ಮಲಾಂಗ್: ಭಾನುವಾರವಷ್ಟೇ ಮುಗಿದ ಮಕೌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಹ್ಯಾಟ್ರಿಕ್ ಪ್ರಶಸ್ತಿ ಪಡೆದ ಭಾರತದ ಯುವ ಆಟಗಾರ್ತಿ ಪಿ.ವಿ. ಸಿಂಧು ಇದೀಗ ಮಂಗಳವಾರದಿಂದ ಶುರುವಾಗುತ್ತಿರುವ ಇಂಡೋನೇಷಿಯಾ ಮಾಸ್ಟರ್ಸ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಪಂದ್ಯಾವಳಿಯಲ್ಲಿ ಯೂ ಪ್ರಶಸ್ತಿ ಗೆಲ್ಲುವ ಗುರಿ ಹೊತ್ತಿದ್ದಾರೆ.
'ಮಕಾವ್ ಪಂದ್ಯಾವಳಿಯಲ್ಲಿ ತೋರಿದ ಪ್ರದರ್ಶನವನ್ನು ಇಂಡೋನೇಷಿಯಾದಲ್ಲಿಯೂ ಮುಂದುವರೆಸುವ ವಿಶ್ವಾಸವಿದೆ'' ಎಂದು ಸಿಂಧು ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಅವರು ಸ್ಥಳೀಯ ಆಟಗಾರ್ತಿ ಗ್ರೆಗೋರಿಯಾ ಮಾರಿಸ್ಕಾ ವಿರುದ್ಧ ಸೆಣಸಲಿದ್ದಾರೆ. ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕೆ. ಶ್ರೀಕಾಂತ್ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಮೊದಲ ಸುತ್ತಿನಲ್ಲಿ ಅವರು ವಿಬೊವೊ ಸೆಟ್ಯಾಲ್ಡಿ ಪುಟ್ರಾ ವಿರುದ್ಧ ಕಾದಾಡಲಿದ್ದಾರೆ. ಇತ್ತ ಭಾರತದ ಇನ್ನಿಬ್ಬರು ಯುವ ಬ್ಯಾಡ್ಮಿಂಟನ್ ಆಟಗಾರರಾದ ಎಚ್.ಎಸ್. ಪ್ರಣಯ್ ಇಂಡೋನೇಷಿಯಾದ ಪಣಜಿ ಅಹಮದ್ ಮೌಲಾನ ವಿರುದ್ಧ ಹಾಗೂ ಆರ್ಎಂವಿ ಗುರುಸಾಯಿದತ್ ಮತ್ತೋರ್ವ ಅಹ್ದಿಯಾಲ್ ಒಕ್ಟಾ ವಿರುದ್ಧ ಸೆಣಸಲಿದ್ದಾರೆ.
ಸಿಂಧುಗೆ ಬಹುಮಾನ: ಮಕಾವ್ ಟೂರ್ನಿಯಲ್ಲಿ ಗೆಲುವು ಸಾಧಿಸಿ ಸತತ 3ನೇ ಬಾರಿಗೆ ಪ್ರಶಸ್ತಿ ಪಡೆದ ಸಿಂಧುಗೆ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಸೋಮವಾರ 10 ಲಕ್ಷ ರೂ. ನಗದು ಬಹುಮಾನ ಘೋಷಿಸಿದೆ. 'ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಸಿಂಧು ಮತ್ತೊಮ್ಮೆ ಬೆಳಗಿಸಿದ್ದಾರೆ'' ಎಂದು ಬಿಎಐ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಶ್ಲಾಂಘಿಸಿದ್ದಾರೆ.
Advertisement