ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿಗೂ, ನೇತಾಜಿ ಕಣ್ಮರೆಗೂ ನಂಟು?

ನೇತಾಜಿ ಕಣ್ಮರೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣದ ಬಗ್ಗೆ ಹಲವಾರು ಸಂದೇಹಗಳು ಇನ್ನೂ ಉಳಿದುಕೊಂಡಿವೆ. ಹೀಗಿರುವಾಗ ಸತ್ಯಾಸತ್ಯತೆ ಏನು?
ನೇತಾಜಿ ಸುಭಾಶ್ ಚಂದ್ರ ಬೋಸ್ -ಲಾಲ್ ಬಹದ್ದೂರ್ ಶಾಸ್ತ್ರಿ
ನೇತಾಜಿ ಸುಭಾಶ್ ಚಂದ್ರ ಬೋಸ್ -ಲಾಲ್ ಬಹದ್ದೂರ್ ಶಾಸ್ತ್ರಿ
Updated on

ನೇತಾಜಿ ಸುಭಾಷ್ ಚಂದ್ರ ಬೋಸ್ ನಮ್ಮನ್ನಗಲಿ ನಾಳೆಗೆ (ಅಗಸ್ಟ್ 18) 70 ವರ್ಷವಾಗಲಿದೆ. ನೇತಾಜಿ ಕಣ್ಮರೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಮರಣದ ಬಗ್ಗೆ ಹಲವಾರು ಸಂದೇಹಗಳು ಇನ್ನೂ ಉಳಿದುಕೊಂಡಿವೆ. ಹೀಗಿರುವಾಗ ಸತ್ಯಾಸತ್ಯತೆ ಏನು? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಆದ್ದರಿಂದಲೇ ನೇತಾಜಿ ಕಣ್ಮರೆಗೂ ಶಾಸ್ತ್ರಿಯವರ ಸಾವಿಗೂ ನಂಟು ಇದೆ ಎಂದು ಪ್ರತಿಪಾದಿಸುತ್ತಿರುವವರ ಹೇಳಿಕೆಯನ್ನು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ತಾಷ್ಕೆಂಟ್‌ನಲ್ಲಿ ಸಾವಿಗೀಡಾಗಿರುವುದಕ್ಕೆ ಮತ್ತು ನೇತಾಜಿ ಸುಭಾಶ್ ಚಂದ್ರ ಬೋಸ್ ಕಣ್ಮರೆಯಾಗಿರುವುದಕ್ಕೆ ಪರಸ್ಪರ ನಂಟಿದೆ ಎಂಬ ಸಂದೇಹವಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಬೇಕೆಂದು ಶಾಸ್ತ್ರಿಯವರ ಕುಟುಂಬ ಸದಸ್ಯನಾದ ಅನುಜ್ ಧಾರ್ ಒತ್ತಾಯಿಸಿದ್ದಾರೆ. ನೇತಾಜಿಯ ಬಗ್ಗೆ ಬರೆದ 'ಇಂಡಿಯಾಸ್ ಬಿಗ್ಗೆಸ್ಟ್ ಕವರ್ ಅಪ್' ಪುಸ್ತಕದ ಲೇಖಕ ಈ ಅನುಜ್ ಧಾರ್.

ನೇತಾಜಿ ಕಣ್ಮರೆ ಪ್ರಕರಣದಲ್ಲಿ ಶಾಸ್ತ್ರಿಯವರು ಸ್ವೀಕರಿಸಿದ ನಿಲುವು ಹಾಗೂ ಪ್ರಕರಣದ ಬಗ್ಗೆ ಇರುವ ಸಂದೇಹಗಳನ್ನು ನೀಗಿಸಲು ತನಿಖಾ ಆಯೋಗವನ್ನು ನೇಮಕ ಮಾಡಿರುವುದು ಕೂಡಾ ಶಾಸ್ತ್ರಿ ಸಾವಿಗೆ ಕಾರಣವಾಗಿರಬಹುದು. ಅಂದು ಶಾಸ್ತ್ರಿಯವರು ಕಾಂಗ್ರೆಸ್‌ಗೆ ವಿರುದ್ಧವಾದ ನಿಲುವು ಸ್ವೀಕರಿಸಿದ್ದರು ಎಂದು ಧಾರ್ ಹೇಳಿದ್ದಾರೆ.

