ಚಿತ್ರದುರ್ಗ: ಉಮೇಶ್ ಟಿ ಪಿ ಅವರಿಗೆ ಶಿಕ್ಷಣವೇ ಗುರಿ, ಧ್ಯೇಯ. ಬುಡಕಟ್ಟು ಜನಾಂಗದ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಹಿಡಿದು ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುವರೆಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಅಮೃತಪುರ ಗ್ರಾಮವನ್ನು ಅವರು ಬದಲಾಯಿಸಿದ್ದಾರೆ.
ಅಮೃತಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ 42 ವರ್ಷದ ಉಮೇಶ್ ಅವರಿಗೆ 2022ನೇ ಸಾಲಿನ ಅತ್ಯುತ್ತಮ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. 2004ರಲ್ಲಿ ಬಳ್ಳಾರಿ ಜಿಲ್ಲೆಯ ಚಿಕ್ಕಬೆಳ್ಳಾರಿಯಲ್ಲಿ ಶಿಕ್ಷಕ ವೃತ್ತಿಗೆ ಸೇರ್ಪಡೆಯಾದ ಉಮೇಶ್ ಅವರು ನಂತರ ಹೊಳಲ್ಕೆರೆ ತಾಲ್ಲೂಕಿನ ಕೇಶವಪುರ ಶಾಲೆಯಲ್ಲಿ ಬೋಧನೆ ಮಾಡುತ್ತಿದ್ದರು. ನಂತರ ಅಮೃತಪುರ ಸರ್ಕಾರಿ ಶಾಲೆಗೆ ಸೇರ್ಪಡೆಯಾದರು. ಅಲ್ಲಿ ಕಳೆದ 12 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಅಮೃತಪುರ ಒಂದು ಕುಗ್ರಾಮವಾಗಿದ್ದು ಇಲ್ಲಿ ಬುಡಕಟ್ಟು ಜನಾಂಗದವರು ನೆಲೆಸಿದ್ದಾರೆ. ಇಲ್ಲಿಗೆ ಇನ್ನೂ ಬಸ್ಸು ಸೌಲಭ್ಯವಿಲ್ಲ. ಬಸ್ಸಿನಲ್ಲಿ ಹೋಗಬೇಕೆಂದರೆ ಚಿತ್ರಹಳ್ಳಿ ಗೇಟ್ ಬಸ್ ನಿಲ್ದಾಣಕ್ಕೆ 5 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು.
ಅರೆ ಅಲೆಮಾರಿ ಬುಡಕಟ್ಟುಗಳು ಜನಾಂಗವಾದ ಕಾಡು ಗೊಲ್ಲರು ವಾಸಿಸುತ್ತಿರುವ ಈ ಪ್ರದೇಶದ ಜನರು ಶಿಕ್ಷಣದಿಂದ ಬಹುಪಾಲು ವಂಚಿತರಾಗಿದ್ದಾರೆ. ಉಮೇಶ್ ಅವರು ಈ ಶಾಲೆಗೆ ಶಿಕ್ಷಕ ವೃತ್ತಿಗೆ ಸೇರಿದಾಗ ಇಲ್ಲಿನ ಮಕ್ಕಳು ಮತ್ತು ಅವರ ಮನೆಯವರಲ್ಲಿ ಶಿಸ್ತು ಮತ್ತು ಸ್ವಚ್ಛತೆ ತರುವ ಪ್ರಯತ್ನ ಮಾಡಿದರು, ಅದರಲ್ಲಿ ಯಶಸ್ಸು ಕೂಡ ಕಂಡರು. ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಜೊತೆ ಸೇರಿ ಹಣ ಸಂಗ್ರಹಿಸಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಶಾಲೆಗೆ ಕಟ್ಟಡ, ಅಡುಗೆ ಮನೆ, ಹಾಲ್, ಶೌಚಾಲಯ, ಗ್ರಂಥಾಲಯ ಮತ್ತು ಸ್ಮಾರ್ಟ್ ತರಗತಿಗಳನ್ನು ತರುವಲ್ಲಿ ಕೂಡ ಉಮೇಶ್ ಯಶಸ್ವಿಯಾದರು.
ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಮೂಡಿಸಲು ಶಾಲೆಯಲ್ಲಿ ಮಿನಿ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಿದರು. ಇದಕ್ಕಾಗಿ ಅವರು ಚಿತ್ರದುರ್ಗದ ಕಾಲೇಜುಗಳಿಂದ ಬಳಸಿದ ಮತ್ತು ಹಳೆಯದಾದ ವೈಜ್ಞಾನಿಕ ಉಪಕರಣಗಳು ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಿ ಮಕ್ಕಳಿಗೆ ಪ್ರಯೋಗಗಳನ್ನು ಪ್ರದರ್ಶಿಸಿದರು.
ಎನ್ಜಿಒಗಳು ಮೂಲಸೌಕರ್ಯಕ್ಕೆ ಕೊಡುಗೆ: 2016 ರಲ್ಲಿ, OSAAT (ಒನ್ ಸ್ಕೂಲ್ ಅಟ್ ಎ ಟೈಮ್) ಎಂಬ ಖಾಸಗಿ ಎನ್ಜಿಒ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಾಲ್ಕು ಸುಸಜ್ಜಿತ ಕೊಠಡಿಗಳು, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶೌಚಾಲಯಗಳು, 20 ಡೆಸ್ಕ್ಗಳು ಮತ್ತು 60 ಓದುವ ಅಧ್ಯಯನ ಟೇಬಲ್ಗಳನ್ನು ಶಾಲೆಗೆ ನೀಡಿತು. OSAAT, ಗ್ರಾಮೀಣ ಶಾಲೆಗಳ ಮೂಲಸೌಕರ್ಯವನ್ನು ಪುನರ್ನಿರ್ಮಾಣ ಮಾಡಲು ಮೀಸಲಾಗಿರುವ ಲಾಭರಹಿತ ಸಂಸ್ಥೆಯಾಗಿದೆ. ಇದನ್ನು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಭಾರತೀಯ ಮೂಲದ ಎಂಟು ಐಟಿ ವೃತ್ತಿಪರರ ಗುಂಪು ಸ್ಥಾಪಿಸಿದೆ.
ಬೆಂಗಳೂರು ಮೂಲದ ರೋಟರಿ ಸಂಸ್ಥೆಯು ಮಕ್ಕಳಿಗಾಗಿ 3 ಲಕ್ಷ ರೂಪಾಯಿ ವೆಚ್ಚದ ವಾಟರ್ ಫಿಲ್ಟರ್ ನ್ನು ನೀಡಿದೆ. ಅಧ್ಯಯನದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಬೆಂಬಲ ನೀಡಿ ಸ್ಥಳೀಯ ದಾನಿಗಳ ನೆರವಿನಿಂದ 3 ಲಕ್ಷ ರೂಪಾಯಿ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗಿದೆ. ಉಮೇಶ್ ಅವರ ಸ್ನೇಹಿತರೊಬ್ಬರು ಲ್ಯಾಪ್ ಟಾಪ್ ಖರೀದಿಗೆ ಹಣ ನೀಡಿದ್ದು, ಅವುಗಳನ್ನು ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕಾಗಿ ಬಳಸಲಾಗುತ್ತಿದೆ.
ಉಮೇಶ್ ಅವರು ಕಲಿಸಿದ ಮೊದಲ ತಂಡದ ವಿದ್ಯಾರ್ಥಿಗಳು ಈಗ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ, ಕೆಲವರು ಸರ್ಕಾರಿ ಸೇವೆಗೆ ಸೇರಿದ್ದಾರೆ. 2012ರಲ್ಲಿ ಶಾಲೆಯು ಕೇವಲ 32 ಮಕ್ಕಳನ್ನು ಹೊಂದಿತ್ತು,ಈಗ ನಿಯಮಿತವಾಗಿ ಬರುವ 85 ಮಕ್ಕಳಿಗೆ ಸಂಖ್ಯೆ ಹೆಚ್ಚಾಯಿತು. ನಮ್ಮ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು 2,500 ಕ್ಕೂ ಹೆಚ್ಚು ಪುಸ್ತಕಗಳಿವೆ. ಭವಿಷ್ಯದ ನಾಯಕರನ್ನು ರೂಪಿಸುವ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ. ಇ-ಲರ್ನಿಂಗ್ ಪ್ಲಾಟ್ಫಾರ್ಮ್ನ ಬಳಕೆಯು ಹಲವು ವಿಷಯಗಳ ಬಗ್ಗೆ ಜ್ಞಾನವನ್ನು ಒದಗಿಸಲು ನಮಗೆ ಮತ್ತು ನಮ್ಮ ಮಕ್ಕಳಿಗೆ ಸಹಾಯ ಮಾಡಿದೆ ಎಂದು ಉಮೇಶ್ ದಿ ನ್ಯೂ ಸಂಡೆ ಎಕ್ಸ್ಪ್ರೆಸ್ಗೆ ತಿಳಿಸಿದರು.
