ಮೆಲ್ಬರ್ನ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ವಿಶ್ವಕಪ್ ಕ್ರಿಕೆಟ್ ಕ್ವಾರ್ಟರ್ ಫೈನಲ್ ನಡೆಯುತ್ತಿದ್ದರೆ ಇತ್ತ ಟ್ವೀಟರ್ನಲ್ಲಿ ರಬೀಂದ್ರನಾಥ್ ಟಾಗೋರ್ ಬಗ್ಗೆ ಭಾರೀ ಟ್ವೀಟ್ಗಳು ಹರಿದಾಡುತ್ತಿವೆ. ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ #IndvsBan ಎಂಬ ಪದ ಟ್ರೆಂಡಿಂಗ್ ಆದರೆ, ಕೊಹ್ಲಿ ವಿಕೆಟ್ ಗಳಿಸಿದ್ದಕ್ಕಾಗಿ ಬಾಂಗ್ಲಾ ಅಭಿಮಾನಿಗಳು ರುಬೆಲ್ ಹೊಸೈನ್ನ್ನು ಕೊಂಡಾಡುತ್ತಿದ್ದಾರೆ.
ಅದೇ ವೇಳೆ #NationalAnthem ಸದ್ಯ ಟ್ರೆಂಡಿಂಗ್ ಲಿಸ್ಟ್ನಲ್ಲಿ ಜಾಗಪಡೆದುಕೊಂಡಿದೆ. #NationalAnthem ಯಾಕೆ ಇವತ್ತು ಟ್ರೆಂಡಿಂಗ್ ಅನ್ನೋದಕ್ಕೆ ಕಾರಣ ಏನು ಗೊತ್ತಾ? ಭಾರತದ ರಾಷ್ಟ್ರಗೀತೆಯಾದ ಜನಗಣಮನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಯಾದ ಅಮರ್ ಸೊನರ್ ಬಾಂಗ್ಲಾ (ನನ್ನ ಬಂಗಾರದ ಬಾಂಗ್ಲಾ) ಎಂಬ ಗೀತೆಯನ್ನು ರಚಿಸಿದ್ದು ನೋಬೆಲ್ ಪ್ರಶಸ್ತಿ ವಿಜೇತ ರಬೀಂದ್ರನಾಥ್ ಟಾಗೋರ್.
ಎರಡು ದೇಶಗಳ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದರೂ ಅಲ್ಲೊಂದು ಭಾವನಾತ್ಮಕ ಸಂಬಂಧ ಉಳಿದುಕೊಂಡಿದೆ.
1950ರ ಜನವರಿ 24ರಂದು ಜನಗಣಮನ ನಮ್ಮ ರಾಷ್ಟ್ರಗೀತೆಯಾಗಿ ಆಯ್ಕೆಯಾಗಿತ್ತು.
1905ರಲ್ಲಿ ಲಾರ್ಡ್ ಜಾರ್ಜ್ ಕರ್ಜನ್ ಬಾಂಗ್ಲಾವನ್ನು ಮೊದಲ ಬಾರಿ ವಿಭಜನೆ ಮಾಡಿದಾಗ ಅಮರ್ ಶೊನರ್ ಬಾಂಗ್ಲಾ ಗೀತೆ ರಚಿಸಲ್ಪಟ್ಟಿತ್ತು.
1971ರಲ್ಲಿ ಬಾಂಗ್ಲಾ ಸ್ವತಂತ್ರಗೊಂಡಾಗ ಈ ಹಾಡನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು.
ಇವತ್ತು ಟ್ವೀಟರ್ನಲ್ಲಿ ರಾಷ್ಟ್ರಗೀತೆ ಬಗ್ಗೆ ಸುಮಾರು 5,000 ಟ್ವೀಟ್ ಗಳಿದ್ದು, ರಬೀಂದ್ರನಾಥ್ ಟಾಗೋರ್ ಬಗ್ಗೆ2,000 ಟ್ವೀಟ್ಗಳು ಟ್ವೀಟ್ ಮಾಡಲ್ಪಟ್ಟಿವೆ.
ಗೂಗಲ್ ಡೂಡಲ್
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ 6 ಬ್ಯಾಟಿಂಗ್ ಶಾಟ್ಗಳ ಚಿತ್ರದ ಮೇಲೆ ಉಭಯ ರಾಷ್ಟ್ರಗಳ ಧ್ವಜದ ಬಣ್ಣದಿಂದ ಅದ್ದಿದ ಡೂಡಲ್ನ್ನು ಗೂಗಲ್ ರಚಿಸಿದೆ.
Advertisement