ಮೈಸೂರು: ಅಮೋಘ ಫಾರ್ಮ್ ನಲ್ಲಿರುವ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ (148: 257 ಎಸೆತ, 11 ಬೌಂಡರಿ 2 ಸಿಕ್ಸರ್) ಅವರ ಭವ್ಯ ಶತಕದ ನೆರನಿಂದಾಗಿ ಪ್ರವಾಸಿ ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಮೇಲುಗೈ ಸಾ„ಸಿದೆಯಾದರೂ, ಬಂಗಾಳ ಕೊಲ್ಲಿಯಲ್ಲಿನ ವಾಯಭಾರ ಕುಸಿತದಿಂದಾಗಿ ಸುರಿಯುತ್ತಿರುವ ಮಳೆಯು ವಿನಯ್ ಪಡೆಯ ಗೆಲುವಿನ ಆಸೆಗೆ ತಣ್ಣೀರೆರಚಿದಂತಾಗಿದೆ.
ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟ ಮಂದ ಬೆಳಕು ಮತ್ತು ಕೆಲ ಹೊತ್ತಿನ ಮಳೆಯಿಂದಾಗಿ ಗಲಿಬಿಲಿಗೊಂಡಿತು.
ಉತ್ತಪ್ಪ ಈ ಋತುವಿನಲ್ಲಿ ದಾಖಲಿಸಿದ ಸತತ ಎರಡನೇ ಶತಕದಿಂದಾಗಿ 128 ಓವರ್ಗಳಲ್ಲಿ 9 ವಿಕೆಟ್ಗೆ 400 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆ ಮೂಲಕ 168 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಇದಕ್ಕೆ ಪ್ರತಿಯಾಗಿ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ಒಡಿಶಾ 2 ಓವರ್ಗಳಲ್ಲಿ ಮೂರನೇ ದಿನದಂದು ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 2 ಓವರ್ಗಳಲ್ಲಿ ಯಾವುದೇ ರನ್ ಗಳಿಸದೆ ವಿಕೆಟ್ ಒಂದನ್ನು ಕಳೆದುಕೊಂಡಿತ್ತು.
ಇನ್ನಿಂಗ್ಸ್ ಮೊದಲ ಓವರ್ನ ನಾಲ್ಕನೇ ಎಸೆತದಲ್ಲಿ ಆರಂಭಿಕ ರಾಜೇಶ್ ಧುಪೆರ್ (0) ವಿನಯ್ ಕುಮಾರ್ ಬೌಲಿಂಗ್ನಲ್ಲಿ ವಿಕೆಟ್ಕೀಪರ್ ಸಿ.ಎಂ.ಗೌತಮ್ ಗೆ ಕ್ಯಾಚಿತ್ತು ನಿರ್ಗಮಿಸಿದರು.
ಮಿಂಚಿದ ಉತ್ತಪ್ಪ: ಇನ್ನು ಪಂದ್ಯದ ಮೊದಲ ದಿನದಂದೇ ಪ್ರವಾಸಿಗರನ್ನು 232 ರನ್ಗಳಿಗೆ ಕಟ್ಟಿಹಾಕಿದ್ದ ಕರ್ನಾಟಕ,ಎರಡನೇ ದಿನದಂದು 3 ಕೆಟ್ಗೆ 255 ರನ್ ಮಾಡಿತ್ತು. ಭಾನುವಾರ ಅರ್ಧಶತಕ ದಾಖಲಿಸುವ ಮೂಲಕ ರಾಜ್ಯದ ಇನ್ನಿಂಗ್ಸ್ ಮುನ್ನಡೆಗೆ ನೆರವಾಗಿದ್ದ ರಾಬಿನ್ ಉತ್ತಪ್ಪ, ಒಡಿಶಾ ಬೌಲರ್ ಗಳನ್ನು ಮತ್ತೊಮ್ಮೆ ಕಾಡಿದರು.
