ಛತ್ತೀಸ್ ಗಢ: ರಾಮಮಂದಿರ ಉದ್ಘಾಟನೆಯನ್ನು ಸಂಭ್ರಮಿಸುವುದಕ್ಕೆ ಛತ್ತೀಸ್ ಗಢದ ಕೇಂದ್ರ ಭಾಗದಲ್ಲಿರುವ ರಾಮನಾಮಿ ಸಮಾಜಕ್ಕೆ ಹಲವಾರು ಕಾರಣಗಳಿವೆ. ರಾಮನ ಕಟ್ಟಾ ಅನುಯಾಯಿಗಳೆಂದೇ ರಾಮನಾಮಿ ಸಮಾಜ ಪ್ರಖ್ಯಾತಿ ಪಡೆದಿದ್ದು, ರಾಮನಾಮವನ್ನು ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.
ರಾಯ್ ಪುರದ 180 ಕಿ.ಮೀ ದೂರದಲ್ಲಿರುವ ಜೈಜೈಪುರದ ಜಾಂಜ್ಗೀರ್-ಚಂಪಾ ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಜನವರಿ 22 ರಂದು ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ ಎಂಬ ತಮ್ಮ ಪೂರ್ವಜರ ಭವಿಷ್ಯವಾಣಿಯು ನಿಜವಾಗಿರುವುದು ಕಾಕತಾಳಿಯ ಎಂದು ಹೇಳಿ ಸಂಭ್ರಮಿಸಿದ್ದಾರೆ.
ರಾಮನಾಮಗಳನ್ನು ದಲಿತರಿಗೆ ಸೇರಿದ ಪಂಗಡಗಳು ಎಂದು ಉಲ್ಲೇಖಿಸಲಾಗುತ್ತದೆ, ಅವರು ತಮ್ಮ ದೇಹ ಮತ್ತು ಮುಖದ ಮೇಲೆ 'ರಾಮ್' ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವ ಅಭ್ಯಾಸವನ್ನು ಅಳವಡಿಸಿಕೊಂಡಿದ್ದಾರೆ, ಇದು ಜಾತೀಯತೆ ಅಥವಾ ಅಸ್ಪೃಶ್ಯತೆಯ ಶಾಂತಿಯುತ ಪ್ರತಿಭಟನೆಯ ಪ್ರತೀಕವಾಗಿದೆ.
“ಮಾಹಿತಿಯ ಪ್ರಕಾರ, ನಮ್ಮ ಪೂರ್ವಜರು ಸುಮಾರು 150 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ವಿಗ್ರಹದ ಪ್ರತಿಷ್ಠಾಪನೆಯು ಶುಕ್ಲ ಪಕ್ಷದ ಹನ್ನೊಂದನೇ ಮತ್ತು ಹದಿಮೂರನೇ ದಿನಗಳ ನಡುವೆ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದರು, ಅಂದರೆ ಜನವರಿ 22 ರ ಇಂದಿನ ದಿನಕ್ಕೆ ಹೊಂದಿಕೆಯಾಗುತ್ತದೆ. ನಮ್ಮ ಹಬ್ಬವೂ ಅದೇ ದಿನ ಬರುತ್ತದೆ” ಎಂದು ಜೈಜೈಪುರ ಉತ್ಸವದಲ್ಲಿ ಪಾಲ್ಗೊಳ್ಳುವ ಭಕ್ತ ಮನಹರನ್ ರಾಮನಾಮಿ ಹೇಳಿದ್ದಾರೆ.
ತಮ್ಮ ದೇಹದ ಪ್ರತಿಯೊಂದು ಭಾಗದಲ್ಲೂ ರಾಮ್ ಟ್ಯಾಟೂವನ್ನು ಹಾಕಿಸಿಕೊಳ್ಳುವ ರಾಮನಾಮಿಗಳು ಮಾಂಸ ಆಹಾರವನ್ನು ಸೇವಿಸುವ ಅಥವಾ ಮದ್ಯಪಾನ ಮಾಡುವ ಮೂಲಕ ಅದನ್ನು ಹಾಳು ಮಾಡದಿರಲು ಪಣತೊಟ್ಟಿದ್ದಾರೆ. “ರಾಮನು ಎಲ್ಲಾ ಜಾತಿಗಳನ್ನು ಮೀರಿದವನು ಮತ್ತು ನಾವು ದೇಹವನ್ನು ರಾಮಮಂದಿರವೆಂದು ಪರಿಗಣಿಸುತ್ತೇವೆ. ಆದ್ದರಿಂದ, ರಾಮನಮಿಗಳು ಮಾಂಸ ಮತ್ತು ಮದ್ಯವನ್ನು ಸೇವಿಸುವುದರಿಂದ ಕಟ್ಟುನಿಟ್ಟಾಗಿ ದೂರವಿರುತ್ತಾರೆ ಎನ್ನುತ್ತಾರೆ ಈ ಸಮುದಾಯದ ಭಕ್ತಾದಿಗಳು.
ಜೈಜೈಪುರದಲ್ಲಿ ಮಹಾನದಿ ನದಿಯ ದಂಡೆಯ ಮೇಲೆ ಭಕ್ತಿಗೀತೆಗಳು ಮತ್ತು ಸ್ತೋತ್ರಗಳೊಂದಿಗೆ ಜಾತ್ರೆಯನ್ನು ಆಯೋಜಿಸಲಾಗಿದೆ. “ನಾವು ರಾಮನನ್ನು ಯಾವುದೇ ರೂಪದಲ್ಲೂ ಪೂಜಿಸಬಹುದು. ಏಕೆಂದರೆ ಭಗವಂತ ಎಲ್ಲರಿಗೂ ಲಭ್ಯ. ದೇವರು ಎಲ್ಲೆಲ್ಲೂ ಇರುತ್ತಾನೆ ಎಂಬ ಸಂದೇಶದೊಂದಿಗೆ ಆಧ್ಯಾತ್ಮಿಕವಾಗಿ ಉನ್ನತಿ ಸಾಧಿಸುವ ಉದ್ದೇಶ ಹೊಂದಿದ್ದೇವೆ” ಎಂದು ಬಾಲ್ಯದಿಂದಲೂ ಭಜನೆ ಪಠಣ ಮಾಡುತ್ತಿದ್ದ ಸೇಜ್ವಾನಾ ಹೇಳಿದ್ದಾರೆ.
Advertisement