ಅಳಿವಿನಂಚಿನಲ್ಲಿರುವ 'ಕೊಯ್ಲೆ ಮೀನು': ರಕ್ಷಣೆಗೆ 'ಕೊಯ್ಲೆಮೀನ್ ಪ್ರಾಜೆಕ್ಟ್' ಪ್ರಾರಂಭ

ಕೊಡಗಿನವರಿಗೆ ಸಾಂಪ್ರದಾಯಿಕ ಆಹಾರವಾಗಿದ್ದ ಹಾಗೂ ಬತ್ತದ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತ್ತಿದ್ದ ಕೊಯ್ಲೆ ಮೀನು ಸಂತತಿ ಈಗ ಮರೆಯಾಗುತ್ತಿದ್ದು, ಈ ಮೀನುಗಳ ರಕ್ಷಣೆಗೆ ಕೊಯ್ಲೆಮೀನ್ ಪ್ರಾಜೆಕ್ಟ್' ಆರಂಭಿಸಲಾಗಿದೆ.
ಕೊಯ್ಲೆ ಮೀನುಗಳು ಸಂರಕ್ಷಣೆಗೆ ಸಮೀಕ್ಷೆ ನಡೆಸುತ್ತಿರುವುದು.
ಕೊಯ್ಲೆ ಮೀನುಗಳು ಸಂರಕ್ಷಣೆಗೆ ಸಮೀಕ್ಷೆ ನಡೆಸುತ್ತಿರುವುದು.
Updated on

ಮಡಿಕೇರಿ: ಕೊಡಗಿನವರಿಗೆ ಸಾಂಪ್ರದಾಯಿಕ ಆಹಾರವಾಗಿದ್ದ ಹಾಗೂ ಬತ್ತದ ಗದ್ದೆಗಳಲ್ಲಿ ಮಾತ್ರ ಹೇರಳವಾಗಿ ಸಿಗುತ್ತಿದ್ದ ಕೊಯ್ಲೆ ಮೀನು ಸಂತತಿ ಈಗ ಮರೆಯಾಗುತ್ತಿದ್ದು, ಈ ಮೀನುಗಳ ರಕ್ಷಣೆಗೆ ಕೊಯ್ಲೆಮೀನ್ ಪ್ರಾಜೆಕ್ಟ್'ವೊಂದನ್ನು ಆರಂಭಿಸಲಾಗಿದೆ.

ಸಂರಕ್ಷಣಾವಾದಿ ಗೋಪಕುಮಾರ್ ಮೆನನ್ ಅವರು ಈ ಪ್ರಾಜೆಕ್ಟ್'ನ್ನು ಆರಂಭಿಸಿದ್ದು, ಮೀನುಗಳ ರಕ್ಷಣೆ ಕುರಿತು ಜನರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಕೊಯ್ಲೆ ಮೀನು ಎಂಬುದು ಸಿಹಿನೀರಿನ ಮೀನುಗಳಿಗೆ ಕೊಡವರು ಇಟ್ಟಿರುವ ಹೆಸರಾಗಿದೆ, ಇದನ್ನು ಸಾಮಾನ್ಯವಾಗಿ ಸ್ಪೈನಿ ಲೋಚ್ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು 'ಲೆಪಿಡೋಸೆಫಾಲಿಚ್ಥಿಸ್ ಥರ್ಮಾಲಿಸ್' ಆಗಿದೆ.

ಬತ್ತದ ಗದ್ದೆಗಳಲ್ಲಿ ಈ ಮೀನುಗಳು ಈ ಹಿಂದೆ ಹೇರಳವಾಗಿ ಸಿಗುತ್ತಿದ್ದವು. ಈ ಮೀನು ಕೊಡವರ ಸಾಂಪ್ರದಾಯಿಕ ಆಹಾರವೂ ಆಗಿತ್ತು. ಆದರೆ, ಹಲವಾರು ಕಾರಣಗಳಿಂದಾಗಿ ಈ ಮೀನುಗಳ ಸಂತತಿ ಕ್ಷೀಣಿಸುತ್ತಾ ಬಂದಿದೆ.

ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ ಕೊಯ್ಲೆಮೀನು ಜನರನ್ನು ಒಟ್ಟುಗೂಡಿಸುವ ಖಾದ್ಯವಾಗಿತ್ತು. ಇದೀಗ ಈ ಮೀನುಗಳು ಅಳಿವಿನಂಚಿನಲ್ಲಿದ್ದು, ಅವುಗಳ ರಕ್ಷಣೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಗೋಪಕುಮಾರ್ ಮೆನನ್ ಅವರು ಹೇಳಿದ್ದಾರೆ.

