ಒಡಿಶಾ ಸರ್ಕಾರದ ನಿರ್ಲಕ್ಷ್ಯ; ಭರವಸೆಯ ಕ್ರೀಡಾಪಟು ದ್ಯುತಿಗೆ ಕೈ ಜಾರಿದ ಒಲಿಂಪಿಕ್ಸ್ ಅವಕಾಶ

ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಸೃಷ್ಟಿಸಿದ್ದ ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಅವರಿಗೆ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ...
ದ್ಯುತಿ ಚಂದ್
ದ್ಯುತಿ ಚಂದ್
ಭುಬನೇಶ್ವರ್: ನ್ಯಾಷನಲ್ ಅಥ್ಲೆಟಿಕ್ಸ್  ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಸೃಷ್ಟಿಸಿದ್ದ ಒಡಿಶಾದ ಓಟಗಾರ್ತಿ ದ್ಯುತಿ ಚಂದ್ ಅವರಿಗೆ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಕೈ ತಪ್ಪಿದೆ.
ಸರ್ಕಾರದ ನಿರ್ಲಕ್ಷವೇ ಇದಕ್ಕೆಲ್ಲಾ ಕಾರಣ ಎಂದು ದ್ಯುತಿ ದೂರಿದ್ದಾಳೆ. ಕಳೆದ ವರ್ಷ ಡಿಸೆಂಬರ್ 18 ರಂದು ಕೇಂದ್ರ ಕ್ರೀಡಾ ಸಚಿವಾಲಯ ಪತ್ರವೊಂದನ್ನು ಬರೆದಿತ್ತು. ಅದರಲ್ಲಿ ಟಾಪ್ ಒಲಿಂಪಿಕ್ ಪೋಡಿಯಂ ಯೋಜನೆಯಡಿಯಲ್ಲಿ ಕ್ರೀಡಾ ಅಭಿವೃದ್ಧಿ ನಿಧಿಯಿಂದ ಆರ್ಥಿಕ ಸಹಾಯ ಸಿಗುವುದಕ್ಕಾಗಿ ಅರ್ಜಿ ಸಲ್ಲಿಸುವಂತೆ ಕೋರಲಾಗಿತ್ತು. ನಾನು ಅದಕ್ಕೆ ಪ್ರತಿಕ್ರಿಯಿಸಿದ್ದರೂ ಅಲ್ಲಿಂದ ನನಗೆ ಯಾವುದೇ ಉತ್ತರ ಸಿಗಲಿಲ್ಲ. ಸರ್ಕಾರ ನನಗೆ ವಿದೇಶದಲ್ಲಿ ತರಬೇತಿ ನೀಡಿದ್ದರೆ ನನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿತ್ತು.
ನ್ಯಾಷನಲ್ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದು 16 ವರುಷಗಳ ದಾಖಲೆಯನ್ನು ಮುರಿದಿದ್ದೆ. ಆದರೆ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ 0.1 ಸೆಕೆಂಡ್‌ನ ಅಂತರದಿಂದ ನನ್ನ ಅವಕಾಶ ಕೈ ಜಾರಿ ಹೋಯಿತು.
ನಾನು ಇಷ್ಟೊಂದು ಉತ್ತಮ ಪ್ರದರ್ಶನ ನೀಡಿದರೂ ರಾಜ್ಯದ ಕ್ರೀಡಾ ಇಲಾಖೆ ನನ್ನನ್ನು ಅಭಿನಂದಿಸಿಲ್ಲ ಎಂದು ದ್ಯುತಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಜೈಪುರದ ಕುಗ್ರಾಮವೊಂದರಲ್ಲಿ ಬಡುಕುಟಂಬದಿಂದ ಬಂದ ದ್ಯುತಿ ಕಳೆದ ವರ್ಷ ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿದಾಗ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಾಯವನ್ನು ಮಾಡುವುದಾಗಿ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದರು. ಆದರೆ ನನಗೆ ಯಾವುದೇ ರೀತಿಯ ಸಹಾಯ ಸಿಗಲಿಲ್ಲ. ಸರ್ಕಾರಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ನನ್ನನ್ನು ಕಡೆಗಣಿಸಿದೆ ಎಂದು ದ್ಯುತಿ ಹೇಳಿದ್ದಾರೆ.
ಒಟ್ಟಿನಲ್ಲಿ, ಒಡಿಶಾ ಸರ್ಕಾರದ ದಿವ್ಯ ನಿರ್ಲಕ್ಷ್ಯವೇ ಭರವಸೆಯ ಕ್ರೀಡಾಪಟು ದ್ಯುತಿಯ ಸಾಧನೆಗೆ ಧಕ್ಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com