ಸಿಡ್ನಿ: ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬಳಿಕ, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಜವಾಬ್ದಾರಿ ನಿರ್ವಹಿಸುತ್ತಿದ್ದು, ಒಂದು ವೇಳೆ ಸಹಾಗೆ ಗಾಯಗಳಾದರೆ, ಪುನಃ ಧೋನಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಇಎಸ್ ಪಿಎನ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಭಾರತ ತಂಡದ ನಿರ್ದೇಶಕ ರವಿಶಾಸ್ತ್ರಿ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಾವಳಿಯಲ್ಲಿ ವೃದ್ಧಿಮ್ಯಾನ್ಷಾಗೆ ಗಾಯಗಳಾಗದ ಪಕ್ಷದಲ್ಲಿ ಅವರ ಬದಲಿಗೆ ಧೋನಿ ಟೆಸ್ಟ್ ಪಂದ್ಯ ಆಡಲಿದ್ದಾರೆ ಎಂದು ತಿಳಿಸಿದ್ದಾರೆ.
ಧೋನಿ ಆಸ್ಟ್ರೇಲಿಯಾದಲ್ಲೇ ಉಳಿಯಲಿದ್ದು, ಭಾರತ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ. ಈ ವೇಳೆ ಅವಶ್ಯಕತೆ ಇದ್ದರೆ ಧೋನಿ ಪಂದ್ಯವಾಡಲಿದ್ದಾರೆ ಎಂದು ರವಿಶಾಸ್ತ್ರಿ ಸ್ಪಷ್ಟ ಪಡಿಸಿದ್ದಾರೆ.
ಡ್ರೆಸ್ ರೂಂ ಘಟನೆಯಿಂದ ಧೋನಿ ನಿವೃತ್ತಿ ಪಡೆದಿದ್ದಾರೆ ಎಂಬ ಗಾಳಿ ಮಾತನ್ನು ತಳ್ಳಿ ಹಾಕಿರುವ ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಸೇರಿದಂತೆ ಇತರೆ ತಂಡದ ಸದಸ್ಯರು ಧೋನಿ ಮಾತನ್ನು ತಳ್ಳಿ ಹಾಕುವುದಿಲ್ಲ. ತಂಡದಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆಟಗಾರರ ಮಧ್ಯೆ ಉತ್ತಮ ಹೊಂದಾಣಿಕೆ ಇದ್ದು, ಡ್ರೆಸಿಂಗ್ ರೂಮ್ ವಾತಾವರಣವೂ ಉತ್ತಮವಾಗಿದೆ . ಧೋನಿ ನಿವೃತ್ತಿ ನಿರ್ಧಾರದ ಮೇಲೆ ಯಾವುದೇ ಒತ್ತಡವಿಲ್ಲ. ಹಾಗಾಗಿ, ಧೋನಿ ನಿವೃತ್ತಿ ಘೋಷಣೆ ಸ್ವಂತ ನಿರ್ಧಾರವಾಗಿದೆ. ಇದರ ಹಿಂದೆ ಯಾವುದೇ ಕಾರಣಗಳಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್ನಲ್ಲಿ ನಡೆದ ಮೂರನೇ ಪಂದ್ಯದ ನಂತರ ಧೋನಿ, ದಿಢೀರನೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Advertisement