ಮುಂಬೈ: ಕಿರಿಯರ ಕ್ರಿಕೆಟ್ ತಂಡದ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಮತ್ತಷ್ಟು ವೃತ್ತಿಪರತೆಯನ್ನು ತರುವ ನಿಟ್ಟಿನಲ್ಲಿ ರೊಟೇಟಿಂಗ್ ಸ್ಟ್ರೈಕ್ ವ್ಯವಸ್ಥೆ ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿರುವುದಾಗಿ ಕಿರಿಯರ ಕ್ರಿಕೆಟ್ ತಂಡದ ತರಬೇತುದಾರ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
19 ವರ್ಷದೊಳಗಿನವರ ವಿಶ್ವಕಪ್ನಲ್ಲಿ ಪಾಲ್ಗೊಳ್ಳುತ್ತಿರುವ ಭಾರತ ತಂಡದೊಟ್ಟಿಗೆ ಬಾಂಗ್ಲಾದೇಶಕ್ಕೆ ತೆರಳುವ ಮುನ್ನಾ ದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ``ಕ್ರೀಸ್ ನಲ್ಲಿ ಹೊಡಿ, ಬಡಿ ತಂತ್ರಗಾರಿಕೆಯೇ ಜನಾಕರ್ಷಣೆ ಗಳಿಸಿರುವ ಈ ಕಾಲಘಟ್ಟದಲ್ಲಿ ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳು ಯಾವಾಗಲೂ ದೊಡ್ಡ ಹೊಡೆತಗಳತ್ತಲೇ ಗಮನ ಹರಿಸುತ್ತಾರೆ. ಅದರ ಜತೆಗೇ, ಒಂಟಿ ರನ್ ಕದಿಯುವ ಬಗ್ಗೆ ಅವ-ರನ್ನು ಹೆಚ್ಚು ಸೆಳೆಯಬೇಕಿದೆ'' ಎಂದು ತಿಳಿಸಿದರು.
ಕಿರಿಯರ ವಿಶ್ವಕಪ್ ಪಂದ್ಯಾವಳಿಯು ಇದೇ ತಿಂಗಳು 22ರಿಂದ ಫೆಬ್ರವರಿ 14ರವರೆಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದು, ಒಟ್ಟು ೧೬ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಭದ್ರತೆಯ ಕಾರಣ ಮುಂದೊಡ್ಡಿ ಆಸ್ಟ್ರೇಲಿಯಾ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದೆ.
Advertisement