ಕಾಸರಗೋಡು: ಕೇರಳ ಸರ್ಕಾರದ ಕುಟುಂಬಶ್ರೀ ಯೋಜನೆಯ ಅಡಿಯಲ್ಲಿ ಕಾಸರಗೋಡಿನ ಮಹಿಳಾ ಕಿಸಾನ್ ಸಶಕ್ತೀಕರಣ ಪರಿಯೋಜನ (ಎಂಕೆಎಸ್ ಪಿ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಲಸಿನ ಬೀಜದಿಂದ ತಯಾರಾದ ಲಾಡು, ಪಾಯಸ ಗಮನ ಸೆಳೆದಿದೆ.
ಕಾಸರಗೋಡು ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಮಹಿಳೆಯರ ತಂಡ ತಯಾರಿಸಿದ್ದ 13 ಬಗೆಯ ಖಾದ್ಯಗಳ ಪೈಕಿ ಹಲಸಿನ ಬೀಜದಿಂದ ತಯಾರಾಗಿದ್ದ ಲಾಡು ಹಾಗೂ ಪಾಯಸ ಅತಿ ಹೆಚ್ಚು ಜನಪ್ರಿಯತೆ ಪಡೆದಿದ್ದು ಫುಲ್ ಡಿಮ್ಯಾಂಡ್ ಇತ್ತು.
ಕಾರ್ಯಕ್ರಮದಲ್ಲಿ ಖಾದ್ಯಗಳನ್ನು ತಯಾರಿಸಲು ಸುಮಾರು 2,000 ರೂ ಖರ್ಚು ಮಾಡಿದ್ದ ಚೆಮ್ನಾಡ್ ಪಂಚಾಯತ್ ನ ಉಷಾ ಕುಮಾರ್ ಕೆ, ಚಂದ್ರವತಿ ಎ, ಶೋಭಾ ಎಂ ಕೇವಲ ಮೂರು ದಿನಗಳಲ್ಲಿ 20,000 ರೂ ಸಂಪಾದನೆ ಮಾಡಿದ್ದು, ಈಗ ಚೆಮ್ನಾಡ್ ಪಂಚಾಯತ್ ಕಚೇರಿಯಲ್ಲಿ ಕ್ಯಾಂಟೀನ್ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.