ಮಲಂಗ್: ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಇಂಡೊನೇಷ್ಯಾ ಮಾಸ್ಟರ್ಸ್ ಗ್ರ್ಯಾಂಡ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾಗಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ತಮ್ಮ ಪ್ರತಿಸ್ಪರ್ಧಿ ಸ್ಥಳೀಯ ಟಾಮಿ ಸುಗಿಯಾರ್ತೊ ವಿರುದ್ಧ ಪರಾಭವಗೊಂಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ 21--17, 13-- 21, 22--24 ಗೇಮ್ಗಳ ಅಂತರದಲ್ಲಿ ವಿರೋಚಿತ ಸೋಲನುಭವಿಸಿದರು. ವಿಶ್ವದ 9ನೇ ರ್ಯಾಂಕಿಂಗ್ ನ ಶ್ರೀಕಾಂತ್ ತಮ್ಮ ಪಂದ್ಯದಲ್ಲಿ 12ನೇ ರ್ಯಾಂಕಿಂಗ್ ನ ಟಾಮಿ ವಿರುದ್ಧ ಅತ್ಯುತ್ತಮ ಆರಂಭ ಪಡೆದರಾದರೂ, ನಂತರದ ಹಂತದಲ್ಲಿ ಇಂಡೊನೇಷ್ಯಾ ಆಟಗಾರನ ಅಬ್ಬರವನ್ನು ಸಂಪೂರ್ಣವಾಗಿ ಮೆಟ್ಟಿನಿಲ್ಲುವಲ್ಲಿ ಎಡವಿದರು.
ಪಂದ್ಯದ ಮೊದಲ ಗೇಮ್ನಲ್ಲಿ ಆಕರ್ಷಕ ಪ್ರದರ್ಶನ ನೀಡಿದ ಶ್ರೀಕಾಂತ್ 21-17 ಅಂಕಗಳ ಅಂತರದಲ್ಲಿ ಮೇಲುಗೈ ಸಾಧಿಸಿದರು. ಆ ಮೂಲಕ ಸ್ಥಳೀಯ ಆಟಗಾರನ ಮೇಲೆ ಒತ್ತಡ ಹಾಕುವಲ್ಲಿ ಸಫಲರಾದರು. ಇನ್ನು ಎರಡನೇ ಸೆಟ್ನಲ್ಲಿ ಸ್ವಲ್ಪ ಮೈನರೆತಂತೆ ಕಂಡ ಶ್ರೀಕಾಂತ್ ಬೆಲೆ ತೆರಬೇಕಾಯಿತು. ಈ ಹಂತದಲ್ಲಿ ಅತ್ಯುತ್ತಮ ಹೋರಾಟ ನಡೆಸಿದ ಟಾಮಿ 21-13 ಅಂಕಗಳ ಅಂತರದಲ್ಲಿ ಅರ್ಹ ಮುನ್ನಡೆ ಪಡೆದು ಪಂದ್ಯದಲ್ಲಿ ಸಮಬಲ ಸಾಧಿಸಿದರು. ಪಂದ್ಯದ ಮೂರನೇ ಹಾಗೂ ಅಂತಿಮ ಗೇಮ್ನಲ್ಲಿ ಶ್ರೀಕಾಂತ್ ಹಾಗೂ ಟಾಮಿ ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಆದರೆ, ಅಂತಿಮ ಹಂತದಲ್ಲಿ ಮುನ್ನಡೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಟಾಮಿ ಸೆಟ್ ಅನ್ನು 24-22 ಅಂತರದಲ್ಲಿ ಗೆದ್ದುಕೊಂಡು ಪ್ರಶಸ್ತಿ ವಶಪಡಿಸಿಕೊಂಡರು.
Advertisement