ತಿರುವನಂತಪುರಂ: ಭಾರತದ ಖ್ಯಾತ ಲಾಂಗ್ ಜಂಪ್ ತಾರೆ ಮತ್ತು ಕೇರಳ ಕ್ರೀಡಾ ಸಮಿತಿ ಅಧ್ಯಕ್ಷೆ ಅಂಜು ಬಾಬಿ ಜಾರ್ಜ್ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.
ಕೇರಳದ ಕ್ರೀಡಾಸಚಿವ ಇ.ಪಿ.ಜಯರಾಜನ್ ಮತ್ತು ಅವರ ಬೆಂಬಲಿಗರೊಂದಿಗಿನ ಘರ್ಷಣೆ ಮತ್ತು ಆರೋಪಗಳಿಂದ ನೊಂದಿರುವ ಅಂಜು ಬಾಬಿ ಜಾರ್ಜ್ ಬುಧವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೇವಲ ಅಂಜು ಮಾತ್ರವಲ್ಲದೇ ಅವರ ಜೊತೆಗೆ ವಿವಿಧ ಸಮಿತಿಗಳಲ್ಲಿದ್ದ ಎಲ್ಲ 13 ಸದಸ್ಯರೂ ರಾಜೀನಾಮೆ ನೀಡಿದ್ದಾರೆ.
ಇನ್ನು ರಾಜಿನಾಮೆ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅಂಜು ಬಾಬಿ ಜಾರ್ಜ್ "ವೃಥಾರೋಪಗಳು ಮತ್ತು ತಪ್ಪು ತಿಳಿವಳಿಕೆಗಳಿಂದ ಬೇಸತ್ತು ನಾನು ರಾಜೀನಾಮೆ ನೀಡಿದ್ದೇನೆ. ಯಾರು ಬೇಕಾದರೂ ಕ್ರೀಡೆಯನ್ನು ಕೊಲ್ಲಬಹುದು, ಕ್ರೀಡಾ ತಾರೆಯನ್ನು ಕೊಲ್ಲಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಯಾರೂ ಬಯಸುವುದಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ಎಲ್ಡಿಎಫ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅಂಜು ಬಾಬಿ ಜಾರ್ಜ್ ಪದ್ಧತಿಯಂತೆ ಕೇರಳದ ನೂತನ ಕ್ರೀಡಾಸಚಿವರನ್ನು ಭೇಟಿಯಾಗಿದ್ದರು. ಆ ವೇಳೆ ಅಂಜು ಅವರನ್ನು ಭ್ರಷ್ಟಾಚಾರಿ ಎಂದು ಸಚಿವರು ಇಪಿ ಜಯರಾಜನ್ ನಿಂದಿಸಿದ್ದಾರೆಂದು ಅಂಜು ಆರೋಪಿಸಿದ್ದರು. ಇದಕ್ಕೆ ಜಯರಾಜನ್ ಪ್ರತಿಕ್ರಿಯೆ ನೀಡಿ, ನಾನು ಅಂಜು ಅವರಿಗೆ ಬೇಸರವಾಗುವಂತೆ ಏನೂ ಹೇಳಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದರು.
Advertisement