ರಾಷ್ಟ್ರೀಯ ಗಣಿತ ದಿನ: ಈ ದಿನದ ಪ್ರಾಮುಖ್ಯತೆ ಏನು?

ಶ್ರೀನಿವಾಸ ರಾಮಾನುಜನ್ ಈ ಹೆಸರು ಕೇಳದ ಭಾರತೀಯ ಯಾರಿದ್ದಾರೆ ಹೇಳಿ, ಗಣಿತಶಾಸ್ತ್ರದಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆ ನೀಡಿದ ಭಾರತೀಯ ಗಣಿತಶಾಸ್ತ್ರಜ್ಞ. ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ 'ರಾಷ್ಟ್ರೀಯ ಗಣಿತ ದಿನ' (National Mathematics Day) ಎಂದು ಆಚರಣೆ ಮಾಡಲಾಗುತ್ತದೆ.
ಶ್ರೀನಿವಾಸ ರಾಮಾನುಜನ್
ಶ್ರೀನಿವಾಸ ರಾಮಾನುಜನ್
Updated on

ನವದೆಹಲಿ: ಶ್ರೀನಿವಾಸ ರಾಮಾನುಜನ್ ಈ ಹೆಸರು ಕೇಳದ ಭಾರತೀಯ ಯಾರಿದ್ದಾರೆ ಹೇಳಿ, ಗಣಿತಶಾಸ್ತ್ರದಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆ ನೀಡಿದ ಭಾರತೀಯ ಗಣಿತಶಾಸ್ತ್ರಜ್ಞ. ಅವರ ಜನ್ಮದಿನ ಡಿಸೆಂಬರ್ 22, ಈ ದಿನವನ್ನು ಭಾರತದಲ್ಲಿ ಪ್ರತಿ ವರ್ಷ 'ರಾಷ್ಟ್ರೀಯ ಗಣಿತ ದಿನ' (National Mathematics Day) ಎಂದು ಆಚರಣೆ ಮಾಡಲಾಗುತ್ತದೆ.

2012 ರಿಂದ ಡಿಸೆಂಬರ್ 22 ಅನ್ನು 'National Mathematics Day' ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ದಿನ'ವಾಗಿ ಆಚರಿಸಲು 2012ರಲ್ಲಿ ಅಂದಿನ ಪ್ರಧಾನಿ ಡಾ ಮನಮೋಹನ್‌ ಸಿಂಗ್ ಅವರು ಕರೆಕೊಟ್ಟರು. ರಾಮಾನುಜನ್ ಅವರ 125ನೇ ಜನ್ಮ ಜಯಂತಿ ಆಚರಣೆ ಸಂದರ್ಭದಲ್ಲಿ ಅಂದು ಮದ್ರಾಸ್ ಯೂನಿವರ್ಸಿಟಿಗೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್ ಅವರು ರಾಷ್ಟ್ರೀಯ ಗಣಿತ ದಿನ ಎಂದು ಘೋಷಣೆ ಮಾಡಿದ್ದರು. 

ಪ್ರತಿನಿತ್ಯ ಮನುಷ್ಯನ ಜೀವನದಲ್ಲಿ ಗಣಿತ ಒಂದಲ್ಲ ಒಂದು ರೂಪದಲ್ಲಿ ಬಳಕೆಯಾಗುತ್ತಲೇ ಇರುತ್ತದೆ, ಅದು ದೊಡ್ಡ ಮಟ್ಟದಲ್ಲಿರಬಹುದು, ಇಲ್ಲವೇ ಸಣ್ಣ ಮಟ್ಟದಲ್ಲಿರಬಹುದು, ಲೆಕ್ಕಕ್ಕೂ-ಮನುಷ್ಯ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ದಿನವು ನಮ್ಮ ಜೀವನದಲ್ಲಿ ಗಣಿತದ ಪ್ರಾಮುಖ್ಯತೆಯನ್ನು ಗುರುತಿಸುವುದು, ಸ್ವಯಂ-ಕಲಿಕೆ ಮತ್ತು ತಾರ್ಕಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಜನರನ್ನು ಪ್ರೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ. 

ಶ್ರೀನಿವಾಸ ರಾಮಾನುಜನ್ ಯಾರು?: ತಮಿಳುನಾಡಿನ ಈರೋಡ್‌ನಲ್ಲಿ ಡಿಸೆಂಬರ್‌ 22, 1887 ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ರಾಮಾನುಜನ್ ರವರು ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಅವರು ಗಣಿತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಗುತ್ತದೆ. 

‘The Man Who Knew Infinity’ (ಅಂತ್ಯವಿಲ್ಲದಷ್ಟು ತಿಳಿದವರು) ಎಂದೇ ರಾಮಾನುಜನ್ ಅವರು ಪ್ರಖ್ಯಾತರು. ಗಣಿತ ವಿಷಯದ ಬಗ್ಗೆ ರಾಮಾನುಜನ್ ಅವರಿಗೆ ಅಷ್ಟು ಒಲವು, ಪ್ರೀತಿ, ಆಳವಾದ ಜ್ಞಾನವಿತ್ತು. 

