ನವದೆಹಲಿ: 2013 ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ದೋಷ ಮುಕ್ತರಾದರೂ ಕ್ರಿಕೆಟಿಗರಾದ ಎಸ್. ಶ್ರೀಶಾಂತ್, ಅಂಕಿತ್ ಚೌವಾಣ್ ಮತ್ತು ಅಜಿತ್ ಚಾಂಡೀಲಾ ಅವರಿಗೆ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಈಗಲೇ ಹಿಂಪಡೆಯುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಹೇಳಿದೆ.
2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಎಸ್. ಶ್ರೀಶಾಂತ್, ಅಂಕಿತ್ ಚೌವಾಣ್ ಮತ್ತು ಅಜಿತ್ ಚಾಂಡೀಲಾ ಸೇರಿದಂತೆ 36 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ನಂತರ ಆರೋಪ ಸಾಬೀತಾಗಲು ಯಾವುದೇ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಶನಿವಾರ ಪಟಿಯಾಲಾ ಹೌಸ್ ಕೋರ್ಟ್ ಪ್ರಸ್ತುತ ಪ್ರಕರಣದ ಎಲ್ಲ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ಪ್ರಕಟಿಸಿತ್ತು.
ಆದರೆ ಈ ಆಟಗಾರರು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೋಷ ಮುಕ್ತರಾಗಿದ್ದರೂ ಸದ್ಯ ಇವರ ಮೇಲಿರುವ ನಿಷೇಧಾಜ್ಞೆಯನ್ನು ಹಿಂಪಡೆಯುವುದಿಲ್ಲ.ಆದಾಗ್ಯೂ, ಆಟಗಾರರ ಬಗ್ಗೆ ಸ್ವತಂತ್ರ ತನಿಖೆ ನಡೆಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳುವುದು ಎಂದು ಬಿಸಿಸಿಐ ಶನಿವಾರ ಹೇಳಿಕೆ ನೀಡಿದೆ.
ಹಗರಣದಲ್ಲಿ ತನಿಖೆಗೊಳಗಾಗಿದ್ದ ಈ ಮೂವರು ಆಟಗಾರರು ಜೈಲುವಾಸ ಅನುಭವಿಸಿದ್ದರು. ಅದರಲ್ಲಿ ಶ್ರೀಶಾಂತ್ ಮತ್ತು ಚೌಹಾಣ್ ಬಿಸಿಸಿಐ ಇಂದ ಅಜೀವ ನಿಷೇಧಕ್ಕೊಳಪಟ್ಟವರಾಗಿದ್ದಾರೆ.
Advertisement