"ಕಳೆದ ಎರಡು ದಶಕಗಳಲ್ಲಿ, ಕೊಯ್ಲೆಮೀನ್ ಲಭ್ಯತೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ವಿರಾಜಪೇಟೆಯ ಹಲವಾರು ಕಾಫಿ ತೋಟಗಾರರು ಮತ್ತು ಮೀನು ವ್ಯಾಪಾರಿಗಳೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಅವರೂ ಕೂಡ ಕೊಯ್ಲೆಮೀನ್ ಲಭ್ಯವಿಲ್ಲದ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

<strong>ಗೋಪುಕುಮಾರ್ (ಮುಂದೆ) ಮತ್ತು ಯಶಸ್</strong>
ಗೋಪುಕುಮಾರ್ (ಮುಂದೆ) ಮತ್ತು ಯಶಸ್

ಕೃಷಿ ಮತ್ತು ತೋಟಗಾರಿಕೆಯಲ್ಲಿ ರಾಸಾಯನಿಕಗಳ ಬಳಕೆಯು ಕೊಯ್ಲೆಮೀನ್ ಸಂತತಿ ಕುಸಿತಕ್ಕೆ ಕಾರಣವಾಗಿದೆ. ರಾಸಾಯನಿಕಗಳಿಂದ ಹೊಳೆ ಮತ್ತು ನದಿ ನೀರು ಕಲುಷಿತಗೊಳ್ಳುತ್ತಿದೆ. “ಕಳೆನಾಶಕಗಳು, ಕೀಟನಾಶಕಗಳು ಮತ್ತು ಇತರ ರಸಗೊಬ್ಬರಗಳ ಹೆಚ್ಚಿದ ಬಳಕೆ, ಕೊಡಗಿನ ಹೊಳೆಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯು  ಕೊಯ್ಲೆಮೀನುಗಳ ಮೇಲೆ ಪರಿಣಾಮ ಬೀರಿದೆ. ಕೊಯ್ಲೆ ಮೀನು ನಾಪತ್ತೆಯು ನಮ್ಮ ನೀರು ಕಲುಷಿತಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ನಮ್ಮ ಪ್ರಾಜೆಕ್ಟ್ ಈ ಕುರಿತಾಗಿ ಇರುವ ಲೋಪದೋಷಗಳನ್ನು ಪರಿಹರಿಸುತ್ತದೆ ಮತ್ತು ಸಮುದಾಯದಲ್ಲಿ ಜಾಗೃತಿಯನ್ನು ತರಲು ಪ್ರಯತ್ನಿಸುತ್ತದೆ ಎಂದು ತಿಳಿಸಿದ್ದಾರೆ.

ಈ ಸಣ್ಣ ಮೀನುಗಳು ಮರಳಿನ ಮೇಲೆ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಮರಳು ಅಕ್ರಮವಾಗಿ ಗಣಿಗಾರಿಕೆ ಮಾಡುವುದರಿಂದ ಅವುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರಿದೆ. "ಮೀನುಗಳು ಭತ್ತದ ಗದ್ದೆಗಳಲ್ಲಿ (ಮಾನ್ಸೂನ್ ಸಮಯದಲ್ಲಿ) ಮತ್ತು ಹೊಳೆಗಳ ಬಳಿ ಆಳವಿಲ್ಲದ ಸ್ಥಳಗಳಲ್ಲಿ ಮೊಟ್ಟೆಯಿಡುತ್ತವೆ. ಮಾನ್ಸೂನ್ ನಂತರ ಹೊಳೆಗಳಲ್ಲಿ ಈಜುತ್ತವೆ. ರಾಸಾಯನಿಕಗಳ ಬಳಕೆ, ಮರಳು ಗಣಿಗಾರಿಕೆ ಮತ್ತು ಹೊಳೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಅಡ್ಡಲಾಗುತ್ತಿರುವುದರಿಂದ ಮೀನುಗಳ ಮೇಲೆ ಪರಿಣಾಮ ಬೀರಿವೆ. ಹೀಗಾಗಿನಮ್ಮ ಪ್ರಾಜೆಕ್ಟ್ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲು ಮತ್ತು ಅವರನ್ನು ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ನಾವು ಸಾಮಾಜಿಕ ಮಾಧ್ಯಮಗಳ ವೇದಿಕೆಗಳಲ್ಲಿ ಸಕ್ರಿಯವಾಗಿದ್ದು, ಜಿಲ್ಲೆಯ ಯುವಕರು ಈ ಪ್ರಾಜೆಕ್ಟ್ ನಲ್ಲಿ ಭಾಗಿಯಾಗಲು ಮುಂದಾಗುತ್ತಿದ್ದಾರೆ. ನಮ್ಮ ತಂಡ ಸಣ್ಣ ಗುಂಪುಗಳನ್ನು ರಚಿಸಿ, ರಾಸಾಯನಿಕಗಳ ವ್ಯಾಪಕ ಬಳಕೆಯನ್ನು ನಿಲ್ಲಿಸುವ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. “ರಾಸಾಯನಿಕಗಳನ್ನು ಬಳಸುವ ಸರಿಯಾದ ವಿಧಾನದ ಬಗ್ಗೆ ನಾವು ತೋಟಗಾರರು ಮತ್ತು ರೈತರಿಗೆ ಮಾಹಿತಿ ನೀಡುತ್ತೇವೆ. ಕಳೆನಾಶಕದ ಅಪಾಯಕಾರಿ ಬಳಕೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ರಾಸಾಯನಿಕಗಳನ್ನು ಸಿಂಪಡಿಸುವ ಪ್ರದೇಶ ಮತ್ತು ನೀರಿನ ಮೂಲದಿಂದ ಕನಿಷ್ಠ 20 ಅಡಿ ಅಂತರ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದೇವೆಂದು ವಿವರಿಸಿದರು.

