"ಕುಪುತ್ರೋ ಜಾಯೇತ್ ಕ್ವಚಿದಪಿ ಕುಮಾತಾ ನ ಭವತಿ ". ಈ ಸಂಸ್ಕೃತ ಶ್ಲೋಕದಲ್ಲಿ ದೇವಿಯನ್ನು ಮಾತೆಯೆಂದು ಪರಿಗಣಿಸಿ ನಾವೆಲ್ಲ ಅವಳ ಮಕ್ಕಳು ಎಂದು ಅನುಸರಿಸಿ ಹೇಳಿದ್ದು ಏನೆಂದರೆ "ಮಕ್ಕಳು ಕೆಟ್ಟವರಾಗಬಹುದೇ ಹೊರತು ತಾಯಿ ಕೆಟ್ಟವಳಾಗಿರಲ್ಲ". ಈ ಮಾತು ಸತ್ಯ.
ಎಲ್ಲಾ ತಾಯಂದಿರೂ ತನಗಾದ ಕಷ್ಟಗಳು ತನ್ನ ಮಗಳಿಗೆ ಬರಬಾರದೆಂದು ಇಚ್ಛೆ ಪಡುತ್ತಾರೆ. ಹಾಗಾಗಬೇಕಾದರೆ ತಾಯಿಯಾದವಳು ಮಗಳ ಬೆಳವಣಿಗೆಗೆ ಸಹಕರಿಸಬೇಕು. ತನ್ನನ್ನು ಬೆಳೆಸಿದ ರೀತಿಯನ್ನೇ ಮಗಳ ಮೇಲೂ ಹೇರುವುದು ತಪ್ಪಾಗುತ್ತದೆ. ಇವೆಲ್ಲವೂ ಒಂದೇ ಕಾಲಕ್ಕೆ ಸರಿಯಾಗಬೇಕೆಂಬ ಮೊಂಡು ವಾದ ಅಂತಲ್ಲ, ಆದರೆ ಹೆಣ್ಣಿಗೂ ಉಸಿರಾಡುವಷ್ಟು ಜಾಗ ಸಿಗಲಿ, ಬೇಕೆನ್ನುವಷ್ಟು ಸ್ವಾತಂತ್ರ್ಯವೂ ಸಿಗಲಿ ಎಂಬುದು ಈ ಲೇಖನದ ಆಶಯ.
10 ಬುದ್ಧಿವಾದಗಳು
ಓದಿದ್ದಾಯಿತು; ಕೈ ತುಂಬ ಸಂಬಳ ಬರುವ ಕೆಲಸಕ್ಕೂ ಸೇರಾಯಿತು; ಮದುವೆಯ ಬಗ್ಗೆಯೂ ಯೋಚಿಸು ಎಂದು ತಾಯಿಯಾದವಳು ಮದುವೆಗೆ ಒಪ್ಪಿಸುವ ಪರಿ ಬದಲಾಗಬೇಕು. ಮದುವೆ ಎಂಬುದು ಕಡಿವಾಣದಂತಾಗಿದೆ. ಬೇಕೆಂದ ಹಾಗೆ ಪದ್ಧತಿಗಳು ಮೂಲ ಉದ್ದೇಶವನ್ನೇ ಮರೆಸುವಷ್ಟು ಹಿಂಸಾತ್ಮಕ ರೂಪವನ್ನು ತಾಳಿವೆ. ಇವೆಲ್ಲದ್ದಕ್ಕೆ ಪರಿಹಾರವಾಗಿ "ಮದುವೆ" ಎಂಬ ಒತ್ತಾಯಪೂರ್ವಕ ಮನೋಭಾವನೆಯನ್ನು ಹೇರಲೇಬಾರದು. ಅದರ ಬದಲಾಗಿ ಸಾಧಕ ಬಾಧಕಗಳ ಬಗ್ಗೆ ತಿಳಿ ಹೇಳಿ, ಜೀವನದ ಇನ್ನೊಂದು ಮಜಲನ್ನು ಏರಲು ಸಹಕರಿಸಬೇಕು.
