ರಾಜ್ಕೋಟ್: ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೌರಾಷ್ಟ್ರ ಹಾಗೂ ಪಂಜಾಬ್ ನಡುವಿನ ರಣಜಿ ಪಂದ್ಯದ ಸೋಮವಾರದ ದಿನದಾಟದಲ್ಲಿ ಆಡುವಾಗ ಚೆಂಡಿನ ಹೊಡೆತಕ್ಕೆ ಅವರು ತುತ್ತಾದರೂ, ಅವರು ಧರಿಸಿದ್ದ ಹೆಲ್ಮೆಟ್ ಅವರನ್ನು ಕಾಪಾಡಿತು.
ಪಂಜಾಬ್ ಇನಿಂಗ್ಸ್ನ 72ನೇ ಓವರ್ನಲ್ಲಿ ಬೌಲರ್ ವಿಶಾಲ್ ಜೋಷಿ ಅವರ ಎಸೆತವೊಂದು ಯುವರಾಜ್ ಸಿಂಗ್ ಕಣ್ತಪ್ಪಿಸಿ ಸೀದಾ ಬಂದು ಮುಖಕ್ಕೆ ಅಪ್ಪಳಿಸಿತು. ಚೆಂಡು ಅಪ್ಪಳಿಸಿದ ರಭಸಕ್ಕೆ ಯುವರಾಜ್ ಸಿಂಗ್ ನೆಲಕ್ಕುರುಳಿದರು.
ಅರೆಕ್ಷಣದಲ್ಲಿ ಸಂಭವಿಸಿದ ಈ ಘಟನೆಯಿಂದಾಗಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರೂ ಸೇರಿದಂತೆ ಎಲ್ಲರೂ ದಿಗ್ಭ್ರಾಂತರಾದರು. ಯುವಿ ನೆಲಕ್ಕುರುಳಿದ ತಕ್ಷಣವೇ ಫೀಲ್ಡಿಂಗ್ನಲ್ಲಿದ್ದ ಎಲ್ಲಾ ಆಟಗಾರರೂ ಓಡಿ ಬಂದು ಯುವಿಯನ್ನು ಸುತ್ತುವರಿದರು. ಆದರೆ, ಎಲ್ಲರೂ ಎಣಿಸಿದಂತೆ ಅಪಾಯವೇನೂ ಸಂಭವಿಸಿರಲಿಲ್ಲ. ವೇಗವಾಗಿ ಧಾವಿಸಿ ಬಂದಿದ್ದ ಚೆಂಡು, ಯುವಿ ತೊಟ್ಟಿದ್ದ ಹೆಲ್ಮೆಟ್ನ ಮುಂಭಾಗದಲ್ಲಿದ್ದ ಗ್ರಿಲ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ, ಚೆಂಡು ಮುಖಕ್ಕೆ ಅಪ್ಪಳಿಸಿಕೊಂಡಿರಲಿಲ್ಲ. ಇದರಿಂದ ಆಗಬಹುದಾಗಿದ್ದ ಅಪಾಯದಿಂದ ಅವರು ಪಾರಾಗಿದ್ದರು. ಆಟಗಾರರು ತಮ್ಮನ್ನು ಸುತ್ತುವರಿಯುವ ಮುನ್ನವೇ ಎದ್ದುನಿಂತ ಯುವಿ, ಗ್ರಿಲ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಚೆಂಡನ್ನು ಕಿತ್ತು ಹೊರತೆಗೆದರು. ಅಲ್ಲಿಗೆ ಎಲ್ಲರೂ ನಿಟ್ಟುಸಿರೂ ಬಿಡುವಂತಾಯಿತು.
Advertisement