ಜೈಪುರ: ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಇತ್ತೀಚೆಗೆ ಸಪ್ತಪದಿ ತುಳಿದ ರಾಜಸ್ತಾನದ ವಧು ಅಂಜಲಿ ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ 75 ಲಕ್ಷ ರೂ ಮೊತ್ತವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿರುವ ನಡೆಗೆ ಇದೀಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಕಿಶೋರ್ ಸಿಂಗ್ ಕಾನೋದ್ ಅವರು ತನ್ನ ಮಗಳ ಕೈ ಹಿಡಿಯುವ ವರನಿಗೆ ನೀಡಲು ₹75 ಲಕ್ಷ ರೂ. ಮೀಸಲಿಟ್ಟಿದ್ದರು. ಆದರೆ, ಮಗಳು ಅಂಜಲಿ ಕಾನ್ವರ್, ನ. 21 ರಂದು ಹಸೆಮಣೆ ಏರುವ ಮೊದಲು ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ನೀಡಿ ಎಂಬುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪಿದ ತಂದೆಯು ಮದುವೆ ಬಳಿಕ ಅಷ್ಟೂ ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ನೀಡಿದ್ದಾರೆ. ಇಂತಹ ಮಾದರಿ ಕೆಲಸದ ಕುರಿತು ಮಾಧ್ಯಮಗಳು ವರದಿ ಮಾಡಿವೆ.
ಲಕ್ಷ ಲಕ್ಷ ರೂ. ವರದಕ್ಷಿಣೆ ಸಿಗುತ್ತದೆ ಎಂದರೆ ಬಾಯಿ ಬಿಡುವ ಗಂಡಂದಿರು ಇರುವಾಗ, ಅಂಜಲಿ ಪತಿ ಮಹಾಂತ ಪ್ರತಾಪ್ ಅವರು ಸಹ ಹಣವನ್ನು ಒಳ್ಳೆಯ ಕಾರ್ಯಕ್ಕೆ ನೀಡಲು ಒಪ್ಪಿರುವ ಕುರಿತು ಜಾಲ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
‘ಮದುವೆ ಬಳಿಕ ಅಂಜಲಿಯು ತನ್ನ ಇಚ್ಛೆಯ ಕುರಿತು ಮಹಾಂತ ಪ್ರತಾಪ್ಗೆ ಪತ್ರದ ಮೂಲಕ ತಿಳಿಸಿದ್ದಾರೆ. ಸಂಬಂಧಿಕರ ಎದುರೇ ಮಹಾಂತ ಪ್ರತಾಪ್ ಪತ್ರ ಓದಿದ್ದಾರೆ. ಆಗ ಸಂಬಂಧಿಕರೆಲ್ಲರೂ ಒಳ್ಳೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಂಜಲಿಯ ತಂದೆಯು, ಖಾಲಿ ಚೆಕ್ ಕೊಟ್ಟು, ಎಷ್ಟು ಬೇಕಾದರೂ ಬರೆದುಕೊ ಮಗಳೇ ಎಂದಿದ್ದಾರೆ’ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಧ್ಯಮ ವರದಿ ಫೋಟೋ ತಿಳಿಸಿದೆ.
ಈಗಾಗಲೇ ಒಂದು ಕೋಟಿ ರೂ. ವೆಚ್ಚದಲ್ಲಿ ಕಿಶೋರ್ ಸಿಂಗ್ ಅವರು ಹಾಸ್ಟೆಲ್ ನಿರ್ಮಿಸುತ್ತಿದ್ದಾರೆ. ಅದು ಪೂರ್ಣಗೊಳ್ಳಲು ₹50 ರಿಂದ ₹75 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದು, ಹಾಗಾಗಿಯೇ ಅಂಜಲಿಯು ವರದಕ್ಷಿಣೆ ಹಣವನ್ನು ಹಾಸ್ಟೆಲ್ ನಿರ್ಮಾಣಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Advertisement