ತಿರುವನಂತಪುರ: ಶನಿವಾರ ಉದ್ಘಾಟನೆಗೊಂಡ ರಾಷ್ಟ್ರೀಯ ಕ್ರೀಡಾಕೂಟದ ಮೊದಲ ದಿನವಾದ ಭಾನುವಾರ ಆತಿಥೇಯ ಕೇರಳ ಹೆಚ್ಚು ಪದಕ ಬಾಚಿಕೊಂಡಿದೆ. ಈಜು ವಿಭಾಗದಲ್ಲಿ ಪಾರಮ್ಯ ಮೆರೆದ ಐದು ಚಿನ್ನ, ಒಂದು ಬೆಳ್ಳಿ ಹಾಗೂ 5 ಕಂಚಿನ ಪದಕ ಗೆದ್ದು, ನಂತರ, ವೇಟ್ಲಿಫ್ಟಿಂಗ್ನಲ್ಲಿ ಒಂದು ಕಂಚು ಪಡೆಯಿತು.
ಈ ಮೂಲಕ ಮೂಲಕ ಒಟ್ಟು ಏಳು ಪದಕಗಳನ್ನು ತನ್ನದಾಗಿಸಿಕೊಂಡಿತು. ಮೊದಲ ದಿನ ಈಜು, ವೇಟ್ಲಿಫ್ಟಿಂಗ್ ಹಾಗೂ ಕುಸ್ತಿ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಈಜು ವಿಭಾಗದಲ್ಲಿ ಸಾಜನ್ ಪ್ರಕಾಶ್ ಅವರು 200 ಮೀ. ಪುರುಷರ ಫ್ರೀ ಸ್ಟೈಲ್ ಹಾಗೂ 100 ಮೀ. ಬಟರ್ ಫ್ಲೈ ವಿಭಾಗದಲ್ಲಿ ಕ್ರಮವಾಗಿ ಕಂಚು ಹಾಗೂ ಚಿನ್ನ ಗೆದ್ದರು. ಇನ್ನು, ಪುರುಷರ 4x100 ಮೀ. ರಿಲೇ ಫ್ರೀ ಸ್ಟೈಲ್ನಲ್ಲಿ ಆನಂದ್ ಅನಿಲ್ ಕುಮಾರ್ ಶೈಲಜಾ, ಅರುಣ್ ಶಿವಂಕುಟ್ಟಿ, ಸಾಜನ್ ಪ್ರಕಾಶ್, ಶರ್ಮಾ ಎಸ್.ಪಿ. ನಾಯರ್ ಅವರುಳ್ಳ ತಂಡ ಚಿನ್ನ ಗೌರವ ಪಡೆಯಿತು.
ಮಹಿಳೆಯರ 4x100 ಮೀ. ರಿಲೇ ಫ್ರೀ ಸ್ಟೈಲ್ನಲ್ಲಿ ಪೂಜಾ ರಾಘವ ಆಳ್ವಾ, ಗುಲ್ನಾಜ್ ರವೂಫ್ ಎ., ಜೋಮಿ ಜಾರ್ಜ್, ಪ್ರಿಯಾ ಚಂದನ್ ಹಾಗೂ ಸಂಧ್ಯಾ ಸಿಂಧು ತಂಡ ಕಂಚಿನ ಗೌರವ ಪಡೆಯಿತು.
ಕರ್ನಾಟಕಕ್ಕೆ ಐದು ಪದಕ
ಈಜು ವಿಭಾಗದ ಸ್ಪರ್ಧೆಗಳಲ್ಲಿ ಕರ್ನಾಟಕದ ಆಟಗಾರರು 4 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದ್ದಾರೆ. ಮಹಿಳೆಯರ 200 ಮೀ. ಫ್ರೀ ಸ್ಟೈಲ್ ಫೈನಲ್ಸ್ನಲ್ಲಿ ಕರ್ನಾಟಕವನ್ನು
ಪ್ರತಿನಿಧಿಸಿದ್ದ ಮಾಳವಿಕಾ ವಿಶ್ವನಾಥ್ ಅವರು ಕಂಚಿನ ಪದಕ ಗೆದ್ದರು.
ನಿಗದಿತ ದೂರವನ್ನು 2 ನಿಮಿಷ, 9.89 ಸೆಕೆಂಡುಗಳಲ್ಲಿ ಕ್ರಮಿಸಿದ ಅವರು, 3ನೇ ಸ್ಥಾನ ಪಡೆದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಹರ್ಯಾಣದ ಶಿವಾನಿ ಕಾತ್ರಿಯಾ (2 ನಿಮಿಷ, 7.46 ಸೆಕೆಂಡ್) ಚಿನ್ನದ ಗೌರವ ಪಡೆದರೆ, ಮಹಾರಾಷ್ಟ್ರದ ಮೋನಿಕ್ ಗಾಂಧಿ (2 ನಿಮಿಷ, 9.44 ಸೆಕೆಂಡ್) ಅವರು ಬೆಳ್ಳಿ ಪದಕ ಗಳಿಸಿದರು. ಇದಲ್ಲದೆ, ಈಜು ವಿಭಾಗದಲ್ಲಿ ಕರ್ನಾಟಕ್ಕೆ 4 ಬೆಳ್ಳಿ ಪದಕಗಳೂ ಬಂದಿವೆ. 4x100 ಮೀ. ರಿಲೇ ಫ್ರೀ ಸ್ಟೈಲ್ನಲ್ಲಿ ಅನಿಶಾ ಗಾಂವ್ಕರ್, ರುತುಜಾ ಪವಾರ್, ಮಾಲಿಕಾ ಎ. ಹೊನಗೇಕರ್, ಸಲೋನಿ ದಲಾಲ್ ಅವರುಳ್ಳ ತಂಡ ಬೆಳ್ಳಿ ಗೌರವ ಪಡೆದಿದೆ.
ಮಣಿಪುರಕ್ಕೆ ಎರಡು ಪದಕ: ವೇಟ್ಲಿಫ್ಟಿಂಗ್ ನಲ್ಲಿ, ಮಣಿಪುರ ರಾಜ್ಯದ ಆಟಗಾರ್ತಿಯರು ಮಿಂಚಿದರು. ಮಹಿಳೆಯರ 40 ಕೆ.ಜಿ. ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಎರಡು ಪದಕ ಗೆಲ್ಲುವ ಮೂಲಕ ಆ ರಾಜ್ಯದ ಕ್ರೀಡಾಳುಗಳು ಗಮನ ಸೆಳೆದರು. ಮಹಿಳೆಯರ 69 ಕೆಜಿ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ, ಹರ್ಯಾಣದ ಕುಂದು ಸುಮನ್ ಚಿನ್ನ ಗೆದ್ದರೆ, ಉತ್ತರ ಪ್ರದೇಶದ ತೋಮರ್ ಮನು ಅವರು ಬೆಳ್ಳಿ ಹಾಗೂ ದೆಹಲಿಯ ಕಾಕ್ರನ್ ದಿವ್ಯ, ಮಧ್ಯಪ್ರದೇಶದ ದುಬೆ ರೂಪಾಲಿ ಅವರು ಕಂಚಿನ ಗೌರವಕ್ಕೆ ಪಾತ್ರರಾದರು.
Advertisement