ಕೋಯ್ಲೆ ಮೀನು ಸಂರಕ್ಷಣೆ ನಮ್ಮ ಯೋಜನೆಯ ಮುಖ್ಯ ಉದ್ದೇಶವಾಗಿದ್ದರೂ, ಕೊಡಗಿನ ಹೊಳಗಳು, ನೀರು ನಾಯಿಗಳು ಸೇರಿದಂತೆ ಇದರೆ ಜಲಚರ ಪ್ರಾಣಿಗಳನ್ನು ರಕ್ಷಣೆ ಮಾಡುವುದು ನಮ್ಮ ಧ್ಯೇಯವಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿಯಲ್ಲಿ ಶೆಡ್ಯೂಲ್ 1ರ ಪ್ರಕಾರ ಆನೆ, ಹುಲಿಗಳಂತೆಯೇ ಜಲಚರ ಪ್ರಾಣಿಗಳನ್ನು ರಕ್ಷಣೆ ಮಾಡಬೇಕಿದೆ. ಆದರೆ, ಈಗಾಗಲೇ ಅವುಗಳ ಅಸ್ತಿತ್ವವು ಅಪಾಯ ಮಟ್ಟವನ್ನು ತಲುಪಿದ್ದರೂ ಈ ಬಗ್ಗೆ ಧ್ವನಿ ಎತ್ತುತ್ತಿರುವ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ.

ಇದೀಗ ನಮ್ಮ ತಂಡ ಸಮೀಕ್ಷೆಗಳ ಆರಂಭಿಸಲು ಸಿದ್ಧತೆ ನಡೆಸಿದ್ದು, ನೀರು ನಾಯಿಗಳು ಹಾಗೂ ಕೊಯ್ಲೆ ಮೀನುಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೇವೆಂದು ಪ್ರಾಜೆಕ್ಟ್'ನ ಭಾಗವಾಗಿರುವ ಸ್ವಾತಕೋತ್ತರ ವಿದ್ಯಾರ್ಥಿ ಯಶಸ್ ಎಸ್ ಅವರು ಹೇಳಿದ್ದಾರೆ.

ನೀರುನಾಯಿಗಳ ಸಂರಕ್ಷಣೆ ಮಾಡುವುದು, ಅವುಗಳ ಬೇಟೆಯಾಡದಂತೆ ರಕ್ಷಣೆ ಮಾಡುವ ಮಾರ್ಗವನ್ನು ನಾವು ಈ ಪ್ರಾಜೆಕ್ಟ್ ಮೂಲಕ ಕಂಡುಕೊಳ್ಳುತ್ತಿದ್ದೇವೆ. ಬೇಟೆಗಳಿಗೆ ಕಡಿವಾಣ ಹಾಕಿದ್ದೇ ಆದರೆ, ಅದು ಹೊಳೆಗಳನ್ನು ಸಂರಕ್ಷಣೆ ಮಾಡಿದಂತೆ ಎಂದು ಗೋಪಕುಮಾರ್ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com