ಆರ್ ಕೆ ಲಕ್ಷ್ಮಣ್ ಮತ್ತು ಕಾಗೆ

ಸೋಮವಾರ ನಮ್ಮನಗಲಿದ ಆರ್ ಕೆ ಲಕ್ಷ್ಮಣ್ ಖ್ಯಾತ ವ್ಯಂಗ್ಯಚಿತ್ರಕಾರರು ಎಂಬುದು ಎಲ್ಲರಿಗೂ ತಿಳಿದ ವಿಷಯ!
ಆರ್ ಕೆ ಲಕ್ಷ್ಮಣ್ ಬಿಡಿಸಿದ ಕಾಗೆಗಳು
ಆರ್ ಕೆ ಲಕ್ಷ್ಮಣ್ ಬಿಡಿಸಿದ ಕಾಗೆಗಳು

ಬೆಂಗಳೂರು: ಸೋಮವಾರ ನಮ್ಮನಗಲಿದ ಆರ್ ಕೆ ಲಕ್ಷ್ಮಣ್ ಖ್ಯಾತ ವ್ಯಂಗ್ಯಚಿತ್ರಕಾರರು ಎಂಬುದು ಎಲ್ಲರಿಗೂ ತಿಳಿದ ವಿಷಯ! ಆದರೆ ಅವರಿಗೆ ಕಾಗೆ ಚಿತ್ರ ಬಿಡಿದುವುದು ಎಂದರೆ ಅವರ ಅತಿ ಪ್ರಿಯವಾದ ಕೆಲಸವಾಗಿತ್ತು! ಕಾಗೆಯ ಬಗ್ಗೆ ಅವರ ವಿಶೇಷ ಪ್ರೀತಿಯ ಬಗ್ಗೆ ಎರಡು ಸಂಗತಿಗಳು ನಿಮ್ಮ ಮುಂದೆ.

*ಖ್ಯಾತ ಫೋಟೋಗ್ರಾಫರ್, ಆರ್ ಕೆ ಲಕ್ಷ್ಮಣ್ ಅವರ ಬಾಲ್ಯ ಗೆಳೆಯ ಟಿ ಎಸ್ ಸತ್ಯನ್ ಅವರ ಆತ್ಮಕತೆ 'ಅಲೈವ್ ಅಂಡ್ ಕ್ಲಿಕಿಂಗ್' ಪುಸ್ತಕದಿಂದ*

"ಲಕ್ಷ್ಮಣ್ ಅವರಿಗೆ ತಮ್ಮ ಅತಿ ಪ್ರಿಯವಾದ ಪಕ್ಷಿ ಕಾಗೆಯ ಬಗೆಗಿನ ಪ್ಯಾಶನ್ ದಂತಕಥೆಯಾಗಿತ್ತು. ಈ ಸಾಮಾನ್ಯ ಪಕ್ಷಿಯ ವಿವಿಧ ಭಂಗಿಯ, ವಿವಿಧ ಭಾವನೆಗಳ ಅಷ್ಟು ಉತ್ತಮವಾದ ಚಿತ್ರಗಳನ್ನು ಬೇರೆ ಯಾರೂ ಬಿಡಿಸಿಲ್ಲ. ವಿವಿಧ ಪ್ರದೇಶಗಳಲ್ಲಿ ಕಾಗೆಗಳ ವಿವಿಧ ಭಾವನೆಗಳ ಎಷ್ಟೊಂದು ಚಿತ್ರಗಳನ್ನು ಅವರು ಬರೆದಿದ್ದಾರೆಂದರೆ ಒಂದು ಸಣ್ಣ ನಗರವನ್ನು ಈ ಚಿತ್ರಗಳಿಂದ ಖಂಡಿತ ತುಂಬಬಹುದು. ತನ್ನ ಗೆಳೆಯನ ಮನೆಯಲ್ಲಿ ಕಟ್ಟು ಹಾಕಿದ ಕಾಗೆಯ ಚಿತ್ರವನ್ನು ನೋಡಿದ ಮಗುವೊಂದು ಅದರತ್ತ ಕಲ್ಲು ಬೀಸಿ ಗಾಜನ್ನು ಒಡೆದು ಹಾಕಿತ್ತು ಎಂದು ಹೇಳಲಾಗುತ್ತದೆ. "ನನ್ನ ಕಲೆಗೆ ಅತಿ ದೊಡ್ಡ ಪ್ರಶಂಸೆ ಇದು" ಎಂದು ಲಕ್ಷ್ಮಣ್ ಹೇಳುತ್ತಿದ್ದರು."