ಸಾಯುವ ಮುನ್ನ ಶಾಸ್ತ್ರಿ ಫೋನ್ ಮಾಡಿದ್ದರು
1966ರಲ್ಲಿ ಶಾಸ್ತ್ರಿಯವರು ಅಸು ನೀಗುವ ಮುನ್ನ ಕುಟುಂಬದವರೊಂದಿಗೆ ಫೋನ್ ನಲ್ಲಿ ಮಾತಾಡಿದ್ದರು. ನಾನು ಸಹಿ ಹಾಕಿರುವ ತಾಷ್ಕೆಂಟ್ ಒಪ್ಪಂದಕ್ಕಿಂತ ಮಿಗಿಲಾಗಿ ದೇಶದ ಗಮನ ಸೆಳೆಯುವಂತ ಇನ್ನೊಂದು ವಿಷಯವನ್ನು ಬಹಿರಂಗ ಪಡಿಸಲಿದ್ದೇನೆ ಎಂದು ಅವರು ಫೋನ್ ಸಂಭಾಷಣೆಯಲ್ಲಿ ಹೇಳಿದ್ದರು.
1969 ರಲ್ಲಿ  ಪ್ಯಾರಿಸ್‌ನಲ್ಲಿ ನಡೆದ ಅಮೆರಿಕದೊಂದಿಗಿನ ಒಪ್ಪಂದದ ವೇಳೆ ವಿಯೆಟ್ನಾಂ ನಿಯೋಗದೊಂದಿಗೆ ನೇತಾಜಿಯವರನ್ನು ಹೋಲುವ  ಗುಮ್ನಾಮಿ ಬಾಬಾ ನಿಂತುಕೊಂಡಿದ್ದ ಭಾವಚಿತ್ರವನ್ನು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ 'ಎಪಿ'ಯ ಚಿತ್ರ ಸಂಗ್ರಹದಿಂದ ಪಡೆದು ಧಾರ್ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. 60ರ ದಶಕದಲ್ಲಿ ಗುಮ್ನಾಮಿ ಬಾಬಾ ಅವರು ಚರ್ಚಾ ವಿಷಯವಾಗಿದ್ದರು. ಆದರೆ ಶಾಸ್ತ್ರಿ ಹೇಳಬೇಕೆಂದಿದ್ದ ವಿಷಯವೇನು ಎಂಬುದು ಇಲ್ಲಿಯವರೆಗೆ ಗೊತ್ತಾಗಿಲ್ಲ. ನೇತಾಜಿಯವರ ಕಣ್ಮರೆಯ ಬಗ್ಗೆ ಶಾಸ್ತ್ರಿಯವರು ನಿಷ್ಪಕ್ಷಪಾತ ನಿಲುವು ಅನುಸರಿಸಿದ್ದು, ಅವರು ಕೆಲವು ವಿಷಯ ಬಹಿರಂಗ ಪಡಿಸುವ ಮುನ್ನವೇ ಸಾವನ್ನಪ್ಪಿರುವುದು ಸಂದೇಹವನ್ನುಂಟು ಮಾಡಿದೆ ಎಂದು ಧಾರ್ ಹೇಳುತ್ತಿದ್ದಾರೆ.

