
ಬೆಂಗಳೂರು: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊತ್ತಿರುವ ಭಾರತ ತಂಡದ ಏಕ ದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧದ ಪ್ರಕರಣ ಹೈಕೋರ್ಟ್ ಮತ್ತು 9ನೇ ಎಸಿಎಂಎಂ ನ್ಯಾಯಲಯದಲ್ಲಿ ಸೋಮವಾರ ಒಂದೇ ದಿನ ವಿಚಾರಣೆಗೆ ಬರುವ ಮೂಲಕ ಆಚ್ಚರಿ ಬೆಳವಣಿಗೆಗೆ ಕಾರಣವಾಯಿತು.
ಪ್ರಕರಣ ವಿಚಾರಣೆಗೆ ಖುದ್ದು ಹಾಜರಾಗದಿದ್ದಕ್ಕೆ ಧೋನಿ ವಿರುದ್ಧ ವಾರೆಂಟ್ ಜಾರಿ ಮಾಡುವುದಾಗಿ ನಗರದ 9ನೇ ಎಸಿಎಂಎಂ ನ್ಯಾಯಾಲಯವು ಎಚ್ಚರಿಕೆ ನೀಡಿದರೆ, ಮತ್ತೊಂದೆಡೆ ಹೈಕೋರ್ಟ್ ಖುದ್ದು ಹಾಜರಾತಿಯಿಂದ ಧೋನಿಗೆ ಒಂದು ದಿನದ ಮಟ್ಟಿಗೆ ವಿನಾಯ್ತಿ ನೀಡಿತು. ಈ ಮಧ್ಯೆ ಅಧೀನ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಆ.18ಕ್ಕೆ ಮುಂದೂಡಿತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾ.ಎ.ಎನ್.ವೇಣು-ಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, `ಇತ್ತೀಚೆಗೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಕರಣಗಳು ಹೆಚ್ಚುತ್ತಿವೆ. ಜನಪ್ರತಿನಿಧಿಗಳು ಸೇರಿದಂತೆ ಜನಮಾನಸದಲ್ಲಿ ಗುರುತಿಸಿಕೊಂಡವರು ಹಣದಾಸೆಯಿಂದ ಜನರ ಭಾವನೆ-ಗಳೊಂದಿಗೆ ಆಟವಾಡು ವುದು ಸರಿಯಲ್ಲ. ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಧೋನಿ ಅವರ ಇಂದಿನ ಮುಖ ಬೆಲೆ ರೂ, 100 ಕೋಟಿಯಷ್ಟಾಗಿದ್ದು, ಈ ರೀತಿ ಅನಾವಶ್ಯಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ವಿವಾದ ಸೃಷ್ಟಿಸಿಕೊಳ್ಳುವುದು ಅವರ ಘನತೆಗೆ ಒಪ್ಪುವಂತದಲ್ಲ ಎಂದು ಕೋರ್ಟ್ ಕಿಡಿಕಾರಿತು. 2013ರ ಏಪ್ರಿಲ್ 14ರಂದು `ಬ್ಯುಸಿನೆಸ್ ಟುಡೆ' ನಿಯತಕಾಲಿಕದಲ್ಲಿ ಭಗವಾನ್ ವೇಷಧಾರಿಯ ಧೋನಿ ಫೋಟೋ ಪ್ರಕಟವಾಗಿತ್ತು. 9ನೇ ಎಸಿಎಂಎಂ ನ್ಯಾಯಾಲಯ ಧೋನಿಗೆ ಸಮನ್ಸ್ ನೀಡಿ ಆ.10ರಂದು ವಿಚಾರಣೆಗೆ ಖುದ್ದು ಹಾಜರಾಗಲು ಸೂಚಿಸಿತ್ತು.
Advertisement