'ಫೋಟೋ ಮ್ಯೂಸಿಯಂ' ಆಗಿ ಬದಲಾಗಲಿದೆ ಗಾಜನೂರಿನ ಡಾ.ರಾಜ್ ಕುಮಾರ್ ಪೂರ್ವಜರ ಮನೆ

ಕನ್ನಡದ ನಟಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇದು ಸಿಹಿಸುದ್ದಿ. ರಾಜ್ ಕುಮಾರ್ ಅವರ ಪೂರ್ವಜರ ಮನೆ ಕರ್ನಾಟಕ-ತಮಿಳು ನಾಡಿನ ಗಡಿಯಲ್ಲಿರುವ ದೊಡ್ಡ ಗಾಜನೂರಿನ ಹಳೆ ಮನೆ ಸದ್ಯದಲ್ಲಿಯೇ ಫೋಟೋ ಸಂಗ್ರಹಾಲಯವಾಗಿ ಬದಲಾಗಲಿದೆ.
ದೊಡ್ಡಗಾಜನೂರಿನಲ್ಲಿರುವ ಡಾ ರಾಜ್ ಕುಮಾರ್ ಪೂರ್ವಿಕರ ಮನೆ
ದೊಡ್ಡಗಾಜನೂರಿನಲ್ಲಿರುವ ಡಾ ರಾಜ್ ಕುಮಾರ್ ಪೂರ್ವಿಕರ ಮನೆ

ಮೈಸೂರು: ಕನ್ನಡದ ನಟಸಾರ್ವಭೌಮ ದಿವಂಗತ ಡಾ.ರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಇದು ಸಿಹಿಸುದ್ದಿ. ರಾಜ್ ಕುಮಾರ್ ಅವರ ಪೂರ್ವಜರ ಮನೆ ಕರ್ನಾಟಕ-ತಮಿಳು ನಾಡಿನ ಗಡಿಯಲ್ಲಿರುವ ದೊಡ್ಡ ಗಾಜನೂರಿನ ಹಳೆ ಮನೆ ಸದ್ಯದಲ್ಲಿಯೇ ಫೋಟೋ ಸಂಗ್ರಹಾಲಯವಾಗಿ ಬದಲಾಗಲಿದ್ದು ಇಲ್ಲಿ ಡಾ ರಾಜ್ ಕುಮಾರ್ ಮತ್ತು ಅವರ ಕುಟುಂಬದವರ ಅಪರೂಪದ ಫೋಟೋಗಳನ್ನು ಜನರು ಕಣ್ತುಂಬಿಕೊಳ್ಳಬಹುದು. 

ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ, ಹೆಂಚಿನ ಛಾವಣಿಯ ಮನೆಯಲ್ಲಿ ರಾಜ್‌ಕುಮಾರ್ ಕುಟುಂಬದ ಅಪರೂಪದ ಫೋಟೋಗಳನ್ನು ಹೊಂದಿರುತ್ತದೆ, ಇದರಲ್ಲಿ ಇತ್ತೀಚೆಗಷ್ಟೆ ನಿಧನರಾದ ಕನ್ನಡಿಗರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರ ಫೋಟೋಗಳು ಕೂಡ ಇರುತ್ತವೆ.

ತಮ್ಮ ಪೂರ್ವಜರ, ಬಾಲ್ಯದಲ್ಲಿ ಕಳೆದಿದ್ದ ಗಾಜನೂರಿನ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಬೇಕೆಂಬುದು ಅಪ್ಪು ಅವರ ಕನಸಾಗಿತ್ತು. ಅವರ ಕನಸನ್ನು ಇದೀಗ ನನಸು ಮಾಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ಅಪ್ಪು ಅವರ ಕನಸನ್ನು ನನಸಾಗಿಸಲು ಈ ಪಾಳುಬಿದ್ದ ಮನೆಯನ್ನು ನವೀಕರಿಸಲು ಮುಂದಾಗಿದ್ದಾರೆ. ಸಾವಿಗೂ ಮೂರು ತಿಂಗಳ ಹಿಂದೆ ಗಾಜನೂರಿಗೆ ಭೇಟಿ ನೀಡಿದ್ದ ಪುನೀತ್ ಮನೆಯ ಸ್ಥಿತಿ ಕಂಡು ನಿರಾಸೆಗೊಂಡಿದ್ದರು ಎಂದು ಡಾ.ರಾಜ್ ಕುಮಾರ್ ಅವರ ಸೋದರಳಿಯ ಗೋಪಾಲ್ ಹೇಳುತ್ತಾರೆ. ಮನೆಯವರಿಗೆ ಭಾವನಾತ್ಮಕ ಸಂಬಂಧವಿರುವುದರಿಂದ ಮನೆ ದುರಸ್ತಿ ಮಾಡುವಂತೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದರು ಎಂದು ಹೇಳುತ್ತಾರೆ.

