ಅಗರ್ತಲಾ: ರಿಯೊ ಒಲಿಂಪಿಕ್ಸ್ ನ ಜಿಮ್ನಾಸ್ಟ್ ವಾಲ್ಟ್ ಫೈನಲ್ ಪ್ರವೇಶಿಸಿ ಇಡೀ ವಿಶ್ವದ ಗಮನ ಸೆಳೆದಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ತವರಿಗೆ ಆಗಮಿಸಿದ್ದು, ಅವರಿಗೆ ಅದ್ದೂರಿ ಸ್ವಾಗತ ದೊರೆತಿದೆ.
ಅತ್ತ ಬ್ಯಾಡ್ಮಿಂಟನ್ ಗೆದ್ದ ಪಿವಿ ಸಿಂಧೂಗೆ ಹೈದರಾಬಾದ್ ನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿರುವಂತೆಯೇ ಇತ್ತ ತಮ್ಮ ತವರು ಅಗರ್ತಲಾಗೆ ಆಗಮಿಸಿದ ಜಿಮ್ನಾಸ್ಟ್ ದೀಪಾಕರ್ಮಾಕರ್ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸಿದ ದೀಪಾ ಪೋಷಕರು ಅವರಿಗೆ ಮತ್ತು ಕೋಚ್ ಬಿಶ್ವೇಶ್ವರ್ ನಂದಿ ಅವರಿಗೆ ಸಿಹಿ ತಿನ್ನಿಸುವ ಮೂಲಕ ಆದರದಿಂದ ಬರ ಮಾಡಿಕೊಂಡರು. ದೀಪಾ ಅವರನ್ನು ಬರ ಮಾಡಿಕೊಳ್ಳಲು ತ್ರಿಪುರಾ ಸರ್ಕಾರದ ಪ್ರತಿನಿಧಿಗಳು, ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಾವಿರಾರು ಕ್ರೀಡಾಭಿಮಾನಿಗಳು, ವಿದ್ಯಾರ್ಥಿಗಳು ಆಗಮಿಸಿದ್ದರು.
ಈ ವೇಳೆ ದೀಪಾ ಅವರನ್ನು ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಕರೆದೊಯ್ದು ಸನ್ಮಾನಿಸಲಾಯಿತು. ಸ್ವತಃ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು, ದೀಪಾ ಕರ್ಮಾಕರ್ ಹಾಗೂ ಕೋಚ್ ಬಿಸ್ವೇಶ್ವರ್ ನಂದಿ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಮಾತನಾಡಿದ ದೀಪಾ ಕರ್ಮಾಕರ್, ತಮಗೆ ದೊರೆತ ಸ್ವಾಗತ ನಿಜಕ್ಕೂ ಅದ್ಬುತವಾಗಿತ್ತು. ನನ್ನ ಮೇಲೆ ಇಷ್ಟೊಂದು ಪ್ರೀತಿ ಇಟ್ಟಿರುವ ಜನತೆಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಹಿಳಾ ಕ್ರೀಡೆಯನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದ ದೀಪಾ "ಬೇಟಿ ಬಚಾವೋ, ಭೇಟಿ ಪಡಾವೋ, ಔರ್ ಭೇಟಿ ಖಿಲಾವೋ" ಎಂದೂ ಸಂದೇಶ ಸಾರಿದರು.
ಅಂತೆಯೇ ರಿಯೊ ಒಲಿಂಪಿಕ್ಸ್ ಗೂ ಮೊದಲು ತಮಗಿದ್ದ ಸಮಸ್ಯೆಗಳನ್ನು ವಿವರಿಸಿದ ದೀಪಾ, ಕ್ರೀಡಾಕೂಟಕ್ಕೂ ಮೊದಲು ನಾವು ಅವಧಿ ಮೀರಿದ ಹಾಗೂ ತುಂಬಾ ಹಳೆಯದಾದ ಕ್ರೀಡಾ ಪರಿಕರಗಳನ್ನು ಬಳಕೆ ಮಾಡುತ್ತಿದ್ದೆವು. ಇಂದಿಗೂ ಕೂಡ ನಮಗೆ ಸೂಕ್ತ ಕ್ರೀಡಾ ಪರಿಕರಗಳಿಲ್ಲ ಎಂದು ಹೇಳಿದ್ದಾರೆ.
ರಿಯೊ ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ಮಹಿಳೆಯರ ವಿಭಾಗ ಫೈನಲ್ ಪ್ರವೇಶಿಸಿದ್ದ ದೀಪಾ, ಭಾರತಕ್ಕೆ ಮೊದಲ ಪದಕ ದೊರಕಿಸಿಕೊಡುವ ಭರವಸೆ ಮೂಡಿಸಿದ್ದರು. ಆದರೆ ಫೈನಲ್ ನಲ್ಲಿ 4ನೇ ಸ್ಥಾನ ಪಡೆಯುವ ಮೂಲಕ ಅದು ನಿರಾಸೆಯಾಗಿತ್ತು.
Advertisement