ತಿರುವನಂತಪುರಮ್: ಶಾಂತ ಮತ್ತು ರಚನಾತ್ಮಕ ಮನಸ್ಸು ಮಾನವನ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಹಾಗೂ ಪ್ರಾಣಿಗಳಿಗೂ ಇದು ಅನ್ವಯವಾಗುತ್ತದೆ ಎಂಬುದು ಕೇರಳದಲ್ಲಿ ಸಾಕಲಾಗಿರುವ ಆನೆಯೊಂದು ಸಾಬೀತುಪಡಿಸಿದೆ.
ಕೇರಳದ ಟ್ರಾವಂಕೂರು/ ತಿರುವಾಂಕೂರು ದೇವಸ್ವಂ ಮಂಡಳಿ ಸಾಕಿರುವ 85 ವರ್ಷಗಳ ಹೆಣ್ಣಾನೆ ದಾಕ್ಷಾಯಿಣಿ, ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ದಿನವೂ ಮಾವುತರ ಮೇಲಾಗಲೀ, ಅಥವಾ ಇನ್ನಾವುದೇ ವ್ಯಕ್ತಿಯ ಮೇಲಾಗಲಿ ದಾಳಿ ನಡೆಸಿರುವ ಘಟನೆ ನಡೆದಿಲ್ಲ. ಶಾಂತ ಸ್ವಭಾವದ ಈ ಆನೆಯನ್ನು ಅದಕ್ಕೆ 5 -6 ವರ್ಷಗಳಾಗಿದ್ದಾಗ ತಿರುವಾಂಕೂರು ರಾಜವಂಶಸ್ಥರು ಅತ್ತಿಂಗಳ್ ನಲ್ಲಿರುವ ತಿರುವರತ್ತು ಕಾವುಗೆ ದಾನ ಮಾಡಿದ್ದರು. ಎರ್ನಾಕುಲಂ ಬಳಿ ಇರುವ ಕೊಡನಾಡ್ ಆನೆ ಕ್ಯಾಂಪ್ ನಿಂದ ತರಲಾಗಿದ್ದ ದಾಕ್ಷಾಯಿಣಿಯನ್ನು 50 ವರ್ಷಗಳ ಹಿಂದೆ ಚೆನ್ಕಲೂರ್ ಮಹದೇವ ದೇವಾಲಯಕ್ಕೆ ಸ್ಥಳಾಂತರಿಸಲಾಗಿತ್ತು.
85 ವರ್ಷವಾದರೂ ಆರೋಗ್ಯವಾಗಿರುವ ದಾಕ್ಷಾಯಿಣಿ ಈಗಲೂ ದೇವಾಲಯದ ಎಲ್ಲಾ ಧಾರ್ಮಿಕ ಕ್ರಿಯೆಗಳಲ್ಲೂ ಭಾಗವಹಿಸುತ್ತದೆ ಹಾಗೂ ಮಾವುತ, ಸಾರ್ವಜನಿಕರೊಂದಿಗೆ ಸ್ನೇಹ ಭಾವದಿಂದ ವರ್ತಿಸುತ್ತದೆ. ಅಂತೆಯೇ ಅಲ್ಲಿರುವ ಮಾವುತರು, ಸಾರ್ವಜನಿಕರು ಸಹ ಆನೆಗೆ ಇಷ್ಟವಿಲ್ಲದ ಯಾವುದನ್ನೂ ಒತ್ತಾಯಪೂರ್ವಕಾವಗಿ ಮಾಡಿಸದೇ ಸ್ನೇಹ ಭಾವದಿಂದ ವರ್ತಿಸುತ್ತಾರೆ.ದಾಕ್ಷಾಯಿಣಿ ಆನೆಗೆ ವಾರ್ಷಿಕವಾಗಿ ಆಯುರ್ವೇದ ಥರಪಿ ನೀಡುವುದನ್ನು ಬಿಟ್ಟರೆ ಬೇರೆ ಯಾವುದೇ ರೀತಿಯ ವಿಶೇಷ ಆಹಾರ ಪದ್ಧತಿಯನ್ನು ಪಾಲಿಸಲಾಗುವುದಿಲ್ಲ ಎಂದು ಆನೆಯ ಉಸ್ತುವಾರಿ ವಹಿಸಿರುವ ಪಶುವೈದ್ಯ ಡಾ. ಟಿ ರಾಜೀವ್ ಮಾಹಿತಿ ನೀಡಿದ್ದಾರೆ. ದಾಕ್ಷಾಣಿಯಿಣಿ ಆನೆಗೆ ಇರುವ ಏಕೈಕ ಸಮಸ್ಯೆ ಎಂದರೆ ಅದು ಬಲಗಣ್ಣಿನಲ್ಲಿರುವ ದೃಷ್ಟಿ ದೋಷ.
ಇದಕ್ಕೂ ಚಿಕಿತ್ಸೆ ನೀಡಲಾಗುತ್ತಿದ್ದು, ಕ್ರಮೇಣ ಚೇತರಿಸಿಕೊಳ್ಳುತ್ತಿದೆ ಎಂದು ಡಾ. ಟಿ ರಾಜೀವ್ ತಿಳಿಸಿದ್ದಾರೆ. 2014 ರ ವರೆಗೂ ದಾಕ್ಷಾಯಿಣಿಯನ್ನು ಕೇರಳದ ಬೇರೆ ಪ್ರದೇಶಗಳಲ್ಲಿ ನಡೆಯುವ ಹಬ್ಬಗಳಿಗೆ ಕಳಿಸಲಾಗುತ್ತಿತ್ತು. ಆದರೆ ಈಗ ಮಹದೇವ ದೇವಾಲಯದ ಆಚರಣೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿದುವಂದಿದೆ. ಗಿನ್ನಿಸ್ ದಾಖಲೆಗಳ ಪ್ರಕಾರ ತೈವಾನ್ ಜೂನಲ್ಲಿ 86 ವರ್ಷ ಬದುಕಿ 2013 ರಲ್ಲಿ ಮೃತಪಟ್ಟ ಲಿನ್ ವಾಂಗ್ ಭೂಮಿಯ ಮೇಲೆ ಅತಿ ಹೆಚ್ಚು ಕಾಲ ಬದುಕಿದ್ದ ಆನೆಯಾಗಿತ್ತು. ಪ್ರಸ್ತುತ ದಾಕ್ಷಾಯಿಣಿ ಆನೆ ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿರುವ ಅನೆಯಾಗಿದೆ ಎಂದು ಅಂದಾಜಿಸಲಾಗಿದೆ.
Advertisement