ಶ್ರವಣಬೆಳಗೊಳ: 81ನೇ ಸಾಹಿತ್ಯ ಸಮ್ಮೇಳನದಲ್ಲಿ ಹಾಕಿದ್ದ ಪುಸ್ತಕ ಮಳಿಗೆಗಳಲ್ಲಿ ಮೂರು ಕೋಟಿಗೂ ಅಧಿಕ ವಹಿವಾಟು ನಡೆದಿದ್ದು, ಕನ್ನಡಿಗರು ಹಿಂದೆಂದೂ ಕಾಣದ ರೀತಿ ಪುಸ್ತಕ ಖರೀಧಿಸಿ ಶತಮಾನೋತ್ಸವ ಸಂದರ್ಭದಲ್ಲಿ ನಡೆದ ಸಮ್ಮೇಳನ ದಾಖಲೆ ನಿರ್ಮಿಸಿದೆ.
ಶ್ರೀ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಅವರು ಪುಸ್ತಕ ಮಳಿಗೆಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಪುಸ್ತಕ ಖರೀದಿಸುವವರಿಗೆ ಎಲ್ಲ ಅನುಕೂಲ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಮುಖ್ಯ ವೇದಿಕೆಯ ಎದುರಿನಲ್ಲಿಯೇ ಬೃಹದಾಕಾರದ ಪೆಂಡಾಲ್ನಲ್ಲಿ ನೆಲದಿಂದ ಧೂಳು ಬಾರದಂತೆ ನೆಲ ಹಾಸಿಗೆಯನ್ನು ಹಾಕಿಸಿ ವ್ಯವಸ್ಥೆ ಮಾಡಿದ್ದರು. ಫೆ.1ರಂದು ಪ್ರಾರಂಭವಾದ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಲ್ಲಿ ಕಿಕ್ಕಿರಿದು ಸಾಲಾಗಿ ನಿಂತು ಪುಸ್ತಕಗಳನ್ನು ಖರೀಧಿಸಿದರು.
ವಿಶಾಲವಾದ ಪೆಂಡಾಲ್ ನಲ್ಲಿ 517 ಪುಸ್ತಕ ಮಳಿಗೆಗಳಲ್ಲಿ ವ್ಯಾಪಾರಿಗಳು ಸಮಿತಿ ನಿಗದಿ ಮಾಡಿದ್ದ ಅತ್ಯಲ್ಪ ಹಣ ಕಟ್ಟಿ ವ್ಯಾಪಾರ ಪ್ರಾರಂಭಿಸಿ ಮುಂಜಾನೆ 7ರಿಂದ 12ರವರೆಗೆ ಪುಸ್ತಕ ವ್ಯಾಪಾರ ಮಾಡಿದರು. ಫೆ.1ರಂದು 90612 ಪುಸ್ತಕಗಳು ರು47,84,775; ಫೆ.2ರಂದು ರು.93ಲಕ್ಷ; ಫೆ.3ರಂದು ರು1 ಕೋಟಿ ಮೌಲ್ಯದ ಪುಸ್ತಕಗಳ ಮಾರಾಟವಾಗಿವೆ. ರಾತ್ರಿ 12 ಗಂಟೆಯವರೆಗೆ ಆಸಕ್ತರು ಪುಸ್ತಕ ಖರೀದಿಯಲ್ಲಿ ತೊಡಗಿದ್ದರು.
ಕಾನೂನು ಪುಸ್ತಕ ದಾಖಲೆ ಮಾರಾಟ
ರಾಜ್ಯ ಕಾನೂನು ಸೇವಾ ಸಮಿತಿ ಮಳಿಗೆಯಲ್ಲಿ ಸಾಮಾನ್ಯ ಜನತೆಗೆ ಕಾನೂನು ಅರಿವು ಮೂಡಿಸುವ ಪುಸ್ತಕಗಳು ಗರಿಷ್ಠ ವ್ಯಾಪಾರವಾಗಿದೆ. 260 ಪುಟಗಳ ಕಾನೂನು ಅರಿವು ಪುಸ್ತಕವನ್ನು ಕೇವಲ ರು20 ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪುಸ್ತಕ ಮಳಿಗೆಗೆ ಹೋದವರಲ್ಲಿ 10 ಸಾವಿರ ಮಂದಿ ಒಂದೇ ಪುಸ್ತಕವನ್ನು ಖರೀದಿಸಿ ದಾಖಲೆ ನಿರ್ಮಿಸಿದ್ದಾರೆ.
Advertisement