*'ಅನಂತಮೂರ್ತಿ ಮಾತುಕತೆ-ಹತ್ತು ಸಮಸ್ತರ ಜೊತೆ' ಪುಸ್ತಕದ ಆರ್ ಕೆ ಲಕ್ಷ್ಮಣ್ ಸಂದರ್ಶನದಿಂದ ಆಯ್ದ ಭಾಗ *

ಯು ಆರ್ ಅನನ್ಂತಮೂರ್ತಿ:     ಅಲ್ಲಾ ನಾನು ಕೇಳಿದ್ದು, ಕಾರ್ಟೂನ್ ಜೊತೆ ಈ ಥರ ಚಿತ್ರಕಲೆಯಲ್ಲಿ ನೀವು ಕಾಗೆ ಚಿತ್ರ ಬಿಡಿಸಿದ್ದೀರಲ್ವ. ನಾನೂ ನೋಡಿದ್ದೆ. ಹಾಗೆ ಆ ಥರದಲ್ಲಿ ಏನಾದ್ರೂ ಮಾಡಿದ್ರಾ?

ಆರ್ ಕೆ ಲಕ್ಷ್ಮಣ್ : ಬೇಕಾದಷ್ಟು ಮಾಡಿದ್ದೆ ಸರ್.

ಯು ಆರ್ ಅನನ್ಂತಮೂರ್ತಿ:    ಮತ್ಯಾಕೆ ಅದನ್ನ.

ಆರ್ ಕೆ ಲಕ್ಷ್ಮಣ್ :   ಒಂದು ಕಾಗೆ ಮಾಡಿಟ್ಟು ಮಲ್ಕೊಳ್ಳೋಕೆ ಆಗ್ತದಾ ಸರ್‌? ಪ್ರತಿಬಾರಿನೂ ನನಗೆ ಅದು ಹೊಸ ಆಯಾಮಗಳನ್ನು ಕೊಡುತ್ತದೆ. ಹಾಗಾಗಿ ನಾನು ಕಾಗೆಗಳನ್ನು ಬಿಡಿಸುತ್ತಾ ಹೋದೆ.

ಯು ಆರ್ ಅನನ್ಂತಮೂರ್ತಿ:     ಇನ್ಯಾವುದಾದರೂ ನಿಮ್ಮ ಗಮನ ಸೆಳೆದಿದೆಯಾ? ಯಾಕೆಂದ್ರೆ ಒಬ್ಬ ಕಲಾವಿದನಿಗೆ ಯಾವುದೋ ಒಂದು ಅವನ ಪೂರ್ವಗ್ರಹೀತವನ್ನು ಹೇಳಲು ಅದು ಒಂದು ಸಿಂಬಲ್ ಆಗಿ ಬಿಡುತ್ತೆ. ಕಾಗೆ ಆ ದೃಷ್ಟಿಯಿಂದ ನನಗೆ ಬಹಳ ಇಷ್ಟವಾಯಿತು. ಕಾಗೆಯಲ್ಲಿ ಏನು ಕಂಡ್ರಿ ನೀವು ಅಂಥದ್ದು.