ಚಿಕ್ಕವರಿದ್ದಾಗಲೇ ಅವರಿಗೆ ಗಣಿತವೆಂದರೆ ಬಾಳೆಹಣ್ಣು ಸುಲಿದು ತಿಂದಂತೆ. ಅವರ ಸಹಪಾಠಿಗಳಿಗೆ ಶಾಲಾ ದಿನಗಳಲ್ಲಿ ಬೀಜಗಣಿತ, ತ್ರಿಕೋನಮಿತೀಯ ಸಮಸ್ಯೆಯಾಗಿದ್ದರೆ ರಾಮಾನುಜಂ ಅವರು ಸುಲಭವಾಗಿ ಬಗೆಹರಿಸುತ್ತಿದ್ದರು. ರಾಮಾನುಜನ್ ಅವರು 17 ನೇ ವಯಸ್ಸಿನಲ್ಲಿ ಕುಂಭಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿವೇತನವನ್ನು ಪಡೆದರು. ಆದಾಗ್ಯೂ, ಅವರು ಇತರ ಕೆಲವು ವಿಷಯಗಳಲ್ಲಿ ಹೆಚ್ಚಿನ ಅಂಕ ಗಳಿಸುವಲ್ಲಿ ವಿಫಲರಾಗಿ ಬರುತ್ತಿದ್ದ ವಿದ್ಯಾರ್ಥಿವೇತನ ನಿಂತುಹೋಯಿತು. ಆದರೆ ಅವರು ಭರವಸೆ ಕಳೆದುಕೊಳ್ಳಲಿಲ್ಲ, ಜರ್ನಲ್ ಆಫ್ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಗೆ ಕೊಡುಗೆ ನೀಡುವಾಗ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

26ನೇ ವಯಸ್ಸಿನಲ್ಲಿ ರಾಮಾನುಜನ್ ಅವರನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಅನಂತ ಸರಣಿಗಳು, ಮುಂದುವರಿದ ಭಿನ್ನರಾಶಿಗಳು, ಅಸಮರ್ಪಕ ಅನುಕಲನಗಳು ಮತ್ತು ಸಂಖ್ಯಾ ಸಿದ್ಧಾಂತದ ಕುರಿತು 120 ಗಣಿತದ ಪ್ರಮೇಯಗಳ ಹೇಳಿಕೆಗಳಿಗಾಗಿ ಅವರನ್ನು ಆಹ್ವಾನಿಸಲಾಗಿತ್ತು.

ಟ್ರಿನಿಟಿ ಕಾಲೇಜಿನಲ್ಲಿ ಫೆಲೋ ಆಗಿ ಆಯ್ಕೆಯಾದ ಮೊದಲ ಭಾರತೀಯ ಶ್ರೀನಿವಾಸ ರಾಮಾನುಜನ್. ಎಲಿಪ್ಟಿಕ್ ಫಂಕ್ಷನ್‌ಗಳು ಮತ್ತು ಸಂಖ್ಯೆಗಳ ಸಿದ್ಧಾಂತದ ಕುರಿತು ತಮ್ಮ ಕೆಲಸಕ್ಕಾಗಿ ಲಂಡನ್‌ನ ರಾಯಲ್ ಸೊಸೈಟಿಯ ಕಿರಿಯ ಫೆಲೋ ಆಗಿದ್ದರು. 3,000 ಕ್ಕೂ ಹೆಚ್ಚು ಗಣಿತದ ಫಲಿತಾಂಶಗಳು ಮತ್ತು ಸಮೀಕರಣಗಳನ್ನು ಸಂಗ್ರಹಿಸಿದ ನಂತರ, ಗಣಿತಜ್ಞ 1919 ರಲ್ಲಿ ಭಾರತಕ್ಕೆ ಮರಳಿದರು. 1920ರಲ್ಲಿ ಕ್ಷಯರೋಗದಿಂದಾಗಿ ನಿಧನರಾದರು.

ರಾಷ್ಟ್ರೀಯ ಗಣಿತ ದಿನ ಆಚರಣೆಯ ಮಹತ್ವವೇನು? ಮಾನವೀಯತೆಯ ಬೆಳವಣಿಗೆ, ಗಣಿತದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಸಹ 'ರಾಷ್ಟ್ರೀಯ ಗಣಿತ ದಿನ' ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರದ ಯುವ ಪೀಳಿಗೆಗೆ ಗಣಿತ ಕ್ಷೇತ್ರಕ್ಕೆ ಕೊಡುಗೆ ನೀಡಿದ ನಮ್ಮದೇ ದೇಶದ ಗಣಿತಜ್ಞ ಶ್ರೀನಿವಾಸ ರಾಮಾನುಜನರ್‌ ರವರ ಕೊಡುಗೆಗಳನ್ನು ತಿಳಿಸುವುದು, ಯುವ ಪೀಳಿಗೆಯಲ್ಲಿ ಗಣಿತವನ್ನು ಕಲಿಯಲು ಪ್ರೇರೇಪಿಸಲು, ಯುವಕರಲ್ಲಿ ಗಣಿತ ಕಲಿಕೆಯಿಂದ ಆಗುವ ಉಪಯೋಗಗಳನ್ನು ತಿಳಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವು ಸಹ.

ಗಣಿತ ದಿನ ಆಚರಣೆ ದಿನದಂದು ಶಿಬಿರಗಳ ಮೂಲಕ ಗಣಿತ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಸಂಬಂಧಿತ ಕ್ಷೇತ್ರಗಳಲ್ಲಿ ಗಣಿತ ಮತ್ತು ಸಂಶೋಧನೆಗಾಗಿ ಬೋಧನಾ -ಕಲಿಕಾ ಸಾಮಾಗ್ರಿಗಳ (ಟಿಎಲ್‌ಎಂ) ಅಭಿವೃದ್ಧಿ, ಉತ್ಪಾದನೆ ಮತ್ತು ಪ್ರಸರಣದ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಗಣ್ಯರ ಶುಭಾಶಯ: ಇಂದು ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಗಣ್ಯರು ಸಾಮಾಜಿಕ ಜಾಲತಾಣ ಮೂಲಕ ದೇಶದ ಜನತೆಗೆ ಗಣಿತ ದಿನದ ಶುಭಾಶಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com