ಕ್ರಮವಾಗಿ 83 ಮತ್ತು 52 ರನ್ ಮಾಡಿ ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ರಾಬಿನ್ ಉತ್ತಪ್ಪ ಮತ್ತು ಕರುಣ್ ನಾಯರ್ ಮತ್ತೆ ಅದ್ಭುತ ಇನ್ನಿಂಗ್ಸ್ ಕಟ್ಟಲು ಮುಂದಾದರಾದರೂ, ಧೀರಜ್ ಸಿಂಗ್, ಕರುಣ್ ವಿಕೆಟ್ ಎಗರಿಸಿದರು. 73 ರನ್ ಮಾಡಿದ್ದ ಕರುಣ್ ನಾಯರ್ ಪ್ರತೀಕ್ ದಾಸ್ಗೆ ಕ್ಯಾಚಿತ್ತು ಕ್ರೀಸ್ ತೊರೆದದ್ದು 169 ರನ್ಗಳ ಭರ್ಜರಿ ಜತೆಯಾಟವನ್ನು ಬೇರ್ಪಡಿಸಿತು.
ಕರುಣ್ ನಿರ್ಗಮನದ ನಂತರ ಬಂದ ಸ್ಟುವರ್ಟ್ ಬಿನ್ನಿ ಬಿಪ್ಲಬ್ ಸಮಂಟ್ರೆಗೆ ಬೌಲ್ಡ್ ಆಗಿ ಕ್ರೀಸ್ ತೊರೆದರು. ಆನಂತರ ಬಂದ ಸಿ.ಎಂ. ಗೌತಮ್ (20) ಹೆಚ್ಚೇನೂ ಆಡಲಿಲ್ಲ. ತದನಂತರ ಬಂದ ಶ್ರೇಯಸ್ ಗೋಪಾಲ್ (13) ಪ್ರಧಾನ್ಗೆ ಬೌಲ್ಡ್ ಆದರೆ, ಅವರ ಬೆನ್ನಿಗೇ ರಾಬಿನ್ ಉತ್ತಪ್ಪ ಪ್ರಧಾನ್ಗೆ ಬೌಲ್ಡ್ ಆಗಿ ಕೇವಲ 2 ರನ್ ಗಳ ಅಂತರದಿಂದ 150 ರನ್ ಸಾಧನೆಯಿಂದ ವಂಚಿತರಾದರು. ಆದರೆ, ರಾಜಸ್ಥಾನ ವಿರುದ್ಧ ಭರ್ಜರಿ ಶತಕ ದಾಖಲಿಸಿ ತಂಡದ ಅಪೂರ್ವ ಗೆಲುವಿಗೆ ನೆರವಾಗಿದ್ದ ಉತ್ತಪ್ಪ, ಮತ್ತೊಮ್ಮೆ ರಾಜ್ಯದ ಪಾಲಿಗೆ ಆಪದ್ಬಾಂಧವನಾದರು.
ಸ್ಕೋರ್ ವಿವರ
ಒಡಿಶಾ ಮೊದಲ ಇನ್ನಿಂಗ್ಸ್ 84.1 ಓವರ್ಗಳಲ್ಲಿ 232 ಕರ್ನಾಟಕ ಮೊದಲ ಇನ್ನಿಂಗ್ಸ್ 128 ಓವರ್ಗಳಲ್ಲಿ 400/9 (ಡಿಕ್ಲೇರ್) (ಭಾನುವಾರ 3 ವಿಕೆಟ್ಗೆ 255) ರಾಬಿನ್ ಉತ್ತಪ್ಪ ಬಿ ಪ್ರಧಾನ್ 148 ಕರುಣ್ ನಾಯರ್ ಸಿ ದಾಸ್ ಬಿ ಧೀರಜ್ 73 ಸ್ಟುವರ್ಟ್ ಬಿನ್ನಿ ಬಿ ಬಿಪ್ಲಬ್ ಸಮಂಟ್ರೆ 04 ಸಿ.