ನವದೆಹಲಿ: ಹಾಕಿ ಇಂಡಿಯಾ ಅಧ್ಯಕ್ಷರಾದ ನರೇಂದ್ರ ಬಾತ್ರಾ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಅಧ್ಯಕ್ಷ ಎನ್. ರಾಮಚಂದ್ರನ್ ಅವರು ರು.10 ಕೋಟಿ ಪರಿಹಾರಕ್ಕೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ, ಬಾತ್ರಾ ಅವರು, ರಾಮಚಂದ್ರನ್ ವಿರುದ್ಧ ಲಂಚದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಕುಪಿತಗೊಂಡಿರುವ ರಾಮಚಂದ್ರನ್, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರಲ್ಲದೆ, 15 ದಿನಗಳಲ್ಲಿ ತಾವು ಕೇಳಿರುವ ಪರಿಹಾರವನ್ನೂ ನೀಡುವಂತೆ ನೋಟಿಸ್ ಕಳುಹಿಸಿದ್ದಾರೆ. ಬಾತ್ರಾ ಅವರ ಆರೋಪಗಳನ್ನು `ದುರುದ್ದೇಶಪೂರಿತ' ಎಂದು ಬಣ್ಣಿಸಿರುವ ಅವರು, `ಬಾತ್ರಾ ಹೇಳಿರುವ ನನ್ನ ವಿರುದ್ಧದ ಎಲ್ಲಾ ಹೇಳಿಕೆಗಳೂ ತಪ್ಪು.ಸಾರ್ವಜನಿಕರ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧೀನದಲ್ಲಿರುವ ಎಲ್ಲಾ ಸದಸ್ಯರು, ಸಂಸ್ಥೆಗಳ ಕಣ್ಣಿಗೆ ನಾನು ಹಗುರವಾಗುವಂಥ ಹೇಳಿಕೆಗಳನ್ನು ಅವರು ನೀಡಿದ್ದಾರೆ' ಎಂದಿದ್ದಾರೆ.
ಮಾನನಷ್ಟ ಮೊಕದ್ದಮೆ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ರಾಮಚಂದ್ರನ್ ಅವರ ವಕೀಲ ಹರಿಶಂಕರ್ ಮಣಿ, `ನಮ್ಮ ಕಕ್ಷಿದಾರರ ವಿರುದ್ಧ ಮಾಡಿರುವ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದರು.
Advertisement