ನವದೆಹಲಿ: ಕಳೆದ ಎರಡು ತಿಂಗಳ ಅವಧಿಯಲ್ಲಿ ವಿವಿಧ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 6 ಚಿನ್ನದ ಪದಕ ಗೆದ್ದಿರುವ ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂದಿನ ವರ್ಷ ನಡೆಯಲಿರುವ ರಿಯೋ ಒಲಂಪಿಕ್ಸ್ ಕ್ರೀಡಾಕೂಟ ತಯಾರಿಗೆ ಕಷ್ಟಪಡುವಂತಾಗಿದೆ.
ಭಾರತ ಹಾಗೂ ಏಷ್ಯಾದ ನಂಬರ್ ಒನ್ 6 .5 ಅಡಿ ಎತ್ತರದ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಭಾರತ ಮಾತ್ರವಲ್ಲದೇ ಏಷ್ಯಾದ ನಂಬರ್ ಒನ್ ಆಟಗಾರನಾಗಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಹಾಗೂ ದಕ್ಷಿಣ ಕೊರಿಯಾದಲ್ಲಿ ನಡೆದ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಇಂದರ್ ಜೀತ್ ದಾಖಲೆಯ ಪ್ರದರ್ಶನದೊಂದಿಗೆ ಚಿನ್ನದ ಪದಕ ಪಡೆದಿದ್ದರು.
ಕಳೆದ ಮೂರು ಕ್ರೀಡಾಕೂಟದಲ್ಲಿ ನಾನು ದಾಖಲೆಯ ಪ್ರದರ್ಶನ ನೀಡಿದ್ದೇನೆ. ಆದರೂ ನನಗೆ ಸರಿಯಾದ ಮಾರ್ಗದರ್ಷಕರಿಲ್ಲ. ಅಲ್ಲದೇ ಫಿಸಿಯೋ ಇಲ್ಲ. ನಾನು ಮತ್ತು ಕೋಚ್ ಒಂದು ತಂಡವಾಗಿದ್ದೇವೆ. ಒಂದು ವೇಳೆ ನಾನು ಗಾಯಗೊಂಡರೆ ನನ್ನನ್ನು ನೋಡಿಕೊಳ್ಳುವವರಿಲ್ಲ ಅಲ್ಲದೇ ನೇರವಾಗಿ ತಂಡದಿಂದ ಕೈಬಿಡಲಾಗುತ್ತದೆ. ಎಂದು ಇಂದರ್ ಜೀತ್ ತಿಳಿಸಿರುವುದಾಗಿ ಎನ್.ಡಿ.ಟಿ.ವಿ ವರದಿ ಮಾಡಿದೆ.
ಕಳೆದ ವರ್ಷ ಏಷ್ಯನ್ ಗೇಮ್ಸ್ ನಂತರ ಹರ್ಯಾಣ ಸರ್ಕಾರ 75 ಲಕ್ಷ ಬಹುಮಾನ ಘೋಷಿಸಿತ್ತು. ತಮ್ಮ ತಂದೆ ತೀರಿಕೊಂಡ ನಂತರ ಮಾಡಿದ್ದ ಸಾಲ ತೀರಿಸಲು ಇಂದರ್ ಜೀತ್ ನಿರ್ಧರಿಸಿದ್ದರು, ಈಗ ಸರ್ಕಾರ ಬದಲಾಗಿದ್ದು ಯಾವುದೇ ಅಥ್ಲೀಟ್ ಗೆ ಬಹುಮಾನ ಮೊತ್ತ ದೊರೆತಿಲ್ಲ. ಈಗ ರಾಜಕೀಯ ಕೆಸರೆರೆಚಾಟ ಮಾಡುತ್ತಿದ್ದು, ಕ್ರೀಡಾಪಟುಗಳು ಬಲಿಯಾಗುತ್ತಿದ್ದಾರೆ.
Advertisement