ಎಂ. ಗೌತಮ್ ಸಿ ಪ್ರಧಾನ್ ಬಿ ಧೀರಜ್ 20 ಶ್ರೇಯಸ್ ಗೋಪಾಲ್ ಬಿ ಪ್ರಧಾನ್ 13 ವಿನಯ್ ಕುಮಾರ್ ಅಜೇಯ 13 ಜೆ. ಸುಚಿತ್ ಸಿ/ಬಿ ಧೀರಜ್ 04 ಉದಿತ್ ಬಿ ಪಟೇಲ್ ಅಜೇಯ 01 ಇತರೆ: (ಬೈ-3, ಲೆಬೈ-1, ವೈಡ್-1, ನೋಬಾಲ್-2) 07 ವಿಕೆಟ್ ಪತನ: 4-297 (ನಾಯರ್).5-310 (ಬಿನ್ನಿ), 6-353 (ಗೌತಮï), 7-372 (ಶ್ರೇಯಸ್), 8-385 (ಉತ್ತಪ್ಪ), 9-390 (ಸುಚಿತ್) ಬೌಲಿಂಗ್ ವಿವರ: ಬಸಂತ್ ಮೊಹಾಂತಿ 28-8-58-2, ಧೀರಜ್ ಸಿಂಗ್ 41-4-156-3, ಅಮಿತ್ ದಾಸ್ 5-0-25-0, ಸೂರ್ಯಕಾಂತ್ ಪ್ರಧಾನ್ 28-5-94-3, ಬಿಪ್ಲಬ್ ಸಮಂಟ್ರೆ 21-2-47-1, ಗೋವಿಂದ ಪೊದ್ದರ್ 5-1-16-0
ಒಡಿಶಾ ಎರಡನೇ ಇನ್ನಿಂಗ್ಸ್ 2 ಓವರ್ಗಳಲ್ಲಿ 0/1 ರಾಜೇಶ್ ಧುಪೆರ್ ಸಿ ಗೌತಮ್ ಬಿ ವಿನಯ್ 00 ನಟರಾಜ್ ಬೆಹೇರಾ ಬ್ಯಾಟಿಂಗ್ 00 ಗೋವಿಂದ ಪೊದ್ದರ್ ಬ್ಯಾಟಿಂಗ್ 00
ಬೌಲಿಂಗ್ ವಿವರ: ವಿನಯ್ ಕುಮಾರ್ 1-1-0-1, ಶ್ರೇಯಸ್ ಗೋಪಾಲ್ 1-1-0-0 2ನೇ ಸ್ಥಾನ ಸಾಧ್ಯತೆ ಮಳೆಯಿಂದಾಗಿ ಕೊನೆಯ ದಿನದಾಟ ರದ್ದಾದರೆ ಪಂದ್ಯ ಡ್ರಾ ಆಗಲಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಗಳಿಸಿದ ಮುನ್ನಡೆಯಿಂದಾಗಿ 3 ಅಂಕ ಕರ್ನಾಟಕಕ್ಕೆ ಲಭಿಸಲಿದೆ. ಇದರಿಂದ `ಎ' ಅಂಕಪಟ್ಟಿಯಲ್ಲಿ ಪ್ರಸಕ್ತ 14 ಅಂಕಗಳಿಂದ 3ನೇ ಸ್ಥಾನದಲ್ಲಿರುವ ರಾಜ್ಯ, ಒಟ್ಟಾರೆ 17 ಅಂಕ ಗಳಿಸಿ 2ನೇ ಸ್ಥಾನಕ್ಕೆ ಲಗ್ಗೆ ಇಡಲಿದೆ. ಆದರೆ, ಹೀಗಾಗಲು, ಅಂಕಪಟ್ಟಿಯಲ್ಲಿ ಸದ್ಯಕ್ಕೆ 2ನೇ ಸ್ಥಾನದಲ್ಲಿರುವ ವಿದರ್ಭ ತಂಡದ ಬಂಗಾಳ ವಿರುದ್ಧದ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತ. ಆ ಪಂದ್ಯ ಡ್ರಾ ಆದರೆ ಕರ್ನಾಟಕಕ್ಕೆ 2ನೇ ಸ್ಥಾನ ಸುಲಭ.ಹಾಗೊಮ್ಮೆ ಬಂಗಾಳ ವಿರುದ್ಧ ವಿದರ್ಭ ಗೆದ್ದರೆ, ಕರ್ನಾಟಕ 3ನೇ ಸ್ಥಾನದಲ್ಲೇ ಉಳಿಯಲಿದೆ.
Advertisement