್ಣಯವನ್ನು ಕೈಗೊಳ್ಳಬೇಕೆಂದು ನಾನು ಹೇಳುತ್ತಿರುವುದು ಎಂದರು ಸಿದ್ದಲಿಂಗಯ್ಯ.

ಸಮ್ಮೇಳನದ ಅಧ್ಯಕ್ಷತೆಯನ್ನು ದಲಿತ ಸಾಹಿತಿಯೊಬ್ಬರುವಹಿಸುತ್ತಿದ್ದರೂ ಸಮ್ಮೇಳನದಲ್ಲಿ ಗೋಷ್ಠಿಯಲ್ಲಿ ದಲಿತ ಚಳವಳಿ ಮತ್ತು ದಲಿತರ ಸಮಸ್ಯೆಗಳು ಕುರಿತ ಗೋಷ್ಠಿಗಳು ಇಲ್ಲ ಎಂದು ತಗಾದೆ ತೆಗೆಯುವುದು ಬೇಕಿಲ್ಲ. ಇಲ್ಲಿ ಮೌಢ್ಯಚಾರಣೆ ಕುರಿತ ಗೋಷ್ಠಿ ಇದೆ. ಅಲ್ಲಿ ಮಡಿವಂತಿಕೆ, ಅಸ್ಪಶ್ಯತೆ ಸೇರಿದಂತೆ ಎಲ್ಲಾ ಸಾಮಾಜಿಕ ಸಮಸ್ಯೆಗಳ ವಿಚಾರ ಬರುತ್ತದೆ ಎಂದು ಪ್ರತಿಪಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com