ಗಾಜನೂರಿನ ಮನೆಯನ್ನು ಮ್ಯೂಸಿಯಂ ಆಗಿ ಬದಲಿಸಿ ಅಲ್ಲಿಗೆ ಬರುವವರಿಗೆ ಡಾ ರಾಜ್ ಕುಮಾರ್ ಮತ್ತು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಕೊಡುಗೆಯನ್ನು ಪರಿಚಯಿಸಬೇಕೆಂಬುದು ಪುನೀತ್ ಅವರ ಬಯಕೆಯಾಗಿತ್ತು. ಆದರೆ ದುರದೃಷ್ಟವೆಂಬಂತೆ ಪುನೀತ್ ರಾಜ್ ಕುಮಾರ್ ಹಠಾತ್ ಆಗಿ ನಿಧನರಾಗಿ ಹೋದರು. ಇದೀಗ ಮ್ಯೂಸಿಯಂ ರಚನೆಗೆ ಮುಂದಾಗಿರುವ ಕುಟುಂಬಸ್ಥರು ಪುನೀತ್ ಫೋಟೋಗಳನ್ನು ಕೂಡ ಸೇರಿಸಲು ನಿರ್ಧರಿಸಿದ್ದಾರೆ. ಪಾಳುಬಿದ್ದ ಮನೆಯಲ್ಲಿನ ಮರದ ಕಂಬಗಳು ಮತ್ತು ನೆಲದ ಟೈಲ್ಸ್ ಗಳನ್ನು ಬದಲಿಸಲು ಗೋಪಾಲ್ ಮುಂದಾಗಿದ್ದಾರೆ. ಹಾಗೆಂದು ಮನೆಯ ಮೂಲ ರಚನೆಯನ್ನು ಬದಲಿಸುವುದಿಲ್ಲ. 

ಪುನೀತ್ ರಾಜ್ ಕುಮಾರ್ ಗಾಜನೂರಿಗೆ ಬಂದಾಗಲೆಲ್ಲ ಇಲ್ಲಿಗೆ ಭೇಟಿ ನೀಡುತ್ತಿದ್ದರಂತೆ. ಇಲ್ಲಿ ಹಲವು ಚಿತ್ರಗಳು ಶೂಟಿಂಗ್ ಆಗಿವೆ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ಪಕ್ಕದ ತಲವಾಡಿಯ ಪುನೀತ್ ಅಭಿಮಾನಿ ರಾಜೇಶ್, ಈ ಫೋಟೋ ಮ್ಯೂಸಿಯಂ ಕೇವಲ ರಾಜ್ಯದ ಜನತೆಯನ್ನು ಮಾತ್ರವಲ್ಲದೆ ನೆರೆಯ ತಮಿಳು ನಾಡಿನ ಜನರನ್ನು ಸಹ ಆಕರ್ಷಿಸಬಹುದು. ಈಗಾಗಲೇ ಪ್ರವಾಸಿ ಪ್ರೇಕ್ಷಣೀಯ ಸ್ಥಳವಾದ ಸುವರ್ಣವತಿ ಮತ್ತು ಚಿಕ್ಕಹೊಳೆ ಅಣೆಕಟ್ಟು, ಕೆ ಗುಡಿ ಸಫಾರಿ, ಬನ್ನರಿಯಮ್ಮನ ದೇವಸ್ಥಾನದ ಜೊತೆ ಈ ಗಾಜನೂರಿನ ಫೋಟೋ ಮ್ಯೂಸಿಯಂ ಕೂಡ ಪ್ರವಾಸಿಗರಿಗೆ ಭೇಟಿಯ ಸ್ಥಳವಾಗಲಿದೆ. ಇದು ಚಾಮರಾಜನಗರ-ಕೊಯಂಬತ್ತೂರು ರಾಷ್ಟ್ರೀಯ ಹೆದ್ದಾರಿಯ 8 ಕಿಲೋ ಮೀಟರ್ ವ್ಯಾಪ್ತಿಯಲ್ಲಿದೆ ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com