ನವದೆಹಲಿ: ಹಾಕಿ ಇಂಡಿಯಾ (ಎಚ್ಐ) ಅಧ್ಯಕ್ಷ ನರೀಂದರ್ ಬಾತ್ರಾ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಸಿಡಿದೆದ್ದಿರುವ ಭಾರತ ರಾಷ್ಟ್ರೀಯ ಹಾಕಿ ತಂಡದ ಕೋಚ್ ಪಾಲ್ ವ್ಯಾನ್ ಆ್ಯಸ್ ಮಂಗಳವಾರವೂ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವುದಲ್ಲದೆ, ಭಾರತೀಯ ಕ್ರೀಡಾ ಪ್ರಾಧಿಕಾರ ಕರೆದರಷ್ಟೇ ತಾನು ಕೋಚ್ ಆಗಿ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಬಾತ್ರಾ ಅವರು ದುರಾಸೆ ಮನುಷ್ಯ ಎಂದಿರುವ ಪಾಲ್, ಪ್ರತಿ ಸರಣಿಯಲ್ಲೂ ಭಾರತ ತಂಡ ಅದ್ಭುತ ಯಶಸ್ಸು ಕಾಣಬೇಕು ಎಂದು ಅವರು ಆಶಿಸುತ್ತಿದ್ದರು. ಹಾಕಿ ಇಂಡಿಯಾ ಅಧ್ಯಕ್ಷರಾಗಿ ಈ ರೀತಿ ಆಸೆ ಪಡುವುದು ತಪ್ಪಲ್ಲ. ಆದರೆ, ಪ್ರತಿ ಪಂದ್ಯವನ್ನೂ ಭಾರತ ಗೆಲ್ಲಲೇಬೇಕೆಂದು ಅವರು ಆಟಗಾರರ ಮೇಲೆ ಆಗಾಗ ಒತ್ತಡ ಹೇರುತ್ತಿದ್ದರು. ಇದರ ಬಗ್ಗೆ ನನ್ನ ಆಕ್ಷೇಪವಿತ್ತು ಎಂದು ಹೇಳಿದ್ದಾರೆ.
ಆಟಗಾರರ ಮೇಲಷ್ಟೇ ಅಲ್ಲದೆ, ಆಗಾಗ ನನ್ನ ಮೇಲೂ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದರು. ಭಾರತ ತಂಡ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಹಾಗೆ ಪ್ರತಿ ಪಂದ್ಯದಲ್ಲೂ ಗೆಲ್ಲುತ್ತಾ ಸಾಗಿದರೆ, ಸಂಸ್ಥೆಗೆ ಪ್ರಾಯೋಜಕತ್ವ ಗೆಲ್ಲುತ್ತಾ ಸಾಗಿದರೆ, ಸಂಸ್ಥೆಗೆ ಪ್ರಾಯೋಜಕತ್ವ ನೀಡುವವರ ಸಂಖ್ಯೆಯೂ ಬೆಳೆಯುತ್ತದೆ ಎಂದು ಬಾತ್ರಾ ಹೇಳುತ್ತಿದ್ದುದಾಗಿ ಪಾಲ್ ತಿಳಿಸಿದ್ದಾರೆ.
ಇತ್ತೀಚೆಗೆ, ಆ್ಯಂಟ್ ವೆರ್ಪ್ ನಲ್ಲಿ ನಡೆದಿದ್ದ ವಿಶ್ವ ಹಾಕಿ ಸರಣಿಯ ಕ್ವಾರ್ಟರ್ ಫೈನಲ್ ಪಂದ್ಯದ ನಂತರ, ಮೈದಾನದೊಳಗೆ ನುಗ್ಗಿ ಆಟಗಾರರನ್ನು ಬಾತ್ರಾ ನಿಂದಿಸುತ್ತಿದ್ದರು. ಇದರಿಂದ ಬೇಸತ್ತು ರೇಗಿದೆ. ಗೆಲ್ಲಬೇಕೆಂದು ಒತ್ತಡ ಹೇರುವುದು ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ಆದರೆ ಇದನ್ನು ಬಾತ್ರಾ ಒಪ್ಪಲಿಲ್ಲ. ಆಗ ನಮ್ಮಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ, ನಾನು ಮೈದಾನದಿಂದ ಆಚೆ ನಡೆಯುವಂತೆ ಸೂಚಿಸಬೇಕಾಯಿತು ಎಂದು ಪಾಲ್ ಹೇಳಿದರು. ಕೋಚ್ ಹುದ್ದೆಯಿಂದ ತಮ್ಮನ್ನು ವಜಾಗೊಳಿಸಲಾಗಿದೆ ಎಂದು ವ್ಯಾನ್ ಆ್ಯಸ್ ಅವರು ಸೋಮವಾರ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ್ದರು.
Advertisement