ನಾನು ಕಳೆದ 19 ವರ್ಷಗಳಿಂದ ಸಮಾಜಕ್ಕಾಗಿ ಉತ್ತಮ ಮಕ್ಕಳ ಅಮೂಲ್ಯ ಆಸ್ತಿಯನ್ನು ನೀಡಿದ್ದೇನೆ. ನನ್ನ ಈ ಪ್ರಯಾಣವನ್ನು ಮುಂದುವರಿಸುತ್ತೇನೆ. ಪ್ರತಿಯೊಬ್ಬ ಶಿಕ್ಷಕರು ತಮ್ಮ ವಾರ್ಡ್ ಮತ್ತು ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ತಲುಪುವಂತೆ ಮತ್ತು ಸರ್ಕಾರಿ ಶಾಲೆಗಳು ಉಳಿಯುವಂತೆ ನೋಡಿಕೊಂಡರೆ ಸರ್ಕಾರಿ ಶಾಲೆಗಳು ಉಳಿಯಬಹುದು ಎಂದು ಉಮೇಶ್ ಹೇಳಿದರು. ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನದ ಅಧ್ಯಯನವನ್ನು ಹುಟ್ಟುಹಾಕಲು ಪ್ರಯೋಗಾಲಯವಿಲ್ಲದ ಕಾರಣ, ನಾನು ನೆರೆಹೊರೆಯ ಪ್ರೌಢಶಾಲೆಗಳು ಮತ್ತು ವಿಜ್ಞಾನ ಕಾಲೇಜಿಗೆ ಭೇಟಿ ನೀಡಲು ನಿರ್ಧರಿಸಿದೆ, ಅಲ್ಲಿ ನಾನು ಬೋಧನೆಗಾಗಿ ಬಳಸುವ ಬೀಕರ್ಗಳು ಮತ್ತು ಇತರ ಉಪಕರಣಗಳು ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಿದೆ. ನನ್ನ ಅನೇಕ ವಿದ್ಯಾರ್ಥಿಗಳು ಈಗ ಪಿಯುನಲ್ಲಿ ವಿಜ್ಞಾನ ವಿಷಯ ಒದುತ್ತಿದ್ದಾರೆ ಎಂದರು.
ಹೊಳಲ್ಕೆರೆ ಬಿಇಒ ಶ್ರೀನಿವಾಸ್, ಕಳೆದ 10 ವರ್ಷಗಳಿಂದ ಈ ಶಾಲೆಗೆ ಭೇಟಿ ನೀಡುತ್ತಿದ್ದು, ಶೇಕಡವಾರು ಹಾಜರಾತಿ ಮತ್ತು ದಾಖಲಾತಿ ಹೊಂದಿರುವ ಈ ಶಾಲೆ ಪರಿವರ್ತನೆಯಾಗಿದೆ. ಮಕ್ಕಳು ಅಧ್ಯಯನಶೀಲರಾಗುತ್ತಿದ್ದಾರೆ ಎಂದರು.
ಐಟಿ ಸಾಧಕರು ಹಣ ಸಂಗ್ರಹ
OSAAT ನ ವಾದಿರಾಜ ಭಟ್, ನಾವು ಐಟಿ ವೃತ್ತಿಪರರು ಚಾರಿಟಿಗಾಗಿ ನಿಧಿಸಂಗ್ರಹಣೆಗಾಗಿ ಕೆಲಸ ಮಾಡಲು ತಂಡವನ್ನು ಹೊಂದಿದ್ದೇವೆ. ಗ್ರಾಮೀಣ ಹಿಂದುಳಿದ ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳು ಹಳೆಯದಾಗಿದ್ದು, ಶಿಥಿಲಗೊಂಡಿದ್ದು, ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ. ಶಾಲೆಗಳ ದುಸ್ಥಿತಿ OSAAT ನ ಗಮನ ಸೆಳೆಯಿತು, ಇದು ಗ್ರಾಮೀಣ ಮಕ್ಕಳಿಗೆ ಸಹಾಯ ಮಾಡಲು ಈ ಕಲಿಕೆಯ ಕೇಂದ್ರಗಳನ್ನು ಸರಿಪಡಿಸಲು ಮತ್ತು ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತಿದೆ ಎಂದರು.
Advertisement