ಗೋಣಿಕೊಪ್ಪಲು: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಕ್ರಿಕೆಟ್ ಪ್ರತಿಭೆಗಳು ಹೊರಹೊಮ್ಮುತ್ತಿದ್ದು,ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ತಾನು ಬಿಡುವು ಮಾಡಿಕೊಂಡು ಕೆಲವೊಂದು ತಾಂತ್ರಿಕ ಕೌಶಲ್ಯವನ್ನು ಬೇಸಿಗೆ ಶಿಬಿರ ಅಥವಾ ಬೆಂಗಳೂರಿನಲ್ಲಿ ನಡೆಯುವ ಶಿಬಿರಗಳಲ್ಲಿ ಹೇಳಿಕೊಡುವುದಾಗಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ವಚನಿಸಿದ್ದಾರೆ.
ಗುರುವಾರ ಇಲ್ಲಿನ ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್)ಗೆ ತಮ್ಮ ಭಾವಿಪತ್ನಿ ಶೀತಲ್ ಅವರೊಂದಿಗೆ ಆಗಮಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ``ವಿದ್ಯಾರ್ಥಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ. ಭವಿಷ್ಯದಲ್ಲಿ ಏನಾಗಬೇಕೆಂಬ ದೃಢ ನಿರ್ಧಾರವನ್ನು ಈಗಲೇ ಮಾಡಿ, ಕೇವಲ ಉದ್ಯೋಗ ಮತ್ತು ಹಣ ಸಂಪಾದನೆಯೇ ಗುರಿಯಾಗಿರದೆ ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಜೀವನ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ'' ಎಂದು ಕಿವಿಮಾತು ಹೇಳಿದರು.
ಮುಂದಿನ ವರ್ಷ ಮದುವೆ: ``ಶೀತಲ್ ಗೌತಮ್ ಮಾಜಿ ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿಯಾಗಿದ್ದು, ಕಳೆದ ಒಂಭತ್ತು ವರ್ಷದ ಗೆಳೆತನ ನಮ್ಮದು. ಈ ಗೆಳೆತನವನ್ನು ಶಾಶ್ವತವಾಗಿಸಲು ಮುಂದಾಗಿದ್ದೇವೆ. ವಿವಾಹ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಒಟ್ಟಾರೆ ಮುಂದಿನ ವರ್ಷ ಮದುವೆ ನಿಶ್ಚಿತ. ಇನ್ನು ಮದುವೆ ಕೊಡಗು ಇಲ್ಲವೇ ಬೆಂಗಳೂರಿನಲ್ಲಿ ನಡೆಯುವ ಬಗ್ಗೆ ಗೊಂದಲವಿದೆ'' ಎಂದರು.
Advertisement