ಸಂಸಾರದ ಸಾಮರಸ್ಯದ ಗುಟ್ಟು ಗಂಡು - ಹೆಣ್ಣಿನ ಸಮಾನ ನಿರ್ವಹಣೆ. ಆದರೆ ಅಡುಗೆಯನ್ನು ಹೆಣ್ಣಿಗಷ್ಟೇ ಸೀಮಿತವಾಗಿರಿಸುವ ಯೋಚನೆ ಸರಿಯಲ್ಲ. ಪುರಾಣ ಕಥೆಯಲ್ಲಿ ನಳಮಹಾರಾಜನು ನಳಪಾಕ ಪ್ರವೀಣ ಎಂದು ಹೆಸರು ಪಡೆದವನು. ಅಡುಗೆ ಬರದೇ ಇದ್ದರೆ ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಒತ್ತಡ ಹೇರೋದು ತಪ್ಪಾದೀತು. ಕಲೆಯನ್ನು ಆರಾಧಿಸುವ ಬುದ್ಧಿಯನ್ನು ಬೆಳೆಸಬೇಕು. ಕಲೆಯನ್ನು ಆಲಂಗಿಸುವ ಯೋಚನೆಯನ್ನು ಹೇರದೆ ಬೆಳೆಸಬೇಕು.
ತಡರಾತ್ರಿ ಮನೆಗೆ ಹೋಗೋದು ಹೆಣ್ಣು ಮಕ್ಕಳಿಗೆ ಶೋಭೆಯಲ್ಲ ಎನ್ನುವ ಮಾತು ನಿಲ್ಲಬೇಕು. ಬದಲಾಗಿ ಬೇಗ ಮನೆಗೆ ಬಂದರೆ, ಊಟ ಮುಗಿಸಿ ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡಿ , ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ಬುದ್ಧಿಮಾತಿನೊಂದಿಗೆ ಹೇಳುವಂತಾಗಬೇಕು. ಸಮಾಜದ ಬಗ್ಗೆ ಭಯ ಸೃಷ್ಟಿಯಾಗಬಹುದು.
ಕಲಿಯುವ ಸಮಯದಲ್ಲಿ ಪ್ರಶ್ನೆಗಳು ಸಹಜ. ಪ್ರಶ್ನೆ ಕೇಳಿದಾಗ ಉತ್ತರ ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆನ್ನಬೇಕೇ ಹೊರತು ಪ್ರಶ್ನೆಯನ್ನೇ ಕೇಳಬಾರದೆಂದು ಹೆದರಿಸೋದು ಸರಿಯಲ್ಲ.
ನಾವೀಗ ಹಳೆಕಾಲದ ತಲೆಗಳೊಂದಿಗೆ ಜೀವಿಸುತ್ತಿದ್ದೇವೆ. ಹೆಣ್ಣನ್ನು ಭೋಗದ ವಸ್ತುವಿನ ಹಾಗೇ ನೋಡುವ ರೀತಿ ಪೂರ್ತಿ ಬದಲಾಗಿಲ್ಲ. ಅದನ್ನು ಸುಲಭದಲ್ಲಿ ಬದಲಿಸಲೂ ಸಾಧ್ಯವಿಲ್ಲ ಬಿಡಿ. ಹಾಗಾಗಿ ಈಗಿನ ಮಕ್ಕಳು ಧರಿಸುವ ವಸ್ತೃಗಳ ಬಗ್ಗೆ ಗಮನವಿರಬೇಕೇ ಹೊರತು, ಆ ವಸ್ತೃ ತೊಡಬೇಡ, ಇದನ್ನು ಧರಿಸಬೇಡ ಎಂದು ಕಾರಣವಿಲ್ಲದ ಆಜ್ಞೆ ಈಗಿನ ಕಾಲದ ಮಕ್ಕಳಿಗೆ ಸರಿ ಕಾಣಲ್ಲ. ಇಂತಹ ಉಡುಗೆ ತೊಡುಗೆಯ ಬಗೆಗಿನ ಅಜ್ಞಾನ ಮುಂದುವರೆಯಬಾರದು.
ಮಕ್ಕಳ ಆಸೆ ಆಕಾಂಕ್ಷೆಗಳನ್ನೂ ಪರಿಗಣಿಸಿ, ಮದುವೆಯ ಬಗ್ಗೆ ಮುಕ್ತ ಆಲೋಚನೆ ನಡೆಸಿ ನಿರ್ಧರಿಸುವ ಪರಿಪಾಠ ಬೆಳೆಯಬೇಕು. ಶ್ರೀಮಂತರ ವರನನ್ನು ನೋಡುತ್ತೇವೆ ಎನ್ನುವ ಮೂಲಕ ಮಕ್ಕಳಿಗೆ ತಪ್ಪು ಸಂದೇಶ ರವಾನೆಯಾಗಬಹುದು. ಹಣದ ಮೇಲೆ ಮೋಹ ಬೆಳೆಯಬಹುದು. ಆಗ ಬಾಂಧವ್ಯದಲ್ಲಿ ಪ್ರೀತಿ ನಶಿಸಿಹೋಗುವ ಅಪಾಯವಿರುತ್ತದೆ.
ಹೆಣ್ಣು ಮಕ್ಕಳು ಇದನ್ನು ಮಾಡಬಾರದು, ಹೀಗೆಯೇ ಇರಬೇಕು, ಈ ತೊಡುಗೆ ಉಡಬಾರದು, ಹುಡುಗಿಯಾಗಿ ಒಬ್ಬಳೇ ಓಡಾಡಬಾರದು ಎಂಬಿತ್ಯಾದಿ ಮಾತುಗಳು ಬೇಡಿಯೇ ಸರಿ. ಅದರಿಂದಾಗಿ ಸಮಾಜದ ಬಗ್ಗೆ ಅವಳು ಭಯ ಬೆಳೆಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಅವಳ ಸಾಮಾಜಿಕ ಬೆಳವಣಿಗೆಗೆ ತೊಡಕಾಗಬಹುದು.
ನಮ್ಮ ಸುತ್ತಮುತ್ತಲಿರುವುವರೆಲ್ಲವೂ ಮನುಷ್ಯರ ನಾನಾರೂಪಗಳು. ಅವರ ಭಾಷೆ,ಆಸಕ್ತಿ, ಉದ್ಯೋಗ ಇವೆಲ್ಲವನ್ನು ಗೌರವಿಸಲು ಕಲಿಸಬೇಕು. ಅವರನ್ನು ತೆಗಳಿ ಅವರಂತಾಗಬೇಡ ಎಂಬ ಹೋಲಿಕೆಯ ಕಾಲ ಬೇಗ ಅವನತಿ ಹೊಂದಿದಷ್ಟು ಹೆಣ್ಣಿಗೆ ಬೇಕಾಗುವ ಉಸಿರಾಟದ ಗಾಳಿ ಬೀಸಲು ಶುರುವಾಗುತ್ತದೆ.
ಹಿಂದಿನ ಕಾಲದಲ್ಲಿ ಚಿಕ್ಕಂದಿನಿಂದಲೇ ಹೆಣ್ಣುಮಕ್ಕಳಿಗೆ ಈ ಮಾತನ್ನು ಹೇಳುತ್ತಾ ಹೇಳುತ್ತಾ ಅಮ್ಮಂದಿರು ಮಗಳಂದಿರನ್ನು ಮದುವೆಗೆ ತರಬೇತುಗೊಳಿಸುತ್ತಾರೆ. ಕೆಲ ಸನ್ನಿವೇಶಗಳಲ್ಲಿ ಮಗಳಂದಿರು ಇದರಿಂದ ಕಿರಿಕಿರಿಗೂ ಒಳಗಾಗುತ್ತಾರೆ
ಹೋಲಿಕೆ ಮಾಡುವ ಮೂಲಕ ಮಗಳಿಗೆ ಇರಿಸುಮುರಿಸು, ಕೋಪ ತರಿಸುವುದರಲ್ಲಿ ಅಮ್ಮಂದಿರು ಪರಿಣತರು. ಹೀಗಾಗಿ ಹೇಳಬೇಕಾಗಿರುವುದನ್ನು ಸುಮ್ಮನೆಯೇ ಹೇಳದೆ ಅದಕ್ಕೆ ಒಗ್ಗರಣೆ, ಮಸಾಲೆ ಸೇರಿಸಿ ಅದನ್ನು ಇನ್ನಷ್ಟು ಪವರ್ ಫುಲ್ ಮಾಡುವುದಕ್ಕೆ ಮಗಳ ಸ್ನೇಹಿತೆಯರನ್ನೂ ಎಳೆದು ತರುತ್ತಾರೆ.
Advertisement