ಶಾಸ್ತ್ರಿಯವರ ಬಾಯಿ ಮೂಗಿನಲ್ಲಿ ರಕ್ತವಿತ್ತು!
ತಾಷ್ಕೆಂಟ್‌ನ ಹೋಟೆಲ್‌ವೊಂದರಲ್ಲಿ ತಂಗಬೇಕಾಗಿದ್ದ ಶಾಸ್ತ್ರಿ ಅಂದು ವಿಲ್ಲಾ ವೊಂದರಲ್ಲಿ ತಂಗಿದ್ದರು. ಭಾರತಕ್ಕೆ ಅವರ ಮೃತದೇಹವನ್ನು ಕರೆತಂದಾಗ ಅವರ ಬಾಯಿಯಲ್ಲೂ ಮೂಗಿನಲ್ಲೂ ರಕ್ತ ಹೆಪ್ಪುಗಟ್ಟಿತ್ತು. ಶಾಸ್ತ್ರಿಯವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಹಾಗಾದರೆ ಮೂಗಿನಲ್ಲಿ ಬಾಯಲ್ಲಿ ರಕ್ತ ಹೇಗೆ ಬಂತು?  ಶಾಸ್ತ್ರಿಯವರು ಮನೆಯವರ ಜತೆ ಫೋನ್‌ನಲ್ಲಿ ಮಾತಾಡಿ ಮುಕ್ಕಾಲು ಗಂಟೆಯ ನಂತರ ಅವರು ತೀವ್ರ ಅಸ್ವಸ್ತರಾಗಿದ್ದಾರೆ ಎಂಬ ಫೋನ್ ಬಂತು. ಆದಾಗಿ 10 ನಿಮಿಷದ ನಂತರ ಅವರ ಸಾವಿನ ಸುದ್ದಿಯೂ ಸಿಕ್ಕಿತು. ನೇತಾಜಿ ಅದೇ ಜಾಗದಲ್ಲಿ ಇದ್ದಾರೆ ಎಂದು ನಂಬಿದ್ದ ರಷ್ಯಾದ ಅದೇ ಪ್ರದೇಶದಲ್ಲಿ ಶಾಸ್ತ್ರಿಯವರೂ ಸಾವನ್ನಪ್ಪಿದ್ದೂ ಸಂಶಯಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದಕ್ಕೂ ಸಾಕ್ಷಿ ಇಲ್ಲ ಎಂದಿದ್ದಾರೆ ಶಾಸ್ತ್ರಿಯವರ ಮೊಮ್ಮಗ ಸಂಜಯ್ ನಾಥ್ ಸಿಂಗ್.

ಶಾಸ್ತ್ರಿಯವರಿಗೆ ವಿಷ ನೀಡಲಾಗಿತ್ತೆ?
1965ರಲ್ಲಿ ತಾಷ್ಕೆಂಟ್ ಭೇಟಿಗೆ ಮುನ್ನ ಕೊಲ್ಕತ್ತಾ ದ ಮಯೋ ರೋಡ್‌ನಲ್ಲಿ ನೇತಾಜಿಯವರ ಪ್ರತಿಮೆಯನ್ನು ಶಾಸ್ತ್ರಿ ಅನಾವರಣ ಮಾಡಿದ್ದರು. ನೇತಾಜಿಯವರ ಸಹೋದರಿಯ ಪುತ್ರ ಚಂದ್ರಕುಮಾರ್ ಬೋಸ್ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಷ್ಯಾಗೆ ಹೋದಾಗ ಅಲ್ಲಿ ನೇತಾಜಿಯ ಬಗ್ಗೆ ಏನಾದರೂ ವಿಷಯ ತಿಳಿದುಬರುವುದೇಎಂದು ತನಿಖೆ ನಡೆಸುತ್ತೇನೆಂದು ನನ್ನ ಅಪ್ಪ ಅಮೀಯ ನಾಥ್ ಬೋಸ್ ಅವರಲ್ಲಿ ಶಾಸ್ತ್ರಿ ಹೇಳಿದ್ದರು. ಶಾಸ್ತ್ರಿಗೆ ವಿಷ ಪ್ರಾಶನ ನೀಡಿದ್ದಾರೆ ಎಂದೇ ನಾನು ನಂಬುತ್ತೇನೆ. ನೇತಾಜಿಯವರ ಕಣ್ಮರೆಗೂ ಶಾಸ್ತ್ರಿಯವರ ಮರಣಕ್ಕೂ ನಂಟು ಇದೆ ಎಂಬುದರ ಬಗ್ಗೆ ನಾವು ಪತ್ತೆ ಹಚ್ಚುತ್ತೇವೆ ಎಂಬುದು ಚಂದ್ರ ಕುಮಾರ್ ಬೋಸ್‌ರ ನುಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com