ನಾಯಿ ಕಣ್ಣು.. ನರಿ ಕಣ್ಣು... ರಾಷ್ಟ್ರಪತಿಗಳಿಗೆ ದೃಷ್ಟಿ ನೀವಳಿಸಿ ಪ್ರಶಸ್ತಿ ಪಡೆದ ಮಂಜಮ್ಮ ಜೋಗತಿ: ವಿಡಿಯೋ ವೈರಲ್

ಕರ್ನಾಟಕ ಜನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಜೋಗತಿ ಮಂಜಮ್ಮ ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುವ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೃಷ್ಟಿ ತೆಗೆದಿದ್ದಾರೆ.
ರಾಷ್ಟ್ರಪತಿಗಳಿಗೆ ದೃಷ್ಟಿ ತೆಗೆಯುತ್ತಿರುವ ಜೋಗತಿ ಮಂಜಮ್ಮ
ರಾಷ್ಟ್ರಪತಿಗಳಿಗೆ ದೃಷ್ಟಿ ತೆಗೆಯುತ್ತಿರುವ ಜೋಗತಿ ಮಂಜಮ್ಮ

ಹುಬ್ಬಳ್ಳಿ:  ಜಾನಪದ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಕನ್ನಡತಿ ಜೋಗತಿ ಮಂಜಮ್ಮ ಪ್ರಶಸ್ತಿ ಸ್ವೀಕರಿಸಿದ ದೃಶ್ಯ  ವೈರಲ್ ಆಗಿದೆ. ಕರ್ನಾಟಕ ಜನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷೆ ಜೋಗತಿ ಮಂಜಮ್ಮ ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುವ ಮೊದಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೃಷ್ಟಿ ತೆಗೆದಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ 2021ರ ಪ್ರದ್ಮಶ್ರಿ ಪ್ರಶಸ್ತಿ ವಿತರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ ಜೋಗತಿ ಮಂಜಮ್ಮ ನಗು ಎಲ್ಲರ ಹೃದಯ ಗೆದ್ದಿತು. ವೇದಿಕೆ ಬಳಿ ಆಗಮಿಸಿದ ಮಂಜಮ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ದೃಷ್ಟಿ ತೆಗೆದಿದ್ದಾರೆ.

ದೃಷ್ಟಿ ತೆಗೆದು ರಾಮನಾಥ್ ಕೋವಿಂದ್‌ಗೆ ಶುಭಕೋರಿದ್ದಾರೆ. ಜೋಗತಿ ಮಂಜಮ್ಮಗೆ ನೆರೆದಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ಶುಭ ಕೋರಿದ್ದಾರೆ. ಇದೀಗ ದೃಷ್ಟಿ ತೆಗೆದು ಪದ್ಮಶ್ರಿ ಪ್ರಶಸ್ತಿ ಸ್ವೀಕರಿಸುತ್ತಿರುವ ಜೋಗತಿ ಮಂಜಮ್ಮ ವಿಡಿಯೋ ವೈರಲ್ ಆಗಿದೆ.

ಪ್ರಶಸ್ತಿ ಸ್ವೀಕರಿಸಿದ ಮೇಲೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮಂಜಮ್ಮ ಜೋಗತಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಪ್ರಶಸ್ತಿ ದೊರಕಿರುವುದು ಸಂತೋಷವಾಗಿದೆ. ಇನ್ನು ಮುಂದಾದರೂ ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದಿದ್ದಾರೆ.

ಪ್ರಶಸ್ತಿ ಸಮಾರಂಭದ ಆಹ್ವಾನವನ್ನು ಸ್ವೀಕರಿಸಿದಾಗ, ನಾನು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಇಳಕಲ್ ಸೀರೆಯನ್ನು ಧರಿಸಲು ನಿರ್ಧರಿಸಿದ್ದೆ. ಸಮಾರಂಭದಲ್ಲಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ದಣಿದಿದ್ದನ್ನು ನಾನು ಗಮನಿಸಿದೆ, ಆದ್ದರಿಂದ ನಾವು ಮಾಡುವ ಆಚರಣೆಯನ್ನು ಮಾಡಲು ನಿರ್ಧರಿಸಿದೆ. ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ನೀವಳಿಸಿದೆ ಎಂದು ಕಲಾವಿದೆ ಹೇಳಿದರು.

ಮಂಜಮ್ಮ ಪದ್ಮ ಪ್ರಶಸ್ತಿ ಪಡೆದ ಎರಡನೇ ತೃತೀಯಲಿಂಗಿಯಾಗಿದ್ದಾರೆ. ಈ ಮೊದಲು ತಮಿಳುನಾಡಿನ ಭರತನಾಟ್ಯಂ ನೃತ್ಯಗಾರ್ತಿ ನರ್ತಕಿ ನಟರಾಜ್ ಅವರು 2019 ರಲ್ಲಿ ಪ್ರಶಸ್ತಿ ಪಡೆದಿದ್ದರು. ಮಂಜಮ್ಮ ಜೋಗತಿ ಅವರು ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಗ್ರಾಮದವರಾಗಿದ್ದಾರೆ.

ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಜೋಗತಿಯರು, ತಮ್ಮ ಸಹವರ್ತಿ ಮಂಗಳಮುಖಿಯರ ಜೀವನದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಅವರು ಸಾಂಪ್ರದಾಯಿಕ ಜೋಗತಿ ನೃತ್ಯ ಪ್ರಕಾರವನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಂಗಳಮುಖಿಯರು ಗೌರವಾನ್ವಿತ ಜೀವನವನ್ನು ನಡೆಸಲು ಸಹಾಯ ಮಾಡುವ ಸಾಂಪ್ರದಾಯಿಕ ಕಲೆಯಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ತರಬೇತಿ ನೀಡಲು ಅಕಾಡೆಮಿಯನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com