ಆರ್ ಕೆ ಲಕ್ಷ್ಮಣ್ :      (ನಗು), ನೋಡಿ ಕಾಗೆ ನಮ್ಮ ದೇಶದ ಅತ್ಯಂತ ಫೈನೆಸ್ಟ್ ಬರ್ಡ್‌. ದುರದೃಷ್ಟವಶಾತ್ ಜನ ಅದನ್ನು ನಿರ್ಲಕ್ಷ್ಯಿಸಿದ್ದಾರೆ. ಅದೊಂದು ತುಚ್ಛೀಕರಿಸಬಹುದಾದ ಹಕ್ಕಿ ಅಂತ ಜನ ತಿಳ್ಕೊಂಡಿದ್ದಾರೆ. ಅದು ಮನುಷ್ಯನಿಗೆ ತುಂಬಾ ಹತ್ತಿರವಾದ ಹಕ್ಕಿ. ಹಾಗೆಯೇ ಮನುಷ್ಯನನ್ನು ಚೆನ್ನಾಗಿ ತಿಳಿದುಕೊಂಡ ಹಕ್ಕಿಯೂ ಹೌದು. ಅದು ಬೇರೆ ಬೇರೆ ಥರದ ಧ್ವನಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಮಾಡುತ್ತದೆ. ಬಾಯಾರಿಕೆ ಆದಾಗ ಒಂದು ರೀತಿ, ಸತ್ತ ಇಲಿ ಕಂಡಾಗ ಒಂದು ಥರ, ಇತರ ಕಾಗೆಗಳನ್ನು ಕರೆಯುವಾಗ ಮತ್ತೊಂದು ಥರ, ಹೀಗೆ. ಅವುಗಳು ನವಿಲು ಇತ್ಯಾದಿ ಬೇರೆ ಹಕ್ಕಿಗಳಂತೆ ಸ್ವಾರ್ಥದಿಂದ ಒಂದೇ ತಿನ್ನಲ್ಲ. ಅದಕ್ಕೇ ಅದು ಬೇರೆ ಥರ ಕೂಗುತ್ತೆ. ಆದರೆ ಇತರ ಹಕ್ಕಿಗಳನ್ನು ಹೋಲಿಸಿದರೆ ಅದು ಒಂದು ಹಕ್ಕಿ ಮಾತ್ರವೇ ಸಾಯಂಕಾಲ ಆರರಿಂದ ಆರೂವರೆಯ ಒಳಗೆ, ಗೂಡು ಸೇರುವ ವೇಳೆಗೆ, ಮರದ ಗೆಲ್ಲುಗಳಲ್ಲಿ ಕುಳಿತು ಇಡೀ ದಿನದ ವಿಷಯಗಳನ್ನು ಚರ್ಚಿಸುತ್ತವೆ. ಗುಬ್ಬಚ್ಚಿ, ಗಿಣಿಗಳೆಲ್ಲ ಈ ಥರ ಕೂತ್ಕೊಳಲ್ಲ. ಇವು ಪಕ್ಕದಲ್ಲಿ ಕೂತ್ಕೊಂಡು ತುಂಬಾ ಮೆದುವಾದ ಧ್ವನಿಯಲ್ಲಿ ಮಾತಾಡುತ್ತಿರುತ್ತವೆ. ಅದು ಏನೂಂತ ನಮಗೆ ಗೊತ್ತಿಲ್ಲ. ಅವನ್ನು ನೋಡುತ್ತಿರಬೇಕಾದರೆ ತುಂಬಾನೇ ಖುಷಿಯಾಗುತ್ತೆ.

ಯು ಆರ್ ಅನನ್ಂತಮೂರ್ತಿ
:    ಪಿತೃ ರೂಪಿಗಳು ಅಂತಾರಲ್ಲ ನಮ್ಮಲ್ಲಿ. ಶ್ರಾದ್ಧದಲ್ಲಿ ಬಂದು ಅವು ಆಹಾರ ತಗೊಂಡು ಹೋಗ್ತವೆ.

ಆರ್ ಕೆ ಲಕ್ಷ್ಮಣ್
:   ಹೌದು. ಅದನ್ನು ಶನೀಶ್ವರನ ವಾಹನ ಅಂತ ನನ್ನ ಅಮ್ಮ ಹೇಳ್ತಿದ್ರು. ಅದನ್ನು ನಮ್ಮ ರಾಷ್ಟ್ರಪಕ್ಷಿ ಅಂತ ಘೋಷಿಸಬೇಕಾಗಿತ್ತು.

ಯು ಆರ್ ಅನನ್ಂತಮೂರ್ತಿ:    ಕಾಗೆಯಷ್ಟೇ ಶಕ್ತರಾಗಿ ನಿಮ್ಮನ್ನು ಆಕರ್ಷಿಸಿದ ವ್ಯಕ್ತಿ ಯಾರು?

ಆರ್ ಕೆ ಲಕ್ಷ್ಮಣ್ :     ಆ ಥರಾ ಯಾರೂ ಇಲ್ಲ ಸಾರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com