ಆತನಹುದು ನಿಜ 'ನೇತಾ'…ಬ್ರಿಟೀಷರ ಬಡಿದಟ್ಟಿದಾತ…

ಬುದ್ಧಿವಂತನಾಗಿದ್ದ ಆತನದ್ದು ಐ. ಸಿ. ಎಸ್ ನಲ್ಲಿ 4 ನೇ ಶ್ರೇಯಾಂಕ . ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುರು ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ!
ಸುಭಾಷ್ ಚಂದ್ರ ಬೋಸ್
ಸುಭಾಷ್ ಚಂದ್ರ ಬೋಸ್
ಇನ್ನೇನು ಕೆಚ್ಚೆದೆಯ ಗಂಡುಗಲಿಗಳ ಕ್ರಾಂತಿಪರ್ವ ಮುಗಿದುಹೋದಂತೆ ಭಾಸವಾದ ಕಾಲವದು. ಬ್ರಿಟಿಷರ ಕಸದ ಬುಟ್ಟಿಗಳನ್ನು ತನ್ನ ಮನವಿ ಪತ್ರಗಳಿಂದ ತುಂಬುತ್ತಾ ತನಗೆ ಬೇಕಾದ ಸ್ಥಾನ, ಮಾನ, ಧನ ಪಡೆಯುತ್ತಿತ್ತು ಕಾಂಗ್ರೆಸ್. ತನ್ನ ಅನುಯಾಯಿಗಳಿಂದ ಮಹಾತ್ಮ ಎಂದು ಕರೆಸಿಕೊಂಡ ತಥಾಕಥಿತ ನಾಯಕನೊಬ್ಬ ಹೇಳಿದ್ದೇ ಸತ್ಯ, ಮಾಡಿದ್ದೇ ಧರ್ಮ, ಅನುಸರಿಸಿದ್ದೇ ನೀತಿ ಎಂದು ಮುಗ್ಧಜನತೆ ತನ್ನ ಕ್ಷಾತ್ರ ತೇಜವನ್ನು ಕಳೆದುಕೊಂಡು ಅಪ್ಪಿ ಒಪ್ಪಿಕೊಳ್ಳುತ್ತಿದ್ದ ದುರಂತ ಸಮಯ. ಆದರೆ ಅವನೊಬ್ಬನಿದ್ದ ಗಂಡುಗಲಿ. ಅವನೆದ್ದ. ಬ್ರಿಟಿಷರು ಬೆಚ್ಚಿದರು, ಕಾಂಗ್ರೆಸ್ಸಿನ ತಥಾಕಥಿತ ನಾಯಕರು ಬೆದರಿದರು. ಯಾಕೆಂದರೆ ಅವನು ಜನ್ಮತಃ ನಾಯಕ. ಸುಭಾಷ್ ಚಂದ್ರ ಬೋಸ್. ಸೂರ್ಯ ಎಂದಿಗೂ ಸೂರ್ಯನೇ ಅಲ್ಲವೇ?
ಅತಿ ಬುದ್ಧಿವಂತನಾಗಿದ್ದ ಆತ ಐ. ಸಿ. ಎಸ್ ನಲ್ಲಿ( 1920) ನಾಲ್ಕನೇ ಶ್ರೇಯಾಂಕ ಅಲಂಕೃತ. ಆದರೆ ಮಾತೃಭೂಮಿ ಕೈ ಬೀಸಿ ಕರೆಯಿತು. ಸೈನ್ಯಕ್ಕೆ ಸೇರೋಣವೆ? ನಿನಗೆ ದೃಷ್ಟಿ ದೋಷವಿದೆ ಎಂದುಬಿಟ್ಟರು ಅಧಿಕಾರಿಗಳು. ದೃಷ್ಟಿ ಸರಿಯಿಲ್ಲದಿದ್ದರೇನು, ದೂರದೃಷ್ಟಿಯಿತ್ತಲ್ಲ! ಮುಂದೆ ಈತ ಸ್ವತಂತ್ರ ಭಾರತದ ಮೊದಲ ಸೈನ್ಯವನ್ನು ಕಟ್ಟಬಹುದೆಂದು ಯಾರಾದರೂ ಊಹಿಸಿದ್ದರೆ? ಕಾಂಗ್ರೆಸ್ಸೇ ರಿದ ಆತ. ಆತನ ವರ್ಚಸ್ಸು ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿಯೂ ಸ್ಪರ್ದಿಸುವಂತೆ ಮಾಡಿತು. ಆದರೆ ಅಂತಹ ಅಪ್ರತಿಮ ನಾಯಕ ಗೆದ್ದರೆ ತನ್ನ ಕೆಲಸ ಕೆಡುತ್ತದೆಂದು ಗಾಂಧಿ ತನ್ನ ಬೆಂಬಲಿಗ ಡಾ. ಪಟ್ಟಾಭಿ ಸೀತಾರಾಮಯ್ಯರನ್ನು ಎದುರಾಳಿಯಾಗಿ ನಿಲ್ಲಿಸಿದರು (1929). ಆದರೇನು ಸುಭಾಷ್ ಭರ್ಜರಿ ಮತಗಳಿಂದ ಗೆದ್ದರು. ಗಾಂಧಿ ಸುಮ್ಮನುಳಿದಾರೆ? ಡಾ. ಪಟ್ಟಾಭಿ ಸೀತಾರಾಮಯ್ಯರ ಸೋಲು ಎಂದರೆ ನನ್ನ ಸೋಲು ಅಂದುಬಿಟ್ಟರು ಗಾಂಧಿ. ಮಾತ್ರವಲ್ಲ ಅಡಿಗಡಿಗೆ ಸುಭಾಷರನ್ನು ಅವರ ಕಾರ್ಯವನ್ನು ವಿರೋಧಿಸುತ್ತಲೇ ಬಂದರು. ಇದರಿಂದ ರೋಸಿ ಹೋದ ಸುಭಾಷ್ ರಾಜಿನಾಮೆ ಬಿಸಾಕಿ ತನ್ನದೇ ಆದ ಹಾದಿಯನ್ನು ಅನುಸರಿಸತೊಡಗಿದರು. ಆದರೂ ಮಹಾತ್ಮನಾದದ್ದು ಬೇರೆಯಾರೋ!! ಕಾಲದ ವಿಪರ್ಯಾಸವೇ? ಮರೆಗುಳಿತನವೇ? 
ಸುಭಾಷರು ನೆಹರು ಅವರಿಗಿಂತ ಹೆಚ್ಚು ಜಪ್ರಿಯತೆ ಗಳಿಸಿದ್ದರು, ನೆಹರೂ ಅವರಿಗಿಂತ ಹೆಚ್ಚು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದರು. ಆದರೆ ಸುಭಾಷರ ಜನ್ಮದಿನವೂ ಕಾಡುವ ಸಾವಿನ ರಹಸ್ಯದ ಸಂಕಟ, ಗಾಂಧಿಯವರ ಮೌನ ಒಮ್ಮೊಮ್ಮೆ ಭಾರತದ ಕೆಟ್ಟ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ್ದೇ ಈ ಗಾಂಧಿಯೇನೋ ಎನಿಸಿಬಿಡುವಂತಾಗುತ್ತದೆ.
ಸುಭಾಷ್ ಚಂದ್ರ ಬೋಸ್- ಸಾವರ್ಕರ್ ಭೇಟಿ
ವಿಗ್ರಹಗಳನ್ನು ಭಗ್ನಗೊಳಿಸುತ್ತ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದ ಸುಭಾಷರಿಗೆ ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯ ವೀರ ಸಾವರ್ಕರರನ್ನು ಭೇಟಿಯಾಗುವ ಅವಕಾಶ ಒದಗಿ ಬಂತು. ಸಾವರಕರ್ ಸುಭಾಷರಿಗೆ ವಿಗ್ರಹ ಭಗ್ನಗೊಳಿಸುವ ಬದಲು ದೇಶದ ಹೊರಗೆ ನಿಂತು ಹೋರಾಡಲು ಸಲಹೆ ಮಾಡಿದರು. ಅದು ಪರಶುರಾಮ ಮತ್ತು ಆಗಸ್ಥ್ಯರು ಭೇಟಿಯಾಗಿ ಪರಶುರಾಮರು ತನ್ನ ಕೆಲಸವನ್ನು ಮುಂದುವರಿಸಲು ಆಗಸ್ಥ್ಯರಿಗೆ ಆಶೀರ್ವಾದ ನೀಡಿದಂತೆ. ಮನದೊಳಗಿನ ಕಿಡಿಗೆ ಆಜ್ಯ ದೊರಕಿತು. ಸಮಯಕ್ಕೆ ಸರಿಯಾಗಿ ಸರಕಾರ ಸುಭಾಷರನ್ನು ಗೃಹಬಂಧನದಲ್ಲಿರಿಸಿತು. ಈಗ ಸುಭಾಷರಿಗೆ 3 ತಿಂಗಳು ಕಳೆದರೂ ಗುಣವಾಗದ ಕಾಯಿಲೆ. ತಮ್ಮ ಹಿತೈಷಿಗಳನ್ನು ಬಿಟ್ಟು ಬೇರೆ ಯಾರೂ ಭೇಟಿಯಾಗುವಂತೆ ಇಲ್ಲ. ಸರಕಾರಕ್ಕೆ ಗುಮಾನಿ ಬಂದು ಮನೆಗೆ ಬಂದು ನೋಡಿದರೆ ಪಂಜರದ ಬಾಗಿಲು ತೆರೆದಿತ್ತು. ಸುಭಾಷರು ಟೋಕಿಯೋದ ಆಕಾಶವಾಣಿಯಿಂದ ಮಾತನಾಡಿದ ಮೇಲೆಯೇ ಗೊತ್ತಾದುದು ಅವರಿಗೆ ಬಂದ ರೋಗ ಅಗಾಧ ದೇಶಪ್ರೇಮವೆಂದು.
ಅದೊಂದು ಅಪರಿಮಿತ ಸಾಹಸ. ಊಹಿಸಿಕೊಳ್ಳಿ ಒಂದುಕಡೆ ಸರಕಾರದ ಹದ್ದಿನ ಕಣ್ಣು, ಮನೆಯ ಸುತ್ತಲು ಪೋಲಿಸರು. ಇನ್ನೊಂದು ಕಡೆ ತನಗಾಗದ ಸುಭಾಷರನ್ನು ಹೇಗಾದರೂ ಮಣ್ಣು ಮುಕ್ಕಿಸಲು ಕಾದಿದ್ದ ಗಾಂಧಿ ಮತ್ತವರ ಬೆಂಬಲಿಗರು. ಸುಭಾಷರ ನಿಜವಾದ ಅಂತಃಶಕ್ತಿ ಬಾಹ್ಯಜಗತ್ತಿಗೆ ಸ್ಥೂಲವಾಗಿ ಪರಿಚಯವಾದದ್ದೇ ಆವಾಗ. ಭಾರತದಲ್ಲಿ ಅಗಾಧ ಕ್ರಾಂತಿ ಸಂಘಟನೆ ಮಾಡಿದ್ದ, ವೈಸ್ರಾಯನ ಮೇನೆಯ ಮೆಲೆ, ಬ್ರಿಟಿಷರ ಕಟ್ಟಡಗಳಿಗೆ ಬಾಂಬ್ ಎಸೆದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೊಡ್ಡಿದ, ಅಡಿಗಡಿಗೆ ತನ್ನ ರೂಪ ಬದಲಾಯಿಸುತ್ತಾ ಕ್ರಾಂತಿ ಸಂಘಟನೆ ಮಾಡುತ್ತಿದ್ದ, ಬ್ರಿಟಿಷರ ಅಧಿಕಾರಿಗಳ ಮಧ್ಯೆ ಇದ್ದು ಅವರಿಗೆ ಚಳ್ಳೆಹಣ್ಣು ತಿನ್ನಿಸಿದ, ಸೈನ್ಯವನ್ನು ಹುರಿದುಂಬಿಸಿಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಪ್ರೇರೇಪಿಸಿದ, ಕೊನೆಗೆ ಬ್ರಿಟಿಷರ ಕೈಗೆ ಸಿಗದೆ ಜಪಾನಿಗೆ ಹೋಗಿ ಜಪಾನಿನಲ್ಲಿದ್ದುಕೊಂಡು ಕ್ರಾಂತಿ ಸಂಘಟನೆ ಮಾಡಿದ್ದ ಶಿವಾಜಿ, ತಾತ್ಯಾಟೋಪೆ, ಸಾವರಕರರ, ಮುಂದುವರಿಕೆ ಎಂದೇ ಪರಿಗಣಿತನಾದ ರಾಸ್ ಬಿಹಾರಿ ಬೋಸ್ ತನ್ನ ಕ್ರಾಂತಿ ಪರಿವಾರವನ್ನು ಸುಭಾಷರಿಗೊಪ್ಪಿಸಿ ತಾನು ಕಾಲನ ಮೊರೆ ಹೊಕ್ಕರು. ಜಪಾನ್, ಜರ್ಮನಿಗಳ ಸಹಕಾರದೊಂದಿಗೆ ಭಾರತದ ಮೊದಲ ರಾಷ್ಟ್ರೀಯ ಸೇನೆ ಸಿದ್ಧವಾಗಿಯೇಬಿಟ್ಟಿತು. ಆಜಾದ್ ಹಿಂದ್ ಫೌಝ್- ಸ್ವತಂತ್ರ ಹಿಂದು ಸೇನೆ ಸುಭಾಷರ ನಾಯಕತ್ವದಲ್ಲಿ ಬೆಳೆಯತೊಡಗಿತು. ಅಷ್ಟೇ ಅಲ್ಲ ಸುಭಾಷರ ದೂರದೃಷ್ಟಿ ನೋಡಿ, ಜಗತ್ತಿನ ಏಳೆಂಟು ರಾಷ್ಟ್ರಗಳಿಂದ ಮಾನ್ಯತೆ ಪಡೆದ ಪ್ರಪ್ರಥಮ ಭಾರತೀಯ ಸರಕಾರ ಮತ್ತು ಸಂವಿಧಾನ ರಚನೆಯಾಯಿತು ವಿದೇಶಿ ನೆಲದಲ್ಲಿ!ಸಾವರಕರ್ ಬರೆದ ಪ್ರಕಟಣೆಗೆ ಮುನ್ನವೇ ಎರಡೆರಡು ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದ, ಅಸಂಖ್ಯ ಕ್ರಾಂತಿಕಾರಿಗಳಿಗೆ ಸ್ಪೂರ್ತಿಗೀತೆಯಾಗಿದ್ದ “ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ” ಐಎನ್ಎಯ ಭಗವದ್ಗೀತೆಯಾಯಿತು. ಸುಬಾಷ್ ಗುಡುಗಿದರು ” ನನಗೆ ಒಂದು ತೊಟ್ಟು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ.” ಬ್ರಿಟಿಷರು ನಡುಗಿದರು. ಗಾಂಧಿ ನೇತೃತ್ವದ ಕಾಂಗ್ರೆಸ್ ಪರಿವಾರ ಥರಗುಟ್ಟಿತು. ಆಗಲೇ ನೆಹರೂ ಹೇಳಿದ್ದು ” ಸುಬಾಷರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಬಂದರೆ ನಾನು ಖಡ್ಗ ಹಿಡಿದು ಬ್ರಿಟಿಷರನ್ನೆದುರಿಸುತ್ತೇನೆ.” ಎಂದು.
ದಿಲ್ಲಿಚಲೋ
ಶುರುವಾಯಿತು ಐಎನ್ಎಯ ಅಭಿಯಾನ. ದಿಲ್ಲಿಚಲೋ… ಅಂಡಮಾನ್, ನಿಕೋಬಾರ್ ಗಳು ಸ್ವತಂತ್ರವಾದವು. ಸುಭಾಷರು ಅವುಗಳಿಗೆ ಶಹೀದ್ ಮತ್ತು ಸ್ವರಾಜ್ಯ್ ಎಂದು ಮರುನಾಮಕರಣ ಮಾಡಿದರು. ನಾವದನ್ನು ಉಳಿಸಿಕೊಂಡಿಲ್ಲ. ಇಂಫಾಲ್, ಮಣಿಪುರ ವಶವಾದವು. ಪ್ರಕೃತಿ ಮುನಿಯಿತು. ಐಎನ್ಎಗೆ ಅದು ಶಾಪವಾಗಿ ಕಾಡಿತು. ಮಳೆ, ಮಂಜು, ಭೂಕುಸಿತದಂತಹ ವಿಕೋಪಗಳಿಂದ ಐಎನ್ಎ ಧರಾಶಾಯಿಯಾಗಬೇಕಾಯಿತು, ಬ್ರಿಟಿಷರ ಶೌರ್ಯದಿಂದಲ್ಲ. ಈ ಮಧ್ಯೆ ಸುಭಾಷರ ಸಹವರ್ತಿಗಳು ಅವರನ್ನು ಜಪಾನಿಗೆ ತೆರಳುವಂತೆ ಮನವಿ ಮಾಡಿದರು. ಮೊದಲು ಒಪ್ಪದ ಸುಭಾಷ್ ಭವಿಷ್ಯದ ಸಂಘಟನೆಯ ಹಿತದೃಷ್ಟಿಯಿಂದ ಒಪ್ಪಲೇ ಬೇಕಾಯಿತು. ಐಎನ್ಎಯ ಸೈನಿಕರು ಬ್ರಿಟಿಷರ ಸೆರೆ ಸಿಕ್ಕರು. ಆದರೆ ಐಎನ್ಎಯ ಈ ಪರಾಕ್ರಮ ಸೇನೆಯಲ್ಲಿ ಸಂಚಲನ ಮೂಡಿಸಿತು. ಸೇನೆ ದಂಗೆ ಎದ್ದಿತು. ತಾವು ಬೂಟುಗಾಲಿಂದ ಒದ್ದವರು ಇನ್ನು ತಮ್ಮನ್ನೇ ಒದೆಯುತ್ತಾರೆ ಎಂದು ಬೆದರಿದ ಬ್ರಿಟಿಷರು, ಭಾರತವನ್ನು ವಿಭಜಿಸಿ ಗಂಟುಮೂಟೆ ಕಟ್ಟಿದರು. ವಿಭಜನೆಯೊಂದು ದುರಂತ ಕಥೆ. ಲಕ್ಷಾಂತರ ಹಿಂದೂಗಳ ಕೊಲೆ, ಮಾನಿನಿಯರ ಅತ್ಯಾಚಾರ, ದರೋಡೆ, ಅಸಹ್ಯ ಹುಟ್ಟಿಸಿದ ಮಹಾತ್ಮರೆಂದೆನಿಸಿಕೊಂಡವರ ಮೌನ, ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದವರ ನಡವಳಿಕೆ ಎಲ್ಲವೂ ಇತಿಹಾಸದ ಕಾಲಗರ್ಭದಲ್ಲಿ ಸೇರಿ ಹೋದವು.
ಇತ್ತ ಸುಭಾಷರು ಜಪಾನಿಗೆ ತೆರಳಿ ಅಲ್ಲಿಂದ ತೈಪೆ ತಲುಪಿದರು. ನಂತರ ರಷಿಯಾ ಮುಖಾಂತರ ಭಾರತಕ್ಕೆ ಬರಲು ಅವರು ಹಾಕಿಕೊಂಡಿದ್ದ ಯೋಜನೆ ತಲೆಕೆಳಗಾಯಿತು. ರಷ್ಯಾ ಬ್ರಿಟಿಷರ ಆಣತಿಯಂತೆ ಅವರನ್ನು ಸೈಬೀರಿಯಾದ ಕೊರೆಯುವ ಚಳಿಗೆ ನೂಕಿತು. ನೆಹರೂ, ಗಾಂಧಿ ಪರಿವಾರ ಇಲ್ಲದ ವಿಮಾನ ದುರಂತ ಸೃಷ್ಟಿಸಿ ಸುಭಾಷರನ್ನು ಜೀವಂತ ಕೊಂದರು. ಮಾತ್ರವಲ್ಲದೆ ರಷಿಯಾ ಮತ್ತು ಬ್ರಿಟಿಷರಿಗೆ ಪತ್ರ ಬರೆದು ಸುಭಾಷರನ್ನು ಬಿಡುಗಡೆ ಮಾಡದಂತೆ ನೋಡಿಕೊಂಡರು. ಆದರೆ ಸಿಂಹ ಎಂದೆಂದಿಗೂ ಸಿಂಹವೇ. ಅದು ತಪ್ಪಿಸಿಕೊಂದು ನೇಪಾಳದ ಮುಖಾಂತರ ಭಾರತವನ್ನು ಸೇರಿತು. ಗುಮ್ ನಾಮೀ ಬಾಬಾ, ಭಗವಾನ ದಾಸ್ ಎಂಬ ಹೆಸರಲ್ಲಿ ತಿಂಗಳಿಗೊಮ್ಮೆ ಮನೆ ಬದಲಾಯಿಸುತ್ತಾ ತನ್ನದೇ ದೇಶದಲ್ಲಿ ಪರಕೀಯನಂತೆ ಬದುಕಿತು(?).
ಸಾಕ್ಷಿ ಏನು?
ಸುಬಾಷರ ಬಳಿ ಇದ್ದ ಎಲ್ಲಾ ವಸ್ತುಗಳು( ಅವರ ಚಿನ್ನ ಕಟ್ಟಿಸಿಕೊಂಡಿದ್ದ ಹಲ್ಲು, ಕನ್ನಡಕ, ಅವರ ಪ್ರೀತಿಯ ಕೊಡೆ, ಅವರ ಪತ್ರಗಳು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಒಂದು ಪ್ರತಿ…ಇತ್ಯಾದಿ) ಭಗವಾನ್ ದಾಸ್ ಬಳಿ ಇದ್ದವು. ಯಾರು ಸುಭಾಷರು ತಪ್ಪಿಸಿಕೊಳ್ಳಲು ಸಹಾಯ ಮಾಡಿದರೋ, ಯಾರು ಅವರಿಗೆ ಆಪ್ತರಾಗಿದ್ದರೋ ಅವರೇ ಭಗವಾನ್ ದಾಸ್ ಜೊತೆ ಇದ್ದರು. ಅಪರಿಚಿತರು ಬಂದಾಗ ಭಗವಾನ್ದಾಸ್ ಪರದೆಯ ಹಿಂದೆ ಕುಳಿತು ಮಾತಾಡುತ್ತಿದ್ದರು. ಸುಭಾಷ್ ಮತ್ತು ಭಗವಾನ್ ದಾಸರ ಕೈಬರಹಗಳು ಒಂದೇ ಆಗಿದ್ದವು. ನೆಹರೂ ಅಂತ್ಯಕ್ರಿಯೆಯಲ್ಲಿ ಇವರೂ ಭಾಗಿಯಾಗಿದ್ದ ಚಿತ್ರಗಳಿವೆ. ಇಂತಹ ಹತ್ತು ಹಲವು ದಾಖಲೆಗಳಿವೆ. ಇದಕ್ಕಾಗಿ ಮುಖರ್ಜಿ ಆಯೋಗ ಮತ್ತು ಸರಕಾರಗಳು ನೇಮಿಸಿದ್ದ ವಿವಿಧ ಆಯೋಗಗಳ ವರದಿಯನ್ನು ಪರಿಶೀಲಿಸಬಹುದು. ಮುಂದೆ 1985ರಲ್ಲಿ ಭಗವಾನ್ ದಾಸ್ ಅರ್ಥಾತ್ ಸುಭಾಷರು ಇಹಲೋಕ ತ್ಯಜಿಸಿದರು. ಆಗ 13 ಮಂದಿ ಮಾತ್ರ ಹಾಜರಿದ್ದರು.
ಹೌದು ಆತ ನಿಜವಾದ ನೇತಾ! ನಮ್ಮೆಲ್ಲರನ್ನು ಬಡಿದೆಚ್ಚರಿಸಿದಾತ! ಬ್ರಿಟಿಷರನ್ನು ಬಡಿದಟ್ಟಿದಾತ! ನಮ್ಮ ಸ್ವಾತಂತ್ರ್ಯದಾತ! ಆದರೆ ಯಾರು ನಮಗೆ ಸ್ವಾತಂತ್ರ್ಯ ತಂದುಕೊಟ್ಟನೋ ಅವನನ್ನು ನೆಹರೂ ಜೀವಂತ ಕೊಂದುಬಿಟ್ಟರು. ನಾವು ಮರೆತು ಬಿಟ್ಟೆವು. ಆತನ ಸ್ವಾತಂತ್ರ್ಯ ಕಸಿದುಕೊಂಡೆವು. ಎಂತಹ ಪಾಪಿಗಳು ನಾವು! ಸಾವರ್ಕರ್ ತಾತ್ಯಾಟೋಪೆಯ ಕಥನ ಬರೆದ ನಂತರ ಹೇಳಿದರು ” ತಾತ್ಯಾ ಈ ದೌರ್ಭಾಗ್ಯ ಪೂರ್ಣ ದೇಶದಲ್ಲಿ ಯಾಕೆ ಹುಟ್ಟಿದಿ. ಜಪಾನಿನಲ್ಲೋ, ಜರ್ಮನಿಯಲ್ಲೋ ಹುಟ್ಟಿದ್ದಿದ್ದರೆ ನಿನ್ನನ್ನು ಗುಡಿ ಕಟ್ಟಿ ಪೂಜಿಸುತ್ತಿದ್ದರು” ಇದೇ ಮಾತು ಈ ಮಾತು ಹೇಳಿದ ಸಾವರ್ಕರರಿಗೂ, ಸುಭಾಷರಿಗೂ ಹಾಗೂ ಅಸಂಖ್ಯಾತ ದೇಶಭಕ್ತ ಯೋಧರಿಗೂ ನಾವು ಅನ್ವಯಿಸಿಬಿಟ್ಟೆವಲ್ಲಾ? ಇವರಿಗೆಲ್ಲ ಸಿಗಬೇಕಾದ ಗೌರವ ಸಿಕ್ಕು ಇತಿಹಾಸಕ್ಕೆ ನ್ಯಾಯ ದೊರಕಿಸಿಕೊಡಬೇಕಾದುದು, ಸ್ಮರಿಸುವುದು ನಮ್ಮ ಕರ್ತವ್ಯವಲ್ಲವೇ?
-ರಾಜೇಶ್ ರಾವ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com