ತಿರುಚ್ಚಿ: ಆರೋಗ್ಯ ವಿಷಯದ್ಲಲಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವವರಿಗೆ ಸಿಪಿಆರ್ ಮೂಲಕ ಪ್ರಥಮ ಚಿಕಿತ್ಸೆ ವಿಧಾನದಿಂದ ಜೀವ ಉಳಿಸಿದಬಹುದೆಂದು ತಿಳಿದೇ ಇದೆ. ಇದೇ ಮಾದರಿಯನ್ನು ಬಳಸಿ ತಿರುಚ್ಚಿಯ ದಾದಿಯೊಬ್ಬರು 20 ವರ್ಷದ ಯುವಕನ ಜೀವ ಉಳಿಸಿದ್ದಾರೆ.
ಸಿಪಿಆರ್ ನೀಡುತ್ತಿರುವ ನರ್ಸ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಮನ್ನಾರ್ ಗುಡಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವ ವನಜಾ, ತಮ್ಮ ಪತಿಯೊಂದಿಗೆ ಸಮಾರಂಭವೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೋರ್ವ ಮೇಕೆಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ.
ನಾಡಿ ಮಿಡಿತ ಕ್ಷೀಣ ಪರಿಸ್ಥಿತಿಯಲ್ಲಿದ್ದ ಆತನ ಪರಿಸ್ಥಿತಿಯನ್ನು ಕಂಡು ವನಜಾ 2-3 ನಿಮಿಷಗಳ ಕಾಲ ಸಿಪಿಆರ್ ಪ್ರಕ್ರಿಯೆ ಮೂಲಕ ಆತನ ರಕ್ಷಣೆಗೆ ಮುಂದಾದರು. ಸಿಪಿಆರ್ ಪೂರ್ಣಗೊಳ್ಳುತ್ತಿದ್ದಂತೆಯೇ ಆತ ಪ್ರಜ್ಞಾಹೀನ ಸ್ಥಿತಿಯಿಂದ ಹೊರಬಂದಿದ್ದ. ಆ ವೇಳೆಗೆ ವನಜಾ ಅವರ ಪತಿ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದರು.
ಪ್ರಾಥಮಿಕ ಚಿಕಿತ್ಸೆಯ ನಂತರ ಆತನನ್ನು ತಂಜಾವೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಮಾಹಿತಿಯ ಪ್ರಕಾರ ಯುವಕ ಗುಣಮುಖನಾಗುತ್ತಿದ್ದಾನೆ.
ಈ ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವನಜಾ ಅವರನ್ನು ಮಾತನಾಡಿಸಿದ್ದು, ಪ್ರತಿಕ್ರಿಯೆ ನೀಡಿರುವ ಆಕೆ ಇದು ನನ್ನ ಕರ್ತವ್ಯವಷ್ಟೇ ಎಂದಿದ್ದಾರೆ. ನಾನು ವಿಶೇಷವಾದದ್ದೇನನ್ನೂ ಮಾಡಿಲ್ಲ ನಾವು ದಿನ ನಿತ್ಯ ಆಸ್ಪತ್ರೆಯಲ್ಲಿ ಸಿಪಿಆರ್ ನ್ನು ಮಾಡುತ್ತಿರುತ್ತೇವೆ ಎಂದು ಹೇಳಿದ್ದಾರೆ.
Advertisement