ಅದೊಂದು ಅಪರಿಮಿತ ಸಾಹಸ. ಊಹಿಸಿಕೊಳ್ಳಿ ಒಂದುಕಡೆ ಸರಕಾರದ ಹದ್ದಿನ ಕಣ್ಣು, ಮನೆಯ ಸುತ್ತಲು ಪೋಲಿಸರು. ಇನ್ನೊಂದು ಕಡೆ ತನಗಾಗದ ಸುಭಾಷರನ್ನು ಹೇಗಾದರೂ ಮಣ್ಣು ಮುಕ್ಕಿಸಲು ಕಾದಿದ್ದ ಗಾಂಧಿ ಮತ್ತವರ ಬೆಂಬಲಿಗರು. ಸುಭಾಷರ ನಿಜವಾದ ಅಂತಃಶಕ್ತಿ ಬಾಹ್ಯಜಗತ್ತಿಗೆ ಸ್ಥೂಲವಾಗಿ ಪರಿಚಯವಾದದ್ದೇ ಆವಾಗ. ಭಾರತದಲ್ಲಿ ಅಗಾಧ ಕ್ರಾಂತಿ ಸಂಘಟನೆ ಮಾಡಿದ್ದ, ವೈಸ್ರಾಯನ ಮೇನೆಯ ಮೆಲೆ, ಬ್ರಿಟಿಷರ ಕಟ್ಟಡಗಳಿಗೆ ಬಾಂಬ್ ಎಸೆದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೊಡ್ಡಿದ, ಅಡಿಗಡಿಗೆ ತನ್ನ ರೂಪ ಬದಲಾಯಿಸುತ್ತಾ ಕ್ರಾಂತಿ ಸಂಘಟನೆ ಮಾಡುತ್ತಿದ್ದ, ಬ್ರಿಟಿಷರ ಅಧಿಕಾರಿಗಳ ಮಧ್ಯೆ ಇದ್ದು ಅವರಿಗೆ ಚಳ್ಳೆಹಣ್ಣು ತಿನ್ನಿಸಿದ, ಸೈನ್ಯವನ್ನು ಹುರಿದುಂಬಿಸಿಬ್ರಿಟಿಷರ ವಿರುದ್ಧ ದಂಗೆಯೇಳುವಂತೆ ಪ್ರೇರೇಪಿಸಿದ, ಕೊನೆಗೆ ಬ್ರಿಟಿಷರ ಕೈಗೆ ಸಿಗದೆ ಜಪಾನಿಗೆ ಹೋಗಿ ಜಪಾನಿನಲ್ಲಿದ್ದುಕೊಂಡು ಕ್ರಾಂತಿ ಸಂಘಟನೆ ಮಾಡಿದ್ದ ಶಿವಾಜಿ, ತಾತ್ಯಾಟೋಪೆ, ಸಾವರಕರರ, ಮುಂದುವರಿಕೆ ಎಂದೇ ಪರಿಗಣಿತನಾದ ರಾಸ್ ಬಿಹಾರಿ ಬೋಸ್ ತನ್ನ ಕ್ರಾಂತಿ ಪರಿವಾರವನ್ನು ಸುಭಾಷರಿಗೊಪ್ಪಿಸಿ ತಾನು ಕಾಲನ ಮೊರೆ ಹೊಕ್ಕರು. ಜಪಾನ್, ಜರ್ಮನಿಗಳ ಸಹಕಾರದೊಂದಿಗೆ ಭಾರತದ ಮೊದಲ ರಾಷ್ಟ್ರೀಯ ಸೇನೆ ಸಿದ್ಧವಾಗಿಯೇಬಿಟ್ಟಿತು. ಆಜಾದ್ ಹಿಂದ್ ಫೌಝ್- ಸ್ವತಂತ್ರ ಹಿಂದು ಸೇನೆ ಸುಭಾಷರ ನಾಯಕತ್ವದಲ್ಲಿ ಬೆಳೆಯತೊಡಗಿತು. ಅಷ್ಟೇ ಅಲ್ಲ ಸುಭಾಷರ ದೂರದೃಷ್ಟಿ ನೋಡಿ, ಜಗತ್ತಿನ ಏಳೆಂಟು ರಾಷ್ಟ್ರಗಳಿಂದ ಮಾನ್ಯತೆ ಪಡೆದ ಪ್ರಪ್ರಥಮ ಭಾರತೀಯ ಸರಕಾರ ಮತ್ತು ಸಂವಿಧಾನ ರಚನೆಯಾಯಿತು ವಿದೇಶಿ ನೆಲದಲ್ಲಿ!ಸಾವರಕರ್ ಬರೆದ ಪ್ರಕಟಣೆಗೆ ಮುನ್ನವೇ ಎರಡೆರಡು ದೇಶಗಳಲ್ಲಿ ನಿಷೇಧಿಸಲ್ಪಟ್ಟಿದ್ದ, ಅಸಂಖ್ಯ ಕ್ರಾಂತಿಕಾರಿಗಳಿಗೆ ಸ್ಪೂರ್ತಿಗೀತೆಯಾಗಿದ್ದ “ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ” ಐಎನ್ಎಯ ಭಗವದ್ಗೀತೆಯಾಯಿತು. ಸುಬಾಷ್ ಗುಡುಗಿದರು ” ನನಗೆ ಒಂದು ತೊಟ್ಟು ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ.” ಬ್ರಿಟಿಷರು ನಡುಗಿದರು. ಗಾಂಧಿ ನೇತೃತ್ವದ ಕಾಂಗ್ರೆಸ್ ಪರಿವಾರ ಥರಗುಟ್ಟಿತು. ಆಗಲೇ ನೆಹರೂ ಹೇಳಿದ್ದು ” ಸುಬಾಷರು ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಬಂದರೆ ನಾನು ಖಡ್ಗ ಹಿಡಿದು ಬ್ರಿಟಿಷರನ್ನೆದುರಿಸುತ್ತೇನೆ